ಇತ್ತೀಚಿನ ಸುದ್ದಿ
Belagavi | ವಿವಾಹಿತೆಯೊಂದಿಗೆ ಪರಾರಿ: ಯುವಕನ ಮನೆ ಧ್ವಂಸ; ಕುರಿಗಳನ್ನೂ ಹೊತ್ತೊಯ್ದು ಭರ್ಜರಿ ಪಾರ್ಟಿ ಮಾಡಿದ ಕಿರಾತಕರು
30/06/2026, 18:24
ಬೆಳಗಾವಿ(reporterkarnataka.com): ವಿವಾಹಿತ ಮಹಿಳೆಯನ್ನು ಪ್ರೀತಿಸಿ ಓಡಿಸಿಕೊಂಡು ಹೋಗಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಆಕ್ರೋಶಗೊಂಡ ಗುಂಪೊಂದು ಯುವಕನ ಮನೆ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿರುವ ಆಘಾತಕಾರಿ ಘಟನೆ ಬೆಳಗಾವಿ ತಾಲೂಕಿನ ಭರಮ್ಯಾನಟ್ಟಿ ಗ್ರಾಮದಲ್ಲಿ ನಡೆದಿದೆ.
ದಾಳಿ ನಡೆಸಿದ್ದಷ್ಟೇ ಅಲ್ಲದೆ, ಮನೆಯ ಪಕ್ಕದಲ್ಲಿದ್ದ ಕುರಿಗಳನ್ನು ಕದ್ದು ತಂದು ದುರುಳರು ಭರ್ಜರಿ ಪಾರ್ಟಿ ಮಾಡಿ ಅಟ್ಟಹಾಸ ಮೆರೆದಿದ್ದಾರೆ.
*ಖಾಸಗಿ ಕಂಪನಿಯಲ್ಲಿ ಚಿಗುರಿದ ಪ್ರೇಮ!:*
ಭರಮ್ಯಾನಟ್ಟಿ ಗ್ರಾಮದ ಯಲ್ಲಪ್ಪ ನಾಯಕ ಕಳೆದ ಎರಡು ವರ್ಷಗಳಿಂದ ಬೆಳಗಾವಿಯ ಉದ್ಯಮಬಾಗ್ನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ಇದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವಿವಾಹಿತ ಮಹಿಳೆ ನಾಗವ್ವ ನಾಯಕ ಎಂಬಾಕೆಯೊಂದಿಗೆ ಈತನಿಗೆ ಪರಿಚಯವಾಗಿ, ಬಳಿಕ ಅದು ಪ್ರೀತಿಗೆ ತಿರುಗಿದೆ. ನಾಗವ್ವಳಿಗೆ ಕೇವಲ ಒಂದು ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದರೂ ಸಹ ಆಕೆ ಕೆಲಸ ಮುಂದುವರಿಸಿದ್ದಳು. ಇಬ್ಬರ ನಡುವಿನ ಸಂಬಂಧ ಗಾಢವಾಗುತ್ತಿದ್ದಂತೆ, ಕೆಲ ದಿನಗಳ ಹಿಂದೆ ಇಬ್ಬರೂ ಜಂಟಿಯಾಗಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಮನೆ ಮೇಲೆ ನೂರಾರು ಜನರ ದಾಳಿ, ವಸ್ತುಗಳು ಪುಡಿಪುಡಿ
ಯಲ್ಲಪ್ಪ ಹಾಗೂ ನಾಗವ್ವ ಓಡಿಹೋದ ವಿಷಯ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಮಹಿಳೆಯ ಕುಟುಂಬಸ್ಥರು ಹಾಗೂ ಸಂಬಂಧಿಕರು, ಈ ಕೃತ್ಯಕ್ಕೆ ಯಲ್ಲಪ್ಪನ ಕುಟುಂಬದವರೇ ಕಾರಣ ಎಂದು ಆರೋಪಿಸಿ ಭರಮ್ಯಾನಟ್ಟಿ ಗ್ರಾಮಕ್ಕೆ ನುಗ್ಗಿದ್ದಾರೆ. ಸುಮಾರು ಇಪ್ಪತ್ತಕ್ಕೂ ಹೆಚ್ಚು ಜನರಿದ್ದ ಗುಂಪು ಯಲ್ಲಪ್ಪನ ತಂದೆ ಭೀಮಪ್ಪ ನಾಯಕ ಅವರ ಮನೆ ಮೇಲೆ ಏಕಾಏಕಿ ದಾಳಿ ನಡೆಸಿದೆ.
ದಾಳಿಯ ವೇಳೆ ಮನೆಯಲ್ಲಿದ್ದವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು, ಒಳಗಿದ್ದ ಗೃಹೋಪಯೋಗಿ ವಸ್ತುಗಳು, ಪೀಠೋಪಕರಣಗಳು, ಬಾಗಿಲು ಹಾಗೂ ಕಿಟಕಿಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸಲಾಗಿದೆ. ಇದರಿಂದಾಗಿ ಇಡೀ ಕುಟುಂಬವೇ ಬೀದಿಗೆ ಬಿದ್ದಿದೆ.
*ಕುರಿಗಳನ್ನು ಕದ್ದು ದುರುಳರಿಂದ ಭರ್ಜರಿ ಪಾರ್ಟಿ!*
ಮನೆಯನ್ನು ಧ್ವಂಸಗೊಳಿಸಿದ ದುರುಳರು ಅಷ್ಟಕ್ಕೇ ನಿಲ್ಲದೆ, ಮನೆಯ ಪಕ್ಕದ ಹಟ್ಟಿಯಲ್ಲಿದ್ದ ಕುರಿಗಳನ್ನು ಕಳ್ಳತನ ಮಾಡಿ ತೆಗೆದುಕೊಂಡು ಹೋಗಿದ್ದಾರೆ. ಬಳಿಕ ಆ ಕುರಿಗಳನ್ನು ಕೊಂದು ಭರ್ಜರಿ ಪಾರ್ಟಿ ಮಾಡಿ ವಿಕೃತ ಆನಂದ ಅನುಭವಿಸಿದ್ದಾರೆ ಎಂದು ಯಲ್ಲಪ್ಪನ ಸಹೋದರಿ ಕರೇವ್ವ ಕಣ್ಣೀರಿಡುತ್ತಾ ಆರೋಪಿಸಿದ್ದು, ನಮಗೆ ನ್ಯಾಯ ಒದಗಿಸಿಕೊಡಬೇಕೆಂದು ಒತ್ತಾಯಿಸಿದ್ದಾಳೆ.
*ನಮಗೇನೂ ಗೊತ್ತಿಲ್ಲ ಎಂದ ಕುಟುಂಬಸ್ಥರು*
ಕಳೆದ ಎರಡು ವರ್ಷಗಳಿಂದ ಯಲ್ಲಪ್ಪ ಭರಮ್ಯಾನಟ್ಟಿಯ ಮನೆಗೆ ಬಂದಿರಲಿಲ್ಲ. ಆತ ಕೇವಲ ಹಣಕಾಸಿನ ವಿಚಾರವಾಗಿ ಮಾತ್ರ ಸಹೋದರಿಯೊಂದಿಗೆ ಫೋನ್ನಲ್ಲಿ ಮಾತನಾಡುತ್ತಿದ್ದನೇ ಹೊರತು, ತನ್ನ ವೈಯಕ್ತಿಕ ಬದುಕು ಅಥವಾ ಈ ಮಹಿಳೆಯೊಂದಿಗಿನ ಸಂಬಂಧದ ಬಗ್ಗೆ ಕುಟುಂಬಕ್ಕೆ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ಯಲ್ಲಪ್ಪನ ಪೋಷಕರು ಅಳಲು ತೋಡಿಕೊಂಡಿದ್ದಾರೆ.
ಮನೆ ಧ್ವಂಸ ಹಾಗೂ ಹಲ್ಲೆ ನಡೆಸಿರುವ ಕುರಿತು ಸಂತ್ರಸ್ತ ಕುಟುಂಬಸ್ಥರು ಬೆಳಗಾವಿ ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿದ್ದು, ಸದ್ಯ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
“ಭರಮ್ಯಾನಟ್ಟಿ ಗ್ರಾಮದ ಭೀಮಪ್ಪ ನಾಯಕ ಅವರ ಮನೆಗೆ ನುಗ್ಗಿ ಮಾರಣಾಂತಿಕ ಹಲ್ಲೆ ಹಾಗೂ ಧ್ವಂಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಾಜ ನಾಯಕ, ರವಿ ಬಿಜಗಟ್ಟಿ, ಈಶ್ವರ ಶಿವಪ್ಪ ಸೇರಿದಂತೆ ಹಲವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕಾಗಿ ಈಗಾಗಲೇ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದೆ.”
ಎಂದು ಭೂಷಣ್ ಬೊರಸೆ, ನಗರ ಪೊಲೀಸ್ ಆಯುಕ್ತ ಹೇಳಿದ್ದಾರೆ.












