ಇತ್ತೀಚಿನ ಸುದ್ದಿ
Suratkal | ಸ್ಥಗಿತಗೊಂಡಿರುವ ಬಡವರ ವಸತಿ ಸಂಕೀರ್ಣ ಪೂರ್ಣಗೊಳಿಸಲು ಒತ್ತಾಯಿಸಿ ಸಿಪಿಎಂ, ಡಿವೈಎಫ್ಐ ಪ್ರತಿಭಟನೆ
24/04/2025, 10:30

ಸುರತ್ಕಲ್(reporterkarnataka.com) : ಸ್ಥಳೀಯ ಶಾಸಕರು, ಮಹಾನಗರ ಪಾಲಿಕೆಯ ಬಿಜೆಪಿ ಆಡಳಿತದ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನದಿಂದ ಇಡ್ಯಾ ವಾರ್ಡಿನಲ್ಲಿ ಬಡವರಿಗಾಗಿ ನಿರ್ಮಿಸಲಾಗುತ್ತಿದ್ದ 600 ಮನೆಗಳುಳ್ಳ ವಸತಿ ಯೋಜನೆ ಸ್ಥಗಿತಗೊಂಡಿದೆ ಎಂದು ಆರೋಪಿಸಿ ಸಿಪಿಎಂ ಮತ್ತು ಡಿವೈಎಫ್ಐ ವಲಯ ಸಮಿತಿ ನೇತೃತ್ವದಲ್ಲಿ ಜನತಾ ಕಾಲನಿಯ ಸ್ಥಗಿತಗೊಂಡಿರುವ ವಸತಿ ಸಮುಚ್ಚಯದ ಎದುರು ಪ್ರತಿಭಟನೆ ನಡೆಯಿತು.
ಪ್ರತಿಭಟನೆ ಉದ್ದೇಶಿಸಿ ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಜ್ ಮಾತನಾಡಿ, ಮಂಗಳೂರು ನಗರ ಪಾಲಿಕೆಯೊಳಗೆ ಸುಮಾರು ಹದಿನೈದು ಸಾವಿರಕ್ಕೂ ಹೆಚ್ಚು ಮನೆ, ನಿವೇಶನ ರಹಿತ ಬಡವರಿದ್ದಾರೆ. ನಗರ ಪಾಲಿಕೆ ಬಡವರಿಗೆ ನಿವೇಶನ ವಿತರಿಸಲು ಪಾಲಿಕೆಯಲ್ಲಿ ಯಾವುದೇ ಯೋಜನೆಯಿಲ್ಲ. ಇರುವಂಥ ಒಂದು ಜಿ+4 ವಸತಿ ಸಮುಚ್ಚಯ ಜನಪ್ರತಿನಿದಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಯೋಜನೆ ನೆನೆಗುದಿಗೆ ಬಿದ್ದಿದೆ. ಶ್ರೀಮಂತ ಬಿಲ್ಡರುಗಳ ವಸತಿ ಸಂಕೀರ್ಣದ ಭೂಮಿ ಪೂಜೆಗೆ ಹೋಗುವ ಶಾಸಕರುಗಳು ಕಳೆದ 25 ವರ್ಷಗಳಿಂದ ಬಡವರಿಗೆ ವಸತಿ ಸೌಕರ್ಯಗಳು ದೊರಕಿಸಿಕೊಡಲು ವಿಫಲರಾಗಿದ್ದಾರೆ ಎಂದು ಟೀಕಿಸಿದರು.
ಮಾಜಿ ಪಾಲಿಕೆ ಸದಸ್ಯ ದಯಾನಂದ ಶೆಟ್ಟಿ ಮಾತನಾಡಿ, ಜನರಿಗೆ ವಸತಿ ನೀಡುವುದು ಭಿಕ್ಷೆಯಲ್ಲ ಸಂವಿಧಾನಬದ್ದ ಹಕ್ಕಾಗಿದೆ. ನಗರಪಾಲಿಕೆ ವ್ಯಾಪ್ತಿಯೊಳಗಿನ ನಿವೇಶನ ರಹಿತರ ಸಮಸ್ಯೆ ಗಂಭೀರವಾಗಿದೆ ಶಾಸಕರ ನೇತೃತ್ವದ ಆಶ್ರಯ ಸಮಿತಿ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ. ಎಂದು ಆರೋಪಿಸಿದರು.
ಸಿಪಿಎಂ ದಕ್ಷಿಣ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ಮಾತನಾಡುತ್ತಾ ನಗರಪಾಲಿಕೆ ವ್ಯಾಪ್ತಿಯ ಎಲ್ಲಾ ನಿವೇಶನ ರಹಿತರನ್ನು ಸಂಘಟಿಸಿ ಪಾಲಿಕೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ಸಿಪಿಎಂ ಮುಖಂಡರಾದ ಶ್ರೀನಾಥ್ ಕುಲಾಲ್, ಐ. ಮೊಹಮ್ಮದ್, ಸಲೀಮ್ ಶಾಡೋ, ಡಿವೈಎಫ್ಐ ಮುಖಂಡರಾದ ಬಿ.ಕೆ. ಮಕ್ಸೂದ್, ನವಾಜ್ ಕುಲಾಯಿ, ಇಲ್ಯಾಸ್ ಕೃಷ್ಣಾಪುರ, ಇಮ್ತಿಯಾಜ್ ಕುಳಾಯಿ, ಹನೀಫ್ ಕುಳಾಯಿ, ಸಾದಿಕ್ ಕಿಲ್ಪಾಡಿ,ಆಟೋ ರಿಕ್ಷಾ ಚಾಲಕರ ಸಂಘದ ಮುಖಂಡರಾದ ಲಕ್ಷ್ಮೀಶ್ ಅಂಚನ್, ಬಷೀರ್ ಕಾನ, ನಿವೇಶನ ರಹಿತರ ಹೋರಾಟ ಸಮಿತಿಯ ಮುಖಂಡರಾದ ಬಾಲಾಕೃಷ್ಣ ಕುಳಾಯಿ, ಭವ್ಯ ಪಂಜಿಮೊಗರು, ಜೈನಾಬು, ದಿಲ್ ದಾರ್, ಹಸೀನಾ, ನೌಸೀನ, ಮರಿಯಮ್ಮ, ಮುಂತಾದವರು ಉಪಸ್ಥಿತರಿದ್ದರು.