ಇತ್ತೀಚಿನ ಸುದ್ದಿ
ಎಲ್ಲರೂ ಬುದ್ದಿ ಹೇಳೋರೆ ಇರೋದು; ಹೊಸಬರು ಹಿರಿಯ ಮಾತು ಕೇಳಿ ಕಲಿಯಿರಿ: ನೂತನ ಶಾಸಕರಿಗೆ ಸ್ಪೀಕರ್ ಖಾದರ್ ಮತ್ತೆ ಪಾಠ
13/03/2025, 21:26

ಬೆಂಗಳೂರು(reporterkarnataka.com): ಕೆಲವು ವ್ಯಕ್ತಿಗಳಿಂದ ಪೀಠಕ್ಕೆ ಹೆಸರು ಬಂದರೆ, ಇನ್ನು ಪೀಠದಿಂದ ಕೆಲವರಿಗೆ ಹೆಸರು ಬರುತ್ತದೆ. ಬಂಟ್ವಾಳದ ವೈಕುಂಠ ಬಾಳಿಗರ ತರಹ ಮಹಾನ್ ವ್ಯಕ್ತಿ ಅಲಂಕರಿಸಿದ ವಿಧಾನಸಭೆ ಸ್ಪೀಕರ್ ಪೀಠವನ್ನು ಮತ್ತೆ ದ.ಕ.ಜಿಲ್ಲೆಯ ಯು.ಟಿ. ಖಾದರ್ ಅವರು ಅಲಂಕರಿಸುವ ಮೂಲಕ ಆ ಪೀಠಕ್ಕೆ ಮತ್ತಷ್ಟು ಪ್ರಾಮುಖ್ಯತೆ ಬಂದಿದೆ.
ಸ್ಪೀಕರ್ ಖಾದರ್ ಅವರು ಕಾಂಗ್ರೆಸ್ ಸರಕಾರದ ನೂತನ ಸ್ಪೀಕರ್ ಆದ ಬಳಿಕ ಪ್ರತಿ ಅಧಿವೇಶನದಲ್ಲಿ ಹೊಸ ಹೊಸ ಸಲಹೆ ಸೂಚನೆಗಳ ಮೂಲಕ ಮಾದರಿಯಾಗುತ್ತಿದ್ದಾರೆ. ಮೊದಲ ಅಧಿವೇಶನದಲ್ಲೇ ಅವರು ಶಾಸಕರಿಗೆ ಸಮಯ ಪಾಲನೆಯ ಪಾಠ ಮಾಡಿದ್ದರು. ನೂತನ ಶಾಸಕರಿಗೆ ಕೋಚಿಂಗ್ ವ್ಯವಸ್ಥೆ ಮಾಡಿದ್ದರು. ಇದೀಗ ಪ್ರಸಕ್ತ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಹೊಸಬರು ಹಿರಿಯರ ಮಾತನ್ನು ಕೇಳಿ ಕಲಿಯಿರಿ ಎಂದು ಸೂಚ್ಯವಾಗಿ ಹೇಳಿದ್ದಾರೆ. ಅಂದ್ರೆ ಮೊದಲ ಬಾರಿಗೆ ವಿಧಾನ ಸಭೆ ಪ್ರವೇಶಿಸಿದ ಶಾಸಕರು ಉತ್ತಮ ಸಂಸದೀಯಪಟು ಆಗಲು ಹಿರಿಯ ಶಾಸಕರು ನಡೆದುಕೊಳ್ಳುವ ರೀತಿಯನ್ನು ನೋಡಿಕೊಂಡು ಕಲಿಯಿರಿ. ನಮ್ಮ ಶಾಸಕಾಂಗ, ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಅಧ್ಯಯನ ಮಾಡಿ ಎಂದು ಉಪದೇಶ ಮಾಡಿದ್ದಾರೆ.
‘ಎಲ್ಲರೂ ಬುದ್ದಿ ಹೇಳೋರೆ ಇರೋದು’ ಎಂದು ಒಂದು ಹಂತದಲ್ಲಿ ತನ್ನ ಅಸಮಾಧಾನವನ್ನು ಸ್ಪೀಕರ್ ಅವರು ಹೊರಹಾಕಿ, ಐದಾರು ಬಾರಿ ಗೆದ್ದು ಬನ್ನಿ ಆಮೇಲೆ ಮಾತಾಡಿ ಎಂದು ಹೇಳಿದ್ದಾರೆ.
ಹಾಗೆಂತ ಸ್ಪೀಕರ್ ಅವರು ನೂತನ ಶಾಸಕರು ಬಾಯಿ ಮುಚ್ಚಿ ಕುಳಿತುಕೊಳ್ಳಿ ಎಂದು ಹೇಳಿರುವುದಲ್ಲ. ಹಿರಿಯ ಶಾಸಕರು, ಸಂಸದೀಯ ಪಟುಗಳಿಂದ ಮತ್ತಷ್ಟು ಜ್ಞಾನಾರ್ಜನೆ ಮಾಡಿಕೊಳ್ಳಿ ಎಂಬ ಅರ್ಥ ದಲ್ಲಿ ಹೇಳಿದ್ದಾರೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಾರೆ.