ಇತ್ತೀಚಿನ ಸುದ್ದಿ
ಸದನದ ಪಾವಿತ್ರ್ಯತೆ ಹಾಳು ಮಾಡುವ ಕೆಲಸ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟೀಕೆ
22/01/2026, 20:56
ಬೆಂಗಳೂರು(reporterkarnataka.com): ರಾಜ್ಯ ಸರಕಾರವು ಸದನದ ಪಾವಿತ್ರ್ಯತೆಯನ್ನು ಹಾಳು ಮಾಡುವ ಕೆಲಸಕ್ಕೆ ಕೈ ಹಾಕಿರುವುದು ದುರ್ದೈವ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಶ್ನೆಗೆ ಉತ್ತರ ಕೊಟ್ಟರು. ಸದನವು ಈ ನಾಡಿನ ಏಳಿಗೆಗೆ, ನಾಡಿನ ಅಭಿವೃದ್ಧಿಗೆ ಸಂಬಂಧಿಸಿ ಚರ್ಚೆ ಆಗಲು ವೇದಿಕೆ ಆಗಬೇಕೇ ವಿನಾ ಇವರ ರಾಜಕೀಯ ದ್ವೇಷಕ್ಕಾಗಿ ರಾಜ್ಯವನ್ನು ಕೇಂದ್ರ ಸರಕಾರದ ವಿರುದ್ಧ ಎತ್ತಿ ಕಟ್ಟುವ ಷಡ್ಯಂತ್ರ-ಕುತಂತ್ರಕ್ಕೆ ಸದನವನ್ನು ಬಳಸುವುದನ್ನು ಬಿಜೆಪಿ ವಿರೋಧಿಸುತ್ತದೆ ಎಂದು ತಿಳಿಸಿದರು.
ಗೌರವಾನ್ವಿತ ರಾಜ್ಯಪಾಲರು ಸಂವಿಧಾನಬದ್ಧವಾಗಿ ಇರುವ ಅವರ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದ್ದಾರೆ. ಆದರೆ, ಗೌರವಾನ್ವಿತ ರಾಜ್ಯಪಾಲರಿಗೆ ಸದನದ ಹೊರಗಡೆಯೂ ನೀವು ಅಪಮಾನ ಮಾಡುತ್ತೀರಿ. ಜಂಟಿ ಸದನವನ್ನುದ್ದೇಶಿಸಿ ಮಾತನಾಡಿ ತೆರಳುವ ಸಂದರ್ಭದಲ್ಲಿ ಅವರಿಗೆ ಸದನದ ಒಳಗಡೆಯೂ ತಡೆ ಒಡ್ಡಲಾಗಿದೆ; ಅವರ ಮೇಲೆ ದಬ್ಬಾಳಿಕೆ ಮಾಡಲಾಗಿದೆ. ಇದು ಶೋಭೆ ತರುವ ವಿಚಾರವಲ್ಲ ಎಂದು ಹೇಳಿದರು.
ನಿನ್ನೆ ನಾನು ಕಾನೂನು ಸಚಿವ ಎಚ್.ಕೆ.ಪಾಟೀಲರ ಮಾತುಗಳನ್ನೂ ಗಮನಿಸಿದ್ದೇನೆ. ರಾಜ್ಯಪಾಲರ ಜೊತೆ ಆದ ಮಾತುಕತೆಯನ್ನು ಮುಖ್ಯಮಂತ್ರಿಗಳ ಬಳಿ ಹೇಳಿಕೊಳ್ಳಬೇಕಿತ್ತು. ಹೊರಗಡೆ ಬಂದು ರಾಜ್ಯಪಾಲರು ಸದನ ಬಹಿಷ್ಕರಿಸುತ್ತಾರೆಂಬ ಧಾಟಿಯಲ್ಲಿ ಕಾನೂನು ಸಚಿವರೇ ಮಾತನಾಡುವುದಾದರೆ, ಸಂವಿಧಾನಕ್ಕೆ ಇವತ್ತು ರಾಜ್ಯದ ಕಾಂಗ್ರೆಸ್ ಸರಕಾರ ಅಪಚಾರ ಮಾಡುತ್ತಿದೆ. ಸಿದ್ದರಾಮಯ್ಯನವರ ಸರಕಾರ ಈ ಕೆಲಸ ಮಾಡುತ್ತಿದೆ ಎಂದು ಆಕ್ಷೇಪಿಸಿದರು. ರಾಜ್ಯಪಾಲರಿಗೆ ಅಪಮಾನ ಮಾಡಿದ್ದನ್ನು ಬಿಜೆಪಿ ಖಂಡಿಸುತ್ತದೆ. ಸಿದ್ದರಾಮಯ್ಯನವರು ಈ ರಾಜ್ಯದ ಮುಖ್ಯಮಂತ್ರಿ ಎಂಬುದನ್ನು ಮತ್ತೆ ಮತ್ತೆ ನೆನಪಿಸಲು ಬಯಸುವುದಾಗಿ ಹೇಳಿದರು. ಇವರು ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಲ್ಲ; ರಾಜ್ಯದ ಮುಖ್ಯಮಂತ್ರಿಗಳು; ಅದಕ್ಕೆ ತಕ್ಕಂತೆ ಅವರ ನಡವಳಿಕೆಯೂ ಇರಬೇಕಿತ್ತು ಎಂದು ಹೇಳಿದರು.
ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟ ಅವರು, ರಾಜ್ಯಪಾಲರು ಅವರ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಹಿಂದೆ ಯಾವ್ಯಾವ ರಾಜ್ಯಪಾಲರು ನಮ್ಮ ಬಿಜೆಪಿ ಸರಕಾರ ಇದ್ದಾಗ ಅಥವಾ ಇತರ ಸರಕಾರ ಇದ್ದಾಗ ಸದನದಲ್ಲಿ ಯಾವ ರೀತಿ ನಡೆದುಕೊಂಡಿದ್ದಾರೆ; ಎಲ್ಲವೂ ಕೂಡ ಇದೆ. ಅವರು ಮೂಗಿನ ನೇರಕ್ಕೆ ಮಾತನಾಡಲು ಸಾಧ್ಯವಾಗುವುದಿಲ್ಲ. ಒಟ್ಟಾರೆಯಾಗಿ ಇವತ್ತು ಕಾಂಗ್ರೆಸ್ ಸರಕಾರವು ತನ್ನ ವೈಫಲ್ಯಗಳನ್ನು ಮುಚ್ಚಿ ಹಾಕಿಕೊಳ್ಳುವ ಸಲುವಾಗಿ ಕೇಂದ್ರ ಸರಕಾರದ ವಿರುದ್ಧ ಕೆಂಡ ಕಾರುತ್ತಿದೆ. ಈ ಧೋರಣೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು. ಒಕ್ಕೂಟದ ವ್ಯವಸ್ಥೆಗೆ ಪೂರಕವಾಗಿ ನಡೆದುಕೊಳ್ಳಬೇಕೇ ವಿನಾ, ಇವರ ಲೋಪ, ದೋಷಗಳನ್ನು ಮುಚ್ಚಿ ಹಾಕಿಕೊಳ್ಳಲು ಕೇಂದ್ರ ಸರಕಾರದ ವಿರುದ್ಧ ಪದೇಪದೇ ಸವಾರಿ ಮಾಡುವುದು ರಾಜ್ಯದ ಹಿತದೃಷ್ಟಿಯಿಂದಲೂ ಒಳ್ಳೆಯದಲ್ಲ ಎಂದು ನುಡಿದರು.












