ಇತ್ತೀಚಿನ ಸುದ್ದಿ
ಆಡಳಿತ ವೈಫಲ್ಯ, ಒಳಜಗಳ ಮರೆಮಾಚಲು ಜಾತಿ ಸಮೀಕ್ಷೆ ನಾಟಕ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕೆ
27/09/2025, 12:56

ಬೀದರ್(reporterkarnataka.com): ʼರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ಆಡಳಿತ ವೈಫಲ್ಯ ಮತ್ತು ಡಿಸಿಎಂ-ಸಿಎಂ ಒಳ ಜಗಳ ಮರೆಮಾಚಲು ರಾಜ್ಯದಲ್ಲಿ ಜಾತಿ ಸಮೀಕ್ಷೆ ನಡೆಸುತ್ತಿದೆ ಅಷ್ಟೇʼ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಪ್ರತಿಕ್ರಿಯಿಸಿದರು.
ಬೀದರ್ನಲ್ಲಿ ಶುಕ್ರವಾರ ಮಾದ್ಯಮಗಳೊಂದಿಗೆ ಮಾತನಾಡಿ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರನ್ನು ಮೆಚ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಜಾತಿ ಸಮೀಕ್ಷೆಯ ನಾಟಕವಾಡುತ್ತಿದ್ದಾರೆ ಎಂದು ಟೀಕಿಸಿದರು.
ಜಾತಿ ಸಮೀಕ್ಷೆ ಹೆಸರಲ್ಲಿ ರಾಜ್ಯದಲ್ಲಿರುವ ನೈಜ ಸಮಸ್ಯೆಗಳನ್ನು ಮರೆಮಾಚಲಾಗುತ್ತಿದೆ. ರಾಜ್ಯದಲ್ಲೆಲ್ಲೂ ಅಭಿವೃದ್ಧಿ ಕಾಮಗಾರಿ-ಕಾರ್ಯಗಳು ನಡೆಯುತ್ತಿಲ್ಲ. ಸರ್ಕಾರದಲ್ಲಿ ಗುಂಡಿ ಮುಚ್ಚಲೂ ಹಣವಿಲ್ಲ. ಅಂಥದ್ದರಿಲ್ಲಿ ಜಾತಿ ಸಮೀಕ್ಷೆಗೆಂದು ಹಣ ವ್ಯಯಿಸುತ್ತಿದ್ದಾರೆ ಎಂದು ಜೋಶಿ ಆರೋಪಿಸಿದರು.
ಕೇಂದ್ರ ಸರ್ಕಾರ 2021ರಲ್ಲಿ ಕೋವಿಡ್ ಮತ್ತಿತರ ಕಾರಣಗಳಿಂದ ಗಣತಿ ಮುಂದೂಡಿತ್ತು. ಇದೀಗ ಗಣತಿಗೆ ಸಿದ್ಧತೆ ನಡೆಸುತ್ತಿದೆ ಎಂದ ಸಚಿವರು, ಆದರೆ, ರಾಜ್ಯ ಕಾಂಗ್ರೆಸ್ ಸರ್ಕಾರ ಆಂತರಿಕ ಅತಂತ್ರ, ಸಿಎಂ-ಡಿಸಿಎಂ ಒಳಜಗಳದ ಕಾರಣಕ್ಕೆ ಜಾತಿ ಸಮೀಕ್ಷೆಯನ್ನು ಮುನ್ನಲೆಗೆ ತಂದಿದೆ ಎಂದು ಜೋಶಿ ಚಾಟಿ ಬೀಸಿದರು.
ರಾಜ್ಯ ಕಾಂಗ್ರೆಸ್ನಲ್ಲಿ ಸೆಪ್ಟೆಂಬರ್ ಕ್ರಾಂತಿ ಮುಗಿಯುತ್ತ ಬಂದಿದೆ. ಇದನ್ನು ಮುಂದೆ ಹಾಕಲು ಏನೆಲ್ಲಾ ಪ್ರಯತ್ನ ನಡೆಸಲಾಗುತ್ತಿದೆ. ಜಾತಿ ಸಮೀಕ್ಷೆ ಎಂಬುದೊಂದು ತಂತ್ರವಷ್ಟೇ. ಹಾಗಾಗಿ ಈ ಅವೈಜ್ಞಾನಿಕ ಸಮೀಕ್ಷೆಗೆ ಡಿಕೆಶಿ ಸೇರಿದಂತೆ ಕಾಂಗ್ರೆಸ್ ಸಚಿವರುಗಳಿಂದಲೇ ವಿರೋಧ ವ್ಯಕ್ತವಾಗುತ್ತಿದೆ ಎಂದು ಹೇಳಿದರು.
*ಅದೆಷ್ಟು ಜಾತಿಗಳಿಗೆ ಒಳ್ಳೆಯದು ಮಾಡಿದ್ದಾರೆ?:* ಕಾಂಗ್ರೆಸ್ ನೇತಾರರು ಅದೆಷ್ಟು ಜಾತಿಗಳಿಗೆ ಒಳ್ಳೆಯದು ಮಾಡಿದ್ದಾರೆ. ಕಾಂಗ್ರೆಸ್ ನಾಯಕರು ಯಾವತ್ತೂ ಎಸ್ಸಿಎಸ್ಟಿ, ಒಬಿಸಿಗೆ ವಿರೋಧ ಮಾಡುತ್ತಲೇ ಬಂದಿದ್ದಾರೆ. ರಾಜೀವ್ ಗಾಂಧಿ, ಪಂಡಿತ್ ನೆಹರು ಆದಿಯಾಗಿ ಕಾಂಗ್ರೆಸ್ ಪಕ್ಷ ಮೀಸಲಾತಿಗೆ ವಿರೋಧ ಮಾಡಿದ್ದರು. ಸಂಸತ್ನಲ್ಲೇ ವಿರೋಧಿಸಿದ್ದರು. ಈಗ ಸಿಎಂ ಸಿದ್ದರಾಮಯ್ಯ ಡ್ರಾಮಾ ಮಾಡುತ್ತಿದ್ದಾರೆ ಎಂದು ಜೋಶಿ ಟೀಕಿಸಿದರು.
*ಮುಸಲ್ಮಾನ್, ಕ್ರಿಶ್ಚಿಯನ್ ಅಲ್ಲೂ ಅಸ್ಪೃಶ್ಯತೆಯೇ?:* ಅಸ್ಪೃಶ್ಯತೆ, ಆರ್ಥಿಕ ಅಸಮಾನತೆ ಹಾಗೂ ಬೇರೆ ಬೇರೆ ಕಾರಣದಿಂದಾಗಿ ಹಿಂದುಳಿದವರಿಗೆ ಮೀಸಲಾತಿ ಕೊಡುವುದಾಗಿದೆ. ಆದರೆ, ರಾಜ್ಯ ಕಾಂಗ್ರೆಸ್ ಸರ್ಕಾರ ಅದರ ದಿಕ್ಕು ದೆಸೆಯನ್ನೇ ಬದಲು ಮಾಡಲು ಹೊರಟಿದೆ. ಧರ್ಮಾಧಾರಿತ ಮೀಸಲಾತಿಯನ್ನು ಸುಪ್ರಿಂ ಕೋರ್ಟ್ ಸಹ ತೊಡೆದು ಹಾಕಿದೆ. ಆದರೆ, ರಾಜ್ಯ ಸರ್ಕಾರ ಧರ್ಮಾಧಾರಿತ ಮೀಸಲಾತಿಯತ್ತ ಹೆಜ್ಜೆ ಹಾಕಿದೆ. ಈ ಮೂಲಕ ಮುಸಲ್ಮಾನ್, ಕ್ರಿಶ್ಚಿಯನ್ ಅಲ್ಲೂ ಅಸ್ಪೃಶ್ಯತೆ ಇದೆ ಎಂಬುದನ್ನು ಒಪ್ಪಿಕೊಂಡಂತೆ ಆಗಿದೆ ಎಂದು ಸಚಿವ ಪ್ರಲ್ಹಾದ ಜೋಶಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.