ಇತ್ತೀಚಿನ ಸುದ್ದಿ
ವೈಕುಂಠ ಏಕಾದಶಿ: ನಂಜನಗೂಡು ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ವೈಕುಂಠ ವೈಭವ; ಸಾವಿರಾರು ಭಕ್ತರಿಂದ ದೇವರ ದರ್ಶನ
23/12/2023, 19:26

ಮೋಹನ್ ನಂಜನಗೂಡು ಮೈಸೂರು
info.reporterarnataka@gmail.com
ನಂಜನಗೂಡು ತಾಲೂಕು ಹುಲ್ಲಹಳ್ಳಿಯ ಸದ್ಗುರು ಶ್ರೀ ಮಹದೇವ ತಾತ ಬಡಾವಣೆಯಲ್ಲಿ ವಿಜಯಲಕ್ಷ್ಮಿ ನಾರಾಯಣ ರೆಡ್ಡಿ ದಂಪತಿ ನಿರ್ಮಿಸಿರುವ ನೂತನ ದೇವಾಲಯ ವೈಕುಂಠ ಏಕಾದಶಿ ಪ್ರಯುಕ್ತ ದೇವಾಲಯದ ವತಿಯಿಂದ ನಿನ್ನೆ ರಾತ್ರಿಯಿಂದಲೇ ಹೋಮ ಹವನ ವಿಶೇಷ ಪೂಜೆಗಳು ನಡೆದು ಇಂದು ಬೆಳಗ್ಗೆ ಎಂಟು ಗಂಟೆಯಿಂದ ಭಕ್ತರಿಗೆ ವೈಕುಂಠ ಮಹಾದ್ವಾರ ಹಾಗೂ ಪುಣ್ಯ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.
ಹುಲ್ಲಹಳ್ಳಿಯು ಸೇರಿದಂತೆ ಸುತ್ತಮುತ್ತಲ ಸಾವಿರಾರು ಭಕ್ತರು ದೇವಾಲಯಕ್ಕೆ ಬಂದು ಸರತಿ ಸಾಲಿನಲ್ಲಿ ನಿಂತು ಶ್ರೀ ವೆಂಕಟೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ತಮ್ಮ ಭಕ್ತಿ ಭಾವ ಮೆರೆದರು.
ಇಂದು ವಿಷ್ಣುವಿಗೆ ಪ್ರಿಯವಾದ ದಿನವಾದ್ದರಿಂದ ದೇವಾಲಯದ ವೈಕುಂಠ ದ್ವಾರದ ಮೂಲಕ ಬಂದು ದೇವರ ದರ್ಶನ ಪಡೆದರೆ ಪುಣ್ಯಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿಂದ ಸಾವಿರಾರು ಭಕ್ತರು ಬೆಳಿಗ್ಗೆಯಿಂದ ಸಂಜೆವರೆಗೂ ವೈಕುಂಠ ದ್ವಾರ ಪ್ರವೇಶಿಸಿ ಬಂದು ಶ್ರೀ ಅಲಮೇಲಮ್ಮ ಹಾಗೂ ಶ್ರೀ ವೆಂಕಟೇಶ್ವರಸ್ವಾಮಿ, ಗಣಪತಿ ಹಾಗೂ ಆಂಜನೇಯ ಸ್ವಾಮಿಯ ದರ್ಶನ ಪಡೆದು ಪುಳಕಿತರಾದರು. ವೈಕುಂಠ ಏಕಾದಶಿ ಪ್ರಯುಕ್ತ ದೇವಾಲಯ ಹಾಗೂ ಶ್ರೀ ವೆಂಕಟೇಶ್ವರ ಸ್ವಾಮಿ ಮತ್ತು ಅಲಮೇಲ ಮಂಗಮ್ಮನವರ ಮೂರ್ತಿಗಳನ್ನು ವಿಶೇಷವಾಗಿ ಬಣ್ಣ ಬಣ್ಣದ ಹೂಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು.
ಇದೇ ಸಂದರ್ಭ ದೇವಾಲಯಕ್ಕೆ ಬಂದ ಎಲ್ಲಾ ಭಕ್ತರಿಗೆ ಅನ್ನ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ದೇವಾಲಯದ ಟ್ರಸ್ಟಿ ಶ್ರೀನಿವಾಸ ರೆಡ್ಡಿ ಮಾತನಾಡಿ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ವೈಕುಂಠ ಏಕಾದಶಿ ಬಗ್ಗೆ ತಿಳಿಸಿದರು.