11:57 PM Wednesday4 - February 2026
ಬ್ರೇಕಿಂಗ್ ನ್ಯೂಸ್
ಅನೈತಿಕ ಸಂಬಂಧ ಕೊಲೆಗೆ ಕಾರಣ?: ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಸೇರಿ 7… ಎಸಿ ಕೋರ್ಟ್ ಕೇಸ್: ಎರಡೂವರೆ ವರ್ಷದಲ್ಲಿ ಅಸಾಧ್ಯವಾದದ್ದನ್ನು ಸಾಧ್ಯವಾಗಿಸಿದ್ದೇವೆ: ಸಚಿವ ಕೃಷ್ಣ ಬೈರೇಗೌಡರು… ತೀರ್ಥಹಳ್ಳಿ ಸಮೀಪದ ಮೇಗರವಳ್ಳಿಯಲ್ಲಿ ಭೀಕರ ಅಪಘಾತ: ಗಾಯಾಳು ಮಹಿಳೆ ಸಾವು Madikeri | ಕುಶಾಲನಗರ ಬಳಿ ಬೈಕ್ ಡಿಕ್ಕಿ: ಪಾದಚಾರಿ ಯುವಕ ದಾರುಣ ಸಾವು ಪೊಲೀಸರಿಗೆ ತಲೆನೋವಾದ ಕೇರಳದ ‘ಮಲ್ಲು’ ಗ್ಯಾಂಗ್: ಚಿನ್ನದ ಉದ್ಯಮಿಗಳೇ ಇವರ ಟಾರ್ಗೆಟ್ ಉದ್ಯಮಿ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣ: ಕೇಂದ್ರ ವಿತ್ತ ಸಚಿವೆಗೆ ಕೇರಳ ಸಿಎಂ… ವರನಿಗೆ ಚಾಕು ಇರಿದ ಕೇಸ್‌ಗೆ ಬಿಗ್ ಟ್ವಿಸ್ಟ್ : ಸ್ಕೆಚ್ ಹಾಕಿದ್ದು ಅವರಲ್ಲ,… ಕಂಬನಿ ನಡುವೆ ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿ.ಜೆ ರಾಯ್‌ ಅಂತಿಮವಿಧಿ: ಬನ್ನೇರುಘಟ್ಟದ ಕಾಸಾಗ್ರೌಂಡ್… ಯಾವ ಹೈಸ್ಪೀಡ್ ರೈಲೂ ಬರಲ್ಲ: ಕೇಂದ್ರ ಬಜೆಟ್ ಕುರಿತು ಡಿಸಿಎಂ ಡಿ.ಕೆ. ಶಿವಕುಮಾರ್… ಏಪ್ರಿಲ್ 1ರಿಂದ ಹೊಸ ತೆರಿಗೆ ನೀತಿ ಜಾರಿ; ಶಿಕ್ಷಣ, ವೈದ್ಯಕೀಯ ಉದ್ದೇಶಗಳಿಗಾಗಿ ಟಿಸಿಎಸ್…

ಇತ್ತೀಚಿನ ಸುದ್ದಿ

ವಿರಾಜಪೇಟೆಯ ಪ್ರೇಯಸಿಯೊಂದಿಗೆ ಹೋಟೆಲ್‌ ರೂಂನಲ್ಲಿದ್ದ ಪುತ್ತೂರಿನ ಯುವಕ ಶವವಾಗಿ ಪತ್ತೆ: 8 ದಿನ ಜತೆಗಿದ್ದ ಪ್ರೇಮಿಗಳು

19/10/2025, 11:58

ಗಿರಿಧರ್ ಕೊಂಪುಳಿರ ಮಡಿಕೇರಿ

info.reporterkarnataka@gmail.com

ತನ್ನ ಪ್ರೇಯಸಿಯ ಜೊತೆಗೆ ಬೆಂಗಳೂರಿನ ಹೋಟೆಲೊಂದರ ಕೊಠಡಿಯಲ್ಲಿ ಕಳೆದ 8 ದಿನಗಳಿಂದ ವಾಸವಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮೂಲದ ಯುವಕನೊಬ್ಬ ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ನಡೆದಿದೆ.
ಮೃತನನ್ನು ಪುತ್ತೂರಿನ ತಕ್ಷಿತ್‌ (20) ಎಂದು ಗುರುತಿಸಲಾಗಿದೆ. ಈತನ ಜತೆಗಿದ್ದ ಯುವತಿ ವೀರಾಜಪೇಟೆ ಮೂಲದವಳೆಂದು ತಿಳಿದು ಬಂದಿದೆ. ಕಳೆದ ಅಕ್ಟೋಬರ್‌ 9ರಂದು ಮದ್ಯಾಹ್ನ ಇಬ್ಬರೂ ಕೂಡ ಮಡಿವಾಳದ ಗ್ರ್ಯಾಂಡ್‌ ಚಾಯ್ಸ್‌ ಲಾಡ್ಜ್‌ ನಲ್ಲಿ ರೂಮು ಪಡೆದಿದ್ದಾರೆ. ನಿನ್ನೆ ಅಂದರೆ 17 ರಂದು ಈತನ ಪ್ರೇಯಸಿ ಪಾಯಲ್‌ (20) (ಹೆಸರು ಬದಲಿಸಲಾಗಿದೆ) ರೂಮಿನಿಂದ ಆಚೆ ಹೋದವಳು ಮತ್ತೆ ಬಂದಿರಲಿಲ್ಲ. ಅಲ್ಲದೆ ಅವತ್ತೇ ಈತ ರೂಮಿನಿಂದ ಹೊರಗೆ ಬಂದಿರಲಿಲ್ಲ. ಅನುಮಾನಗೊಂಡಿದ್ದ ಹೋಟೆಲ್ ಸಿಬ್ಬಂದಿ ಮಾಸ್ಟರ್ ಕೀ ಬಳಸಿ ರೂಮ್ ಒಳಗೆ ಹೋಗಿ ನೋಡಿದಾಗ ಆತನ ಶವ ನೆಲದ ಮೇಲೆ ಬಿದ್ದಿತ್ತು. ಕೂಡಲೇ ಸಿಬ್ಬಂದಿಯು ಪೊಲೀಸರಿಗೆ ತಿಳಿಸಿದ್ದಾರೆ.
ಯುವಕ ಸಾವು ಕಾಣುವ ಮುಂಚೆಯೇ ಯುವತಿ ಬೆಂಗಳೂರನ್ನು ತೊರೆದಿದ್ದಳು ಎನ್ನಲಾಗಿದೆ. ಇದರಿಂದಾಗಿ ಸಾವಿನ ಸುತ್ತ ಹಲವು ಅನುಮಾನಗಳು ವ್ಯಕ್ತವಾಗಿದೆ. ಈ ಕುರಿತು ಮಾಹಿತಿ ನೀಡಿದ ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಅವರು ಇಬ್ಬರೂ ಕೂಡ ಹೋಟೆಲ್‌ ನಲ್ಲಿ ರೂಮು ಪಡೆದುಕೊಂಡು ವಾಸವಿದ್ದರು. ಪ್ರಾಥಮಿಕ ತನಿಖೆಯ ಪ್ರಕಾರ ಇಬ್ಬರೂ ಮಂಗಳೂರು ಹೊರವಲಯದ ಕಾಲೇಜೊಂದರಲ್ಲಿ ಬಿಬಿಎ ಪದವಿ ಒದುತ್ತಿದ್ದಾಗ ಪರಿಚಿತರಾಗಿ ನಂತರ ಪರಸ್ಪರ ಪ್ರೀತಿಸಿದ್ದಾರೆ. ಇಬ್ಬರೂ ಕೂಡ ನಿಗದಿತ ವಿಷಯಗಳಲ್ಲಿ ತೇರ್ಗಡೆ ಆಗದ ಕಾರಣ ಕಾಲೇಜಿನಿಂದ ಡ್ರಾಪೌಟ್‌ ಆಗಿದ್ದರು ಎಂದು ತಿಳಿಸಿದರು.
ತಕ್ಷಿತ್‌, ತನ್ನ ಮನೆಯವರಿಗೆ ಮೈಸೂರಿಗೆ ಓದೋಕೆ ಹೋಗ್ತೀನಿ ಅಂತಾ ಸುಳ್ಳು ಹೇಳಿ ಪ್ರೇಯಸಿ ಜೊತೆ ಮಡಿವಾಳದ ಲಾಡ್ಜ್‌ನಲ್ಲಿ ರೂಮ್‌ ಮಾಡಿಕೊಂಡಿದ್ದ. ಕಳೆದ ಎಂಟು ದಿನದಿಂದಲೂ ಜೋಡಿಯು ಝೊಮ್ಯಾಟೋ ಮತ್ತು ಸ್ವಿಗ್ಗಿಯಿಂದ ಊಟ ತಿಂಡಿ ತರಿಸಿಕೊಂಡು ತಿನ್ನುತಿದ್ದರು ಎಂದು ಲಾಡ್ಜ್‌ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಗುರುವಾರ ಊಟ ಮಾಡಿದ ನಂತರ ಇಬ್ಬರಿಗೂ ಫುಡ್‌ ಪಾಯ್ಸನಿಂಗ್‌ ಆಗಿತ್ತು. ಇಬ್ಬರೂ ಮೆಡಿಕಲ್‌ ನಿಂದ ಮಾತ್ರೆ ತಂದು ತಿಂದಿದ್ದರು.
ಸ್ವಲ್ಪ ಆರಾಮ ಆಗುತ್ತಿದ್ದಂತೆ ಶುಕ್ರವಾರ ಮದ್ಯಾಹ್ನ ಊಟ ಮುಗಿಸಿ ಪಾಯಲ್‌ ರೂಮ್‌ ಚೆಕ್‌ಔಟ್‌ ಮಾಡಿ ಕೊಡಗಿಗೆ ವಾಪಸಾಗಿದ್ದಳು. ಆದರೆ, ರೂಮ್‌ನಲ್ಲಿದ್ದ ತಕ್ಷಿತ್‌ ಮಲಗಿದ್ದಲ್ಲಿಯೇ ಹೆಣವಾಗಿ ಹೋಗಿದ್ದಾನೆ. ಮದ್ಯಾಹ್ನದಿಂದಲೂ ರೂಂ ನಲ್ಲಿ ಚಟುವಟಿಕೆ ಇರದ ಕಾರಣ ಅನುಮಾನಗೊಂಡು ಶುಕ್ರವಾರ ರಾತ್ರಿ ಲಾಡ್ಜ್‌ನ ಸಿಬ್ಬಂದಿ ರೂಮ್‌ನ ಬಾಗಿಲು ತಟ್ಟಿದ್ದಾರೆ. ಆದರೆ, ತಕ್ಷಿತ್ ನ ರೂಮ್‌ನಿಮದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಮಾಸ್ಟರ್ ಕೀ ಬಳಸಿ ರೂಮ್ ತೆರೆದಿರುವ ಲಾಡ್ಜ್ ಸಿಬ್ಬಂದಿಗೆ ತಕ್ಷಿತ್ ನ ಮೃತದೇಹ ಕಾಣಿಸಿದೆ. ತಕ್ಷಣ ಮಡಿವಾಳ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಲ್ಲಾ ಕೋನಗಳಲ್ಲಿಯೂ ತನಿಖೆ ಆರಂಭಿಸಿದ್ದಾರೆ. ಮೇಲ್ನೋಟಕ್ಕೆ ತಕ್ಷಿತ್ ಗೆ ಹೃದಯಾಘಾತ ಆಗಿರೋ ಶಂಕೆ ವ್ಯಕ್ತವಾಗಿದ್ದು, ಯುಡಿಆರ್ ದಾಖಲಿಸಿ ಪೊಲೀಸರು ತನಿಖೆ ನಡೆಸಿದ್ದಾರೆ. ಆದರೆ ಈ ಪ್ರಕರಣದಲ್ಲಿ ಪೊಲೀಸರಿಗೆ ಹಲವು ಅನುಮಾನ ವ್ಯಕ್ತವಾಗಿದೆ. ಸ್ವಿಗ್ಗಿಯಲ್ಲಿ ತಂದ ಆಹಾರದಿಂದ ಫುಡ್‌ ಪಾಯ್ಸನ್‌ ಆಗಿರಬಹುದು ಎನ್ನುವ ಅನುಮಾನವಿದೆ. ಯುವತಿ ರೂಮ್‌ನಿಂದ ಹೊರಗೆ ಹೋಗೋವರೆಗೂ ಜೀವಂತವಾಗಿದ್ದ ತಕ್ಷಿತ್‌ ನಂತರ ಸಾವನ್ನಪ್ಪಿದ್ದು ಹೇಗೆ? ತಕ್ಷಿತ್ ಪಾಯಲ್‌ ಜೊತೆ 8 ದಿನ ರೂಮ್‌ನಲ್ಲಿ ವಾಸ್ತವ್ಯ ಹೂಡಿದ್ದ ಉದ್ದೆಶವಾದರೂ ಏನು ? ಇಬ್ಬರೂ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶ ಹೊಂದಿದ್ದರೇ ? ತಕ್ಷಿತ್ ಸೇವಿಸಿದ್ದ ಆಹಾರದಲ್ಲಿ ವಿಷದ ಅಂಶವೇನಾದರೂ ಇತ್ತಾ? ವಿಷದ ಅಂಶ ಇದ್ದರೆ ಯಾರು ವಿಷವನ್ನ ಆಹಾರದೊಂದಿಗೆ ಬೆರೆಸಿದ್ದವರು ಯಾರು? ಇಬ್ಬರ ನಡುವೆ ಜಗಳವೇನಾದರೂ ನಡೆಯಿತೇ ? ಪಾಯಲ್‌ ಲವ್ ಬ್ರೇಕಪ್ ಮಾಡಿದಳೇ ? ಇದಕ್ಕೆ ಬೇಜಾರಾಗಿ ಯುವಕ ವಿಷ ಕುಡಿದು ತಕ್ಷಿತ್ ಆತ್ಮಹತ್ಯೆ ಮಾಡಿಕೊಂಡನೇ? ಅಥವಾ ಇಬ್ಬರೂ ಒಟ್ಟಿಗೆ ಸಾಯುವ ನಿರ್ಧಾರ ಮಾಡಿದ್ದರೇ ? ಪಾಯಲ್‌ ವಿಷ ಸೇವಿಸದೇ ಸೇವಿಸುವ ನಾಟಕ ಆಡಿದ್ದಾಳೆಯೇ ಅಥವಾ ನಾಟಕವಾಡಿ ತಕ್ಷಿತ್ ಗೆ ವಿಷ ಉಣಿಸಿದಳೇ? ಅಥವಾ ಯುವಕನಿಗೆ ನಿಜಕ್ಕೂ ಹೃದಯಾಘಾತ ಆಯ್ತಾ? ಪುಡ್‌ ಪಾಯ್ಸನ್‌ ನಿಂದಲೇ ತಕ್ಷಿತ್‌ ಮೃತಪಟ್ಟನಾ ?ಈ ಎಲ್ಲಾ ಅನುಮಾನಕ್ಕೆ ಮಡಿವಾಳ ಪೊಲೀಸರು ಉತ್ತರ ಹುಡುಕುತಿದ್ದಾರೆ.
ಯುವಕನ ಶವವನ್ನು ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದ್ದು ಶನಿವಾರ ಮರಣೋತ್ತರ ಪರೀಕ್ಷೆ ನಡೆಸಿ ಮೃತನ ಪೋಷಕರಿಗೆ ಶವ ಒಪ್ಪಿಸಲಾಗಿದೆ. ಪೋಲೀಸರು ಅಸ್ವಾಭಾವಿಕ ಮರಣ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಮರಣೋತ್ತರ ಪರೀಕ್ಷಾ ವರದಿಯನ್ನು ಕಾಯುತಿದ್ದಾರೆ. ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ಸಾರಾ ಫಾತಿಮಾ ತಿಳಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು