ಇತ್ತೀಚಿನ ಸುದ್ದಿ
ಪುತ್ತೂರು | ಯುವತಿಗೆ ಮಗು ಕರುಣಿಸಿದ ಪ್ರಕರಣ; ಹೈಕೋರ್ಟ್ ತೀರ್ಪು ಅಘಾತ ನೀಡಿದೆ: ಡಾ. ನಾಗಲಕ್ಷ್ಮೀ ಚೌಧರಿ
27/05/2026, 17:47
ಉಡುಪಿ(reporterkarnataka.com): ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಪೊಲೀಸ್ ಠಾಣೆಗಳಿಗೆ ಬರುವ ಮಹಿಳೆಯರ ಮಾತನ್ನು ಸಂಯಮದಿಂದ ಕೇಳಿ ನ್ಯಾಯ ಒದಗಿಸ ಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ| ನಾಗಲಕ್ಷ್ಮೀ ಚೌಧರಿ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮಣಿಪಾಲದಲ್ಲಿ ಜಿಲ್ಲಾಡಳಿತ ಮತ್ತಿತರ ಇಲಾಖೆಗಳ ಆಶ್ರಯದಲ್ಲಿ ಮಂಗಳವಾರ ನಡೆದ ಮಹಿಳಾ ಸ್ಪಂದನಾ ಮತ್ತು ಮಹಿಳಾ ಪ್ರಗತಿ ಪರಿ ಶೀಲನ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಬ್ರಹ್ಮಾವರ ಠಾಣೆಯಲ್ಲಿ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ದೂರುಗಳಿವೆ. ಗಮನಹರಿಸಬೇಕು. ಜತೆಗೆ ಕಾಲೇಜುಗಳ ಬಳಿ ಮಾದಕ ವಸ್ತು ತಡೆಗೆ ಕ್ರಮ ವಹಿಸಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಉದ್ಯೋಗಸ್ಥ ಮಹಿಳೆಯರು ಲೈಂಗಿಕ ಕಿರುಕುಳಕ್ಕೆ ಒಳಗಾದಲ್ಲಿ ದೂರುಗಳನ್ನು ನೀಡಲು ಜಿಲ್ಲೆಯಲ್ಲಿ 345 ಸರಕಾರಿ ಕಚೇರಿಗಳು ಹಾಗೂ 444 ಖಾಸಗಿ ಕಚೇರಿ ಸೇರಿದಂತೆ 789 ಆಂತರಿಕ ದೂರು ಸಮಿತಿಗಳ ರಚನೆಯಾಗಿದೆ. “ಶಿ ಬಾಕ್ಸ್” ಪೋರ್ಟಲ್ ನಲ್ಲಿ 346 ಸಮಿತಿಯ ಮಾಹಿತಿ ನಮೂದಿಸಲಾಗಿದೆ ಎಂದರು.
ಸೋಮವಾರ ಮಲ್ಪೆ ಬಂದರಿನಲ್ಲಿ ಭೇಟಿ ನೀಡಿದಾಗ ಅಲ್ಲಿನ ಮಹಿಳೆಯರಿಗೆ ಸರಕಾರಿ ಸೌಲಭ್ಯ ಸಿಗದ ಮಾಹಿತಿ ದೊರೆತಿದೆ. ಕೂಡಲೇ ಅಧಿಕಾರಿಗಳು ವಿಶೇಷ ಶಿಬಿರ ನಡೆಸಿ ಕ್ರಮ ಕೈಗೊಳ್ಳಬೇಕು ಎಂದರಲ್ಲದೇ, ಬಂದರು ವ್ಯಾಪ್ತಿಯಲ್ಲಿ ಶುಚಿತ್ವಕ್ಕೆ ಒತ್ತು ನೀಡಿ, ಸಿಸಿ ಕೆಮರಾ ಗಳನ್ನುಅಳವಡಿಸಬೇಕು. ಇಲ್ಲಿನ ಮಹಿಳಾ ಕಾರ್ಮಿಕರಿಗೆ ಸಕಾದಲ್ಲಿ ವೇತನ ಲಭ್ಯವಾಗಿಸಬೇಕು ಎಂದು ಬಂದರು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
*ಯುವತಿಗೆ ವಿದ್ಯಾಸಿರಿ:*
ಉಡುಪಿಯಲ್ಲಿ ಮೇ 25 ರಂದು ನಡೆದ ಸಂವಾದದಲ್ಲಿ ವಸತಿ ನಿಲಯ ಸಿಗದೇ ಸಾಲ ಮಾಡಿ ಬಾಡಿಗೆ ನೀಡುವ ವಿಷಯವಾಗಿ ವಿದ್ಯಾರ್ಥಿನಿಯೊಬ್ಬಳು ಪ್ರಸ್ತಾಪಿಸಿದ್ದಳು. ಈ ಬಗ್ಗೆ ಸ್ಥಳದಲ್ಲೇ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಸೂಚಿಸಿದ್ದು, ಆಕೆಗೆ ವಿದ್ಯಾಸಿರಿ ಮೂಲಕ ವರ್ಷಕ್ಕೆ 15 ಸಾವಿರ ರೂ. ನೀಡಿ ಶಿಕ್ಷಣಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
*ಬಾಗಲಕೋಟೆಯಿಂದ ಬಂದು ದೂರು ಸಲ್ಲಿಕೆ:*
ತನ್ನ ವಿಕಲಚೇತನ ಮಗನಿಗೆ ಸರಕಾರಿ ಸೌಲಭ್ಯ ಒದಗಿಸಲು ಹಾಗೂ ತಾವಿರುವ ಸರಕಾರಿ ಜಾಗದಲ್ಲಿ ಮನೆಕಟ್ಟಿಸಿಕೊಡಬೇಕೆಂದು ಮನವಿ ಮಾಡಲು ಬೆಂಗಳೂರಿಗೆ ತೆರಳಿದ್ದ ಬಾಗಲಕೋಟೆಯ ಸೋಮಲಾಪುರದ ಅಕ್ಕಮಹಾದೇವಿ ಅವರು ಮಣಿಪಾಲದಲ್ಲಿಆಯೋಗದ ಅಧ್ಯಕ್ಷರನ್ನು ಭೇಟಿ ಮಾಡಿದರು. ಇದಕ್ಕೆ ಸಂಬಂಧಿಸಿ ಅಧ್ಯಕ್ಷರು, ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದರು.
ಆಯೋಗದ ಕಾರ್ಯದರ್ಶಿ ರೂಪಾ ಆರ್., ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ಎಸ್ಪಿ ಹರಿರಾಂ ಶಂಕರ್ ಮತ್ತಿತರರು ಉಪಸ್ಥಿತರಿದ್ದರು.
*ತನಿಖಾ ವರದಿ ಸಲ್ಲಿಕೆಯಾಗಿಲ್ಲ:*
ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅನುಮಾನಾಸ್ಪದ ಸಾವುಗಳ ಪ್ರಕರಣದ ತನಿಖಾ ವರದಿಯನ್ನು ಸಲ್ಲಿಸುವಂತೆ ಸೂಚಿಸಿದ್ದರೂ ಇನ್ನೂ ಸಲ್ಲಿಕೆಯಾಗಿಲ್ಲ. ತನಿಖೆ ನಡೆಯುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷೆ ತಿಳಿಸಿದರು.
ಪುತ್ತೂರಿನಲ್ಲಿ ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ದೈಹಿಕ ಸಂಬಂಧ ಹೊಂದಿ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದ ಹೈಕೋರ್ಟ್ನ ಆದೇಶ ಆಘಾತ ತಂದಿದೆ. ಸಂತ್ರಸ್ತೆಗೆ ಕೇವಲ ಜೀವನಾಂಶ ಕೊಟ್ಟರೆ ಸಾಕಾ ಗದು. ಆಕೆಗೆ ನ್ಯಾಯ ಸಿಗಬೇಕಿದೆ. ಸಂತ್ರಸ್ತೆ ಸುಪ್ರೀಂ ಕೋರ್ಟ್ಗೆ ಮೇಲನ್ಮವಿ ಸಲ್ಲಿಕೆಗೆ ಮುಂದಾದರೆ ಆಯೋಗ ಅವರ ಪರ ನಿಲ್ಲಲಿದೆ ಎಂದರು.
ಉಡುಪಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ದೈನಂದಿನ ಆರೋಗ್ಯ ಸೇವೆಗಳ ಚಟುವಟಿಕೆಗಳು ನಡೆಯಲು ಮೂಲ ಸೌಕರ್ಯಗಳ ಸಮಸ್ಯೆಗಳನ್ನು ಆದ್ಯತೆಯ ಮೇಲೆ ಬಗೆಹರಿಸಬೇಕು. ಕಾರ್ಕಳ ತಾಲೂಕು ಆಸ್ಪತ್ರೆಯಲ್ಲಿ ಹೆರಿಗೆ ತಜ್ಞರ ಕೊರತೆಯಿಂದಾಗಿ ಒಂದು ವರ್ಷದಿಂದ ಹೆರಿಗೆಗಾಗಿ ಹೆಣ್ಣು ಮಕ್ಕಳು ಇತರೆ ತಾಲೂಕು ಅಥವಾ ಜಿಲ್ಲೆಗೆ ಹೋಗುವಂತಾಗಿದೆ. 700ರಿಂದ 800ರಷ್ಟು ಹೆರಿಗೆ ನಡೆಯುತ್ತಿದ್ದ ಆಸ್ಪತ್ರೆಯಲ್ಲಿ ಪ್ರಸ್ತುತ 7 ರಿಂದ 8 ಮಾತ್ರ ನಡೆಯುತ್ತಿದೆ. ಕೂಡಲೇ ಹೆರಿಗೆ ತಜ್ಞರನ್ನು ನೇಮಕ ಮಾಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
*ಮತ್ತಷ್ಟು ಸೂಚನೆಗಳು:*
ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಪರಿಶಿಷ್ಟ ಜಾತಿ, ಪಂಗಡದವರಿಗೆ ಸರಕಾರದ ಯೋಜನೆಗಳ ಬಗ್ಗೆ ಮಾಹಿತಿ ಒದಗಿಸಬೇಕು.
ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಲ್ಲಿ ಅವಕಾಶ ಸಿಗುತ್ತಿಲ್ಲ ಎಂಬ ದೂರಿನ ಬಗ್ಗೆ ಸರಕಾರದ ಗಮನಕ್ಕೆ ತಂದಿದ್ದು, ಹೊಸ ಹಾಸ್ಟೆಲ್ಗಳ ಪ್ರಾರಂಭಕ್ಕೆ ಪ್ರಯತ್ನಿಸಲಾಗುವುದು.
ವಿಶೇಷಚೇತನ ಶಾಲೆಗಳಲ್ಲಿ ವಿಶೇಷ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ಸಕಾಲದಲ್ಲಿ ಗೌರವಧನ ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದ ಅವರು, ಈ ಶಿಕ್ಷಕಿಯರಿಗೆ ಋತು ಚಕ್ರ ರಜೆ, ಹೆರಿಗೆ ರಜೆ ಸೌಲಭ್ಯ ಸಹಿತ ಮತ್ತಿತರ ಸೌಲಭ್ಯ ಕಲ್ಪಿಸಬೇಕು.
ಯುವತಿಯೊಬ್ಬಳು ಕಾಣೆಯಾಗಿ ಹಲವು ವರ್ಷವಾದ ಪ್ರಕರಣ ಸಂಬಂಧಿಸಿ ತನಿಖೆಯ ಕುರಿತು ಪೊಲೀಸರಿಂದ ವರದಿ ಕೇಳಲಾಯಿತು.
ಆಯೋಗದಲ್ಲಿ ದಾಖಲಾದ 54 ಪ್ರಕರಣಗಳ ವಿಚಾರಣೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಸೂಚಿಸಲಾಯಿತು.












