ಇತ್ತೀಚಿನ ಸುದ್ದಿ
ಹಬ್ಬದ ಸ್ಪೆಷಲ್: ಕಾರವಾರ- ಉಡುಪಿ- ಮಂಗಳೂರು- ಬೆಂಗಳೂರಿಗೆ ವಿಶೇಷ ರೈಲು; ವೇಳಾಪಟ್ಟಿ ರೆಡಿ
20/03/2026, 12:21
ಮಂಗಳೂರು(reporterkarnataka.com): ಯುಗಾದಿ, ರಂಜಾನ್ ಹಬ್ಬಕ್ಕೆ ಊರಿಗೆ ಹೋದವರು ವಾಪಸ್ ಬೆಂಗಳೂರು ನಗರಕ್ಕೆ ಆಗಮಿಸಲು ಅನುಕೂಲವಾಗುವಂತೆ ನೈಋತ್ಯ ರೈಲ್ವೆ ವಿಶೇಷ ರೈಲು ವ್ಯವಸ್ಥೆ ಮಾಡಿದೆ. ಮಡಗಾಂವ್ನಿಂದ ಹೊರಡಲಿರುವ ರೈಲು ಕಾರವಾರ, ಉಡುಪಿ, ಮಂಗಳೂರು ಮೂಲಕ ಬೆಂಗಳೂರು ನಗರ ತಲುಪಲಿದೆ.
ಈ ಕುರಿತು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.ಯುಗಾದಿ ಹಬ್ಬದ ಪ್ರಯುಕ್ತ ಬೆಂಗಳೂರಿನಿಂದ ಊರಿಗೆ ಬಂದಿರುವ ಕರಾವಳಿ ಭಾಗದ ಜನರು ವಾಪಾಸು ಬೆಂಗಳೂರಿಗೆ ತೆರಳಲು ರೈಲು ಸೀಟುಗಳ ಲಭ್ಯವಿಲ್ಲ ಎಂಬ ದೂರುಗಳ ಮೇರೆಗ ಮತ್ತೊಮ್ಮೆ ವಿಶೇಷ ರೈಲು ಸೇವೆಯನ್ನು ಒದಗಿಸಲಾಗಿದೆ ಎಂದು ಹೇಳಿದ್ದಾರೆ.
ಈ ರೈಲು ಮಾರ್ಚ್ 22ರ ಭಾನುವಾರ ಮಡಗಾಂವ್-ಕಾರವಾರ-ಉಡುಪಿ-ಮಂಗಳೂರು ಮೂಲಕ ಸಂಚಾರವನ್ನು ನಡೆಸಲಿದೆ. ಕರಾವಳಿ ಭಾಗದ ಪ್ರಯಾಣಿಕರು ಈ ವಿಶೇಷ ರೈಲು ಸೇವೆ ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
*ವಿಶೇಷ ರೈಲು ವೇಳಾಪಟ್ಟಿ:*
ಈ ವಿಶೇಷ ರೈಲು ಮಡಗಾಂವ್ನಿಂದ ಬೆಳಗ್ಗೆ 11ಕ್ಕೆ ಹೊರಡಲಿದೆ. ಕಾರವಾರಕ್ಕೆ ಬೆಳಗ್ಗೆ 11:28, ಗೋಕರ್ಣ ಮಧ್ಯಾಹ್ನ 12:30, ಮುರ್ಡೇಶ್ವರ ಮಧ್ಯಾಹ್ನ 1:40, ಬೈಂದೂರು ಮಧ್ಯಾಹ್ನ 2:12, ಕುಂದಾಪುರ ಮಧ್ಯಾಹ್ನ 2:40, ಬಾರ್ಕೂರು ಮಧ್ಯಾಹ್ನ 2:55, ಉಡುಪಿ ಮಧ್ಯಾಹ್ನ 3:30, ಮುಲ್ಕಿ ಮಧ್ಯಾಹ್ನ 3:58, ಮಂಗಳೂರಿನ ಸುರತ್ಕಲ್ ಮಧ್ಯಾಹ್ನ 4:14 ತಲುಪಲಿದೆ.
ಬಂಟ್ವಾಳ ಸಂಜೆ 6:00, ಕಬಕ ಪುತ್ತೂರು ಸಂಜೆ 6:28, ಸುಬ್ರಹ್ಮಣ್ಯ ಸಂಜೆ 7:50, ಬೆಂಗಳೂರು ನಗರದ ಕಂಟೋನ್ಮೆಂಟ್ ರೈಲು ನಿಲ್ದಾಣಕ್ಕೆ ಬೆಳಗ್ಗೆ 5:00ಕ್ಕೆ ತಲುಪಲಿದೆ.
ಯುಗಾದಿ ಹಬ್ಬದ ಪ್ರಯುಕ್ತ ಬೆಂಗಳೂರಿನಿಂದ ಕರಾವಳಿಗೆ ಬರುವ ಪ್ರಯಾಣಿಕರಿಗೆ ವಿಶೇಷ ರೈಲು ಒದಗಿಸಲಾಗಿತ್ತು. ಆ ರೈಲು ಮಧ್ಯಾಹ್ನದ ಹೊತ್ತು ಹೊರಡಿತ್ತಾದರೂ 700ಕ್ಕೂ ಅಧಿಕ ಸೀಟುಗಳು ಭರ್ತಿಯಾಗಿ ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾಗಿತ್ತು.
ಇದೀಗ ವಾಪಾಸು ಬೆಂಗಳೂರಿಗೆ ತೆರಳುವ ಕರಾವಳಿ ಭಾಗದ ಪ್ರಯಾಣಿಕರಿಗೆ ಸುಲಭವಾಗುವಂತೆ ಮತ್ತು ಸೋಮವಾರದಂದು ತಮ್ಮ ಕೆಲಸ ಕಾರ್ಯಗಳಿಗೆ ಹಾಜರಾಗುವಂತೆ ಸಮಯವನ್ನು ರೈಲ್ವೆ ಇಲಾಖೆ ಒದಗಿಸಿದ್ದು ಉಪಯುಕ್ತವಾಗಿದೆ. ಈ ಸೇವೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಕೋರಿಕೆ ಎಂದು ಸಂಸದರು ಹೇಳಿದ್ದಾರೆ.












