ಇತ್ತೀಚಿನ ಸುದ್ದಿ
ಹೈಕಮಾಂಡ್ ಸೂಚಿಸಿದರೆ ಕ್ಷಣಾರ್ಧದಲ್ಲಿ ಕುರ್ಚಿ ಬಿಡಲು ಸಿದ್ಧ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
07/03/2026, 21:43
ಮೈಸೂರು(reporterkarnataka.com): ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ಮುನ್ನೆಲೆಗೆ ಬಂದಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. “ಪಕ್ಷದ ಹೈಕಮಾಂಡ್ ಸೂಚನೆ ನೀಡಿದರೆ ನಾನು ತಕ್ಷಣವೇ ಸ್ಥಾನ ಬಿಟ್ಟುಕೊಡಲು ಸಿದ್ಧನಿದ್ದೇನೆ” ಎಂದು ಅವರು ಹೇಳಿದ್ದಾರೆ. ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಧಿಕಾರದ ಬಗ್ಗೆ ತಮಗೆ ಯಾವುದೇ ವ್ಯಾಮೋಹವಿಲ್ಲ ಎಂಬುದನ್ನು ಪುನರುಚ್ಚರಿಸಿದರು. “ನಾನು ಹೈಕಮಾಂಡ್ ನಿರ್ಧಾರಕ್ಕೆ ಬದ್ಧನಾಗಿರುವ ಶಿಸ್ತಿನ ಸಿಪಾಯಿ. ಅವರು ಬಿಡು ಎಂದರೆ ಒಂದು ನಿಮಿಷವೂ ವಿಳಂಬ ಮಾಡದೆ ಬಿಟ್ಟುಬಿಡುತ್ತೇನೆ,” ಎಂದು ಮಾರ್ಮಿಕವಾಗಿ ಉತ್ತರಿಸಿದರು.
ವಿರೋಧ ಪಕ್ಷಗಳ ಟೀಕೆ ಹಾಗೂ ಪಕ್ಷದೊಳಗಿನ ಕೆಲವು ಬೆಳವಣಿಗೆಗಳ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ತಮ್ಮ ಮೇಲೆ ಹೈಕಮಾಂಡ್ ಸಂಪೂರ್ಣ ವಿಶ್ವಾಸ ಇಟ್ಟಿದೆ. ಹೈಕಮಾಂಡ್ ಆದೇಶವೇ ಅಂತಿಮ ಎಂದು ಸ್ಪಷ್ಟಪಡಿಸುವ ಮೂಲಕ ನಾಯಕತ್ವದ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದರು.
*ಬಜೆಟ್ ಮಂಡನೆಯ ವಿಶ್ವಾಸ:*
ಇದೇ ಸಂದರ್ಭದಲ್ಲಿ ತಮ್ಮ ಮುಂದಿನ ನಡೆಯ ಬಗ್ಗೆಯೂ ವಿಶ್ವಾಸ ವ್ಯಕ್ತಪಡಿಸಿದ ಸಿಎಂ, “ಈಗಾಗಲೇ ದಾಖಲೆಯ 17 ಬಜೆಟ್ಗಳನ್ನು ಮಂಡಿಸಿದ್ದೇನೆ. ಹೈಕಮಾಂಡ್ ಮತ್ತು ರಾಜ್ಯದ ಜನತೆ ಆಶೀರ್ವದಿಸಿದರೆ, ಮುಂದಿನ ಎರಡು ವರ್ಷಗಳ ಕಾಲ ನಾನೇ ಮುಖ್ಯಮಂತ್ರಿಯಾಗಿ ಇನ್ನೂ ಎರಡು ಬಜೆಟ್ಗಳನ್ನು ಮಂಡಿಸುವ ಆಸೆ ನನಗಿದೆ,” ಎಂದು ಹೇಳಿದರು.
*ಕೇಂದ್ರದ ಮೇಲೆ ವಾಗ್ದಾಳಿ:*
ರಾಜ್ಯದ ಹಣಕಾಸು ಪರಿಸ್ಥಿತಿಯನ್ನು ಸಮರ್ಥಿಸಿಕೊಂಡ ಸಿದ್ದರಾಮಯ್ಯ, ಕೇಂದ್ರ ಸರ್ಕಾರದ ಸಾಲದ ನೀತಿಗಳನ್ನು ತರಾಟೆಗೆ ತೆಗೆದುಕೊಂಡರು. ರಾಜ್ಯದ ವಿತ್ತೀಯ ಕೊರತೆ ನಿಯಮದ ಮಿತಿಯಲ್ಲಿದೆ. ಆದರೆ ಕೇಂದ್ರದ ಸಾಲದ ಪ್ರಮಾಣ ದಿನೇ ದಿನೇ ಹೆಚ್ಚುತ್ತಿದೆ ಎಂದು ಟೀಕಿಸಿದರು. ಇದರೊಂದಿಗೆ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧಿಸುವ ಪ್ರಸ್ತಾವನೆಯು ಮಕ್ಕಳ ಹಿತದೃಷ್ಟಿಯಿಂದ ಅನಿವಾರ್ಯ ಎಂದು ಅವರು ಪುನರುಚ್ಚರಿಸಿದರು.













