ಇತ್ತೀಚಿನ ಸುದ್ದಿ
ಮಂಗಳೂರಿಗೆ ಬರೋಲ್ಲ ಅಡುಗೆ ಅನಿಲ ಹೊತ್ತ ಶಿವಾಲಿಕ್ ಹಡಗು: ಗುಜರಾತಿನಲ್ಲೇ ಇಳಿಸಲಿದೆ ಎಲ್ ಪಿಜಿ
20/03/2026, 11:13
ಮಂಗಳೂರು(reporterkarnataka.com): ಪಶ್ಚಿಮ ಏಷ್ಯಾದ ಯುದ್ಧ ಪೀಡಿತ ಪ್ರದೇಶದಲ್ಲಿರುವ ಹೊರ್ಮುಜ್ ಜಲಸಂಧಿಯ ಮೂಲಕ ಸಾಗಿ ಗುಜರಾತಿನ ಮುಂದ್ರಾ ಬಂದರನ್ನು ಸೋಮವಾರ ತಲುಪಿದ್ದ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್ಪಿಜಿ) ಹೊತ್ತ ಶಿವಾಲಿಕ್ ಹಡಗು ನವಮಂಗಳೂರು ಬಂದರಿಗೆ ಬರುತ್ತಿಲ್ಲ.
ಶಿವಾಲಿಕ್ ಹಡಗಿನಲ್ಲಿದ್ದ ಎಲ್ಪಿಜಿಯಲ್ಲಿ ಸುಮಾರು 20 ಸಾವಿರ ಟನ್ ಅನ್ನು ಮುಂದ್ರಾ ಬಂದರಿನಲ್ಲಿ ಇಳಿಸಿ, ಸುಮಾರು 26 ಸಾವಿರ ಟನ್ ಎಲ್ಪಿಜಿಯೊಂದಿಗೆ ಇಲ್ಲಿನ ನವಮಂಗಳೂರು ಬಂದರಿಗೆ ಬುಧವಾರ ಬರಲಿದೆ ಎಂಬ ಮಾಹಿತಿ ಇತ್ತು. ಆದರೆ ಆ ಹಡಗು ಇಲ್ಲಿಗೆ ಬರುತ್ತಿಲ್ಲ’ ಎಂದು ನವಮಂಗಳೂರು ಬಂದರಿನ ಮೂಲಗಳು ತಿಳಿಸಿವೆ.
‘ಶಿವಾಲಿಕ್ ಹಡಗಿನಲ್ಲಿದ್ದ ಭಾಗಶಃ ಎಲ್ಪಿಜಿಯನ್ನು ಮುಂದ್ರಾ ಬಂದರಿನಲ್ಲಿ ಇಳಿಸಲಾಗಿದೆ. ಇನ್ನುಳಿದ ಎಲ್ಪಿಜಿ ಅನ್ನು ಗುಜರಾತಿನ ದಹೇಜ್ ಟರ್ಮಿನಲ್ನಲ್ಲಿ ಇಳಿಸಲಾಗುತ್ತಿದೆ’ ಎಂದು ಮೂಲಗಳಿಂದ ತಿಳಿದುಬಂದಿದೆ.
ಎಚ್ಪಿಸಿಎಲ್ ಸಂಸ್ಥೆಗೆ ಎಲ್ಪಿಜಿ ಪೂರೈಸುವ ಹಡಗೊಂದು ಇದೇ 20ರ ನಂತರ ನವ ಮಂಗಳೂರು ಬಂದರು ತಲುಪುವ ನಿರೀಕ್ಷೆ ಇದೆ.
‘ನಮ್ಮ ಸಂಸ್ಥೆಗೆ ಎಲ್ಪಿಜಿ ಪೂರೈಸುವ ಹಡಗು ಮಂಗಳೂರು ಕಡೆಗೆ ಪ್ರಯಾಣ ಬೆಳೆಸುತ್ತಿದೆ. ಹಡಗಿನಲ್ಲಿರುವ ಒಟ್ಟು ಎಲ್ಪಿಜಿಯಲ್ಲಿ ಇಲ್ಲಿ ಎಷ್ಟನ್ನು ಇಳಿಸಲಾಗುತ್ತದೆ ಎಂಬ ಖಚಿತ ಮಾಹಿತಿ ಇಲ್ಲ’ ಎಂದು ಎಚ್ಪಿಸಿಎಲ್ ಮೂಲಗಳು ತಿಳಿಸಿವೆ.












