8:39 PM Saturday7 - June 2025
ಬ್ರೇಕಿಂಗ್ ನ್ಯೂಸ್
ಸಾರ್ವಜನಿಕ ಆರೋಗ್ಯ ಸುರಕ್ಷತೆಗಾಗಿ ಬೀದಿಬದಿ, ಹೋಟೆಲ್ ಆಹಾರದ ಮೇಲೆ ಕಟ್ಟುನಿಟ್ಟಿನ ನಿಗಾ ಅಗತ್ಯ:… ಡಿಸಿಎಂ ಡಿಕೆಶಿ ರಾಜೀನಾಮೆಗೆ ಹೈಕಮಾಂಡ್‌ ಸೂಚಿಸಲಿ: ಮೈಸೂರಿನಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ… Bangalore | ಕಾಲ್ತುಳಿತ ಪ್ರಕರಣ: ಬೆಂಗಳೂರು ನಗರ ಪೊಲೀಸ್ ಕಮೀಷನರ್ ಸೇರಿದಂತೆ ಹಿರಿಯ… RCB | ದುರ್ಘಟನೆ ವಿಷಯದಲ್ಲಿ ರಾಜಕಾರಣ ಸಲ್ಲದು: ವಿಪಕ್ಷಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್… ಹೈಕೋರ್ಟ್‌ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಲಿ, ಜಿಲ್ಲಾಧಿಕಾರಿಯಿಂದ ತನಿಖೆ ಬೇಡ: ಪ್ರತಿಪಕ್ಷ ನಾಯಕ… Mysore | ರಾಜ್ಯದಲ್ಲಿ 100 ವಿದ್ಯುತ್ ಉಪ ಸ್ಥಾವರ ಸ್ಥಾಪನೆ: ಇಂಧನ ಸಚಿವ… Bangalore | ಕಾಲ್ತುಳಿತ ಪ್ರಕರಣ ಹಾಲಿ ನ್ಯಾಯಾಧೀಶರಿಂದ ತನಿಖೆಯಾಗಬೇಕು: ಮಾಜಿ ಸಿಎಂ ಬಸವರಾಜ… ಬೆಂಗಳೂರು ಸಂಭ್ರಮಾಚರಣೆಯಲ್ಲಿ ಕಾಲ್ತುಳಿತ ಪ್ರಕರಣ: ಆರ್‌ಸಿಬಿ ತಂಡ ಪರಿಹಾರ ಕೊಡಲು ಆಗ್ರಹ ಕಾಲ್ತುಳಿತ ದುರಂತದ ಸಂಪೂರ್ಣ ತನಿಖೆಯಾಗಬೇಕು: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹ Bangalore | ಐಪಿಎಲ್ ವಿಜಯೋತ್ಸವ: ಕಾಲ್ತುಳಿತಕ್ಕೆ 11 ಮಂದಿ ಸಾವು: ಮ್ಯಾಜಿಸ್ಟ್ರೀಯಲ್ ತನಿಖೆಗೆ…

ಇತ್ತೀಚಿನ ಸುದ್ದಿ

ಭಾರತದ ಭಯೋತ್ಪಾದನೆ ನಿಗ್ರಹ ಸಂದೇಶವನ್ನು ಗಯಾನಾದ ಉಪಾಧ್ಯಕ್ಷ ಭರತ್ ಜಗ್ದೇವ್ ಅವರಿಗೆ ತಲುಪಿಸಿದ ಶಶಿ ತರೂರ್, ತೇಜಸ್ವೀ ಸೂರ್ಯ

26/05/2025, 13:04

ಜಾರ್ಜ್‌ಟೌನ್, ಗಯಾನಾ | (reporterkarnataka.com): ಕಾಂಗ್ರೆಸ್ ಸಂಸದ ಡಾ. ಶಶಿ ತರೂರ್, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಮತ್ತು ಅಮೆರಿಕ ಪ್ರವಾಸದಲ್ಲಿರುವ ಭಾರತೀಯ ಸರ್ವಪಕ್ಷ ನಿಯೋಗದ ಸದಸ್ಯರು, ಗಯಾನಾ ಗಣರಾಜ್ಯದ ಉಪಾಧ್ಯಕ್ಷ ಘನತೆವೆತ್ತ ಭರತ್ ಜಗ್ದೇವ್ ಅವರನ್ನು ಭೇಟಿ ಮಾಡಿದ್ದು, ಈ ವೇಳೆ, ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ವಿರುದ್ಧ ಭಾರತದ ಶೂನ್ಯ ಸಹಿಷ್ಣುತೆಯ ನಿಲುವು ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಲಾಯಿತು.


ಉಪಾಧ್ಯಕ್ಷ ಜಗ್ದೇವ್ ಅವರು ಈ ಹಿಂದೆ 12 ವರ್ಷಗಳ ಕಾಲ ಗಯಾನಾದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಈ ಪ್ರದೇಶದ ಅತ್ಯಂತ ಗೌರವಾನ್ವಿತ ರಾಜಕಾರಣಿಗಳಲ್ಲಿ ಒಬ್ಬರು. ಇತ್ತೀಚೆಗೆ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಅವರು ಸ್ಪಷ್ಟವಾಗಿ ಖಂಡಿಸಿ, ಭಾರತದ ‘ಆಪರೇಷನ್ ಸಿಂದೂರ್’ ಕಾರ್ಯಾಚರಣೆಗೆ ಬಲವಾದ ಬೆಂಬಲ ವ್ಯಕ್ತಪಡಿಸಿದ್ದನ್ನು ಸ್ಮರಿಸಬಹುದು.
ಭಾರತ-ಗಯಾನಾ ನಡುವೆ ಹಲವು ಕ್ಷೇತ್ರಗಳಲ್ಲಿನ ಸಹಯೋಗದ ಬಗ್ಗೆಯೂ ಈ ಸಂದರ್ಭದಲ್ಲಿ ಉಭಯ ನಾಯಕರು ಚರ್ಚಿಸಿದರು.
ಸಭೆಯ ನಂತರ ಮಾತನಾಡಿದ ಸೂರ್ಯ ರವರು,
“ನಮ್ಮ ನಿಯೋಗವು ಗಯಾನಾದ ಉಪಾಧ್ಯಕ್ಷರಾದ ಭರತ್ ಜಗ್ದೇವ್ ಅವರನ್ನು ಭೇಟಿ ಮಾಡಿ, ಭಯೋತ್ಪಾದನೆಯ ವಿರುದ್ಧ ಭಾರತದ ಹೋರಾಟ ಸೇರಿದಂತೆ ಹಲವು ವಿಷಯಗಳ ಕುರಿತು ಅವರೊಂದಿಗೆ ಮಾತನಾಡಿದ್ದು, ಜಗ್ದೇವ್ ಅವರು ದೇಶದ ಅತ್ಯಂತ ಗೌರವಾನ್ವಿತ ನಾಯಕರಲ್ಲಿ ಒಬ್ಬರು. ಮೂಲಸೌಕರ್ಯ, ಇಂಧನ, ಫಿನ್ಟೆಕ್ ಮತ್ತು ಕೃಷಿ ಕ್ಷೇತ್ರಗಳಲ್ಲಿನ ಪ್ರಮುಖ ಅಭಿವೃದ್ಧಿ ಯೋಜನೆಗಳಲ್ಲಿ ಭಾರತದೊಂದಿಗೆ ಸಹಕರಿಸಲು ಅವರು ತೀವ್ರ ಆಸಕ್ತಿ ವ್ಯಕ್ತಪಡಿಸಿದ್ದು ವಿಶೇಷ.
ಗಯಾನಾ ಹೊಸ ತೈಲ ನಿಕ್ಷೇಪಗಳನ್ನು ಕಂಡುಕೊಳ್ಳುತ್ತಿದ್ದು, ಶೇ. 30ರಷ್ಟು ವೇಗವಾಗಿ ಬೆಳೆಯುತ್ತಿದೆ. ಹೀಗಾಗಿ, ಭಾರತೀಯ ವ್ಯವಹಾರಗಳಿಗೆ ಇಲ್ಲಿ ಅಪಾರ ಅವಕಾಶಗಳಿವೆ. ನಮ್ಮ ಎರಡೂ ರಾಷ್ಟ್ರಗಳ ನಡುವಿನ ಸಮನ್ವಯದ ಈ ಕ್ಷೇತ್ರಗಳ ಬಗ್ಗೆಯೂ ನಾವು ಚರ್ಚಿಸಿದ್ದೇವೆ.” ಎಂದು ತಿಳಿಸಿದರು.
ಇದಕ್ಕೂ ಮೊದಲು, ತೇಜಸ್ವಿ ಸೂರ್ಯ ಅವರು ಟೆಕ್ಸಿಲಾ ಅಮೆರಿಕನ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಯೋತ್ಪಾದನೆಯ ವಿರುದ್ಧ ಭಾರತದ ಶೂನ್ಯ-ಸಹಿಷ್ಣುತಾ ನೀತಿ, ನಿಲುವುಗಳ ಬಗ್ಗೆ ಮಾತನಾಡಿ, ಪಾಕಿಸ್ತಾನ ಪ್ರಾಯೋಜಿತ ಗಡಿಯಾಚೆಗಿನ ಭಯೋತ್ಪಾದನೆಯ ವಿರುದ್ಧ ಭಾರತದ ಸುದೀರ್ಘ ಹೋರಾಟವನ್ನು ಒತ್ತಿ ಹೇಳಿದ್ದು ಗಮನಾರ್ಹ.
ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆಯನ್ನು ನಿಲ್ಲಿಸಲು ಮತ್ತು ಶಾಂತಿಯನ್ನು ಎತ್ತಿಹಿಡಿಯಲು ಜಗತ್ತು ಒಂದಾಗಬೇಕು. ಆಪರೇಷನ್ ಸಿಂದೂರ್ ನಂತಹ ನಿರ್ಣಾಯಕ ಕ್ರಮಗಳ ಮೂಲಕ ಭಾರತ ಈ ಜಾಗತಿಕ ಪ್ರಯತ್ನದಲ್ಲಿ ಮುಂಚೂಣಿಯಲ್ಲಿದೆ.
ಟೆಕ್ಸಿಲಾ, ಭಾರತ-ಗಯಾನಾ ಸಂಬಂಧಗಳನ್ನು ಬಲಪಡಿಸುವ ಪ್ರಮುಖ ಸಂಸ್ಥೆಯಾಗಿದೆ. 2010 ರಿಂದ ಇಲ್ಲಿಯವರೆಗೆ 538 ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಮತ್ತು 76 ಭಾರತೀಯ ಅಧ್ಯಾಪಕರು ಹಾಗೂ ಸಿಬ್ಬಂದಿಯನ್ನು ಇದು ಆತಿಥ್ಯ ವಹಿಸಿದೆ. 234 ಕ್ಕೂ ಹೆಚ್ಚು ಭಾರತೀಯ ಪದವೀಧರರು ಪ್ರಸ್ತುತ ಗಯಾನಾದ ಆರೋಗ್ಯ ಸೇವಾ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು.
ಈ ನಿಯೋಗವು ಹಿರಿಯ ಸಂಸದ ಡಾ. ಶಶಿ ತರೂರ್ ನೇತೃತ್ವದ ಗ್ರೂಪ್ 5 ರ ಭಾಗವಾಗಿದೆ ಮತ್ತು ವಿವಿಧ ಪಕ್ಷಗಳ ಸಂಸದರನ್ನು ಒಳಗೊಂಡಿದೆ: ಶಾಂಭವಿ (ಎಲ್‌ಜೆಪಿ – ರಾಮ್ ವಿಲಾಸ್), ಡಾ. ಸರ್ಫರಾಜ್ ಅಹ್ಮದ್ (ಜೆಎಂಎಂ), ಜಿ.ಎಂ. ಹರೀಶ್ ಬಾಲಯೋಗಿ (ಟಿಡಿಪಿ), ಶಶಾಂಕ್ ಮಣಿ ತ್ರಿಪಾಠಿ (ಬಿಜೆಪಿ), ಭುವನೇಶ್ವರ್ ಕಲಿತಾ (ಬಿಜೆಪಿ), ಮಿಲಿಂದ್ ಮುರಳಿ ದಿಯೋರಾ (ಶಿವಸೇನೆ – ಶಿಂಧೆ ಬಣ), ಶ್ರೀ ತೇಜಸ್ವಿ ಸೂರ್ಯ (ಬಿಜೆಪಿ), ಮತ್ತು ರಾಯಭಾರಿ ತರಂಜಿತ್ ಸಿಂಗ್ ಸಂಧು ಸೇರಿದಂತೆ
ನಿಯೋಗದ ಒಂದು ಭಾಗವು ನ್ಯೂಯಾರ್ಕ್‌ನಲ್ಲಿರುವ 9/11 ಸ್ಮಾರಕಕ್ಕೆ ಭೇಟಿ ನೀಡಿದರೆ, ಶ್ರೀ ಸೂರ್ಯ ಮತ್ತು ಡಾ. ಅಹ್ಮದ್ ಅವರು ಭಾರತದಿಂದ 30 ಗಂಟೆಗಳ ಪ್ರಯಾಣದ ನಂತರ ನೇರವಾಗಿ ಗಯಾನಾಗೆ ತೆರಳಿದ್ದಾರೆ.
ಈ ಉಪಕ್ರಮವು ಭಯೋತ್ಪಾದನೆಯ ವಿರುದ್ಧ ಭಾರತದ ಬಲವಾದ ನಿಲುವನ್ನು ಜಗತ್ತಿಗೆ ತಲುಪಿಸಲು ಮತ್ತು ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ವಿರುದ್ಧದ ಹೋರಾಟಕ್ಕೆ ಜಾಗತಿಕ ಬೆಂಬಲವನ್ನು ಪಡೆಯಲು ಭಾರತ ಸರ್ಕಾರವು ಕೈಗೊಂಡ ಬಹು-ದೇಶಗಳ ಅಭಿಯಾನದ ಭಾಗವಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು