5:09 AM Wednesday12 - November 2025
ಬ್ರೇಕಿಂಗ್ ನ್ಯೂಸ್
ಎಲ್ಲಾ ಶೋಷಿತ ಸಮುದಾಯಗಳ ಧ್ವನಿಯಾಗಿ ಕಾಗಿನೆಲೆ ಪೀಠ ಸ್ಥಾಪಿಸಿದ್ದು ನಾನೇ: ಸಿಎಂ ಸಿದ್ದರಾಮಯ್ಯ Bangalore | ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದಾವಣಗೆರೆ ನಡುವೆ ನೇರ ಫ್ಲೈಬಸ್… Kodagu | ವಿರಾಜಪೇಟೆ: ಆತ್ಮಹತ್ಯೆಗೆ ಯತ್ನಿಸಿದ್ದ ಗೃಹಿಣಿ 3 ದಿನಗಳ ಬಳಿಕ ಚಿಕಿತ್ಸೆ… ಕೆಂಪು ಕೋಟೆ ಬಾಂಬ್ ಬ್ಲಾಸ್ಟ್ ಪ್ರಕರಣ | ಇಡೀ ದೇಶವೇ ಖಂಡಿಸಬೇಕಿದೆ: ಮಾಜಿ… ಕುಶಾಲನಗರದಲ್ಲಿ 8.60 ಕೋಟಿ ವೆಚ್ಚದ ಪ್ರಜಾಸೌಧ ತಾಲೂಕು ಆಡಳಿತ ಭವನ ನಿರ್ಮಾಣಕ್ಕೆ ಭೂಮಿ… ತಾಲ್ಲೂಕು ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಇರಬೇಕು; ತಪ್ಪಿದವರ ವಿರುದ್ಧ ವರದಿ ನೀಡಲು ಡಿಸಿಗೆ… Mysore | ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೇಟೆ: ಕೊಡಗು ಜಿಲ್ಲೆಯ ಇಬ್ಬರ… ಕೇಂದ್ರ ಸರ್ಕಾರದ ಸಾಲ ಕೊಡಿಸುವುದಾಗಿ ಮಹಿಳೆಯರಿಗೆ ಲಕ್ಷಕ್ಕೂ ಅಧಿಕ ವಂಚನೆ: ಮಡಿಕೇರಿ ನಿವಾಸಿ… Sports | ಖೇಲೋ ಇಂಡಿಯಾ ಮಹಿಳಾ ಹಾಕಿ ಟೂರ್ನಿ: ಕುಶಾಲನಗರದ ದಿಶಾ ನಿಡ್ಯಮಲೆ… ಸದ್ಯದಲ್ಲಿ ಸರ್ಕಾರಿ ಶಾಲೆಗಳಿಗೆ ಶಿಕ್ಷಕರ ನೇಮಕಾತಿ: ಸಚಿವ ಮಧು ಬಂಗಾರಪ್ಪ

ಇತ್ತೀಚಿನ ಸುದ್ದಿ

ಕರೋಕಿ ಇಲ್ಲದ ಲೈವ್ ಆರ್ಕೆಸ್ಟ್ರಾ: ಮಲೆನಾಡಿನ ಅಂಧ ಗಾಯಕರಿಗೆ ಕಡಲನಗರಿ ಫಿದಾ!

13/10/2022, 21:21

ಅಶೋಕ್ ಕಲ್ಲಡ್ಕ ಮಂಗಳೂರು

info.reporterkarnataka@gmail.com

ಅದೊಂದು ಲೈವ್ ಆರ್ಕೆಸ್ಟ್ರಾ… ಕ್ಯಾಸೆಟ್ ಇಲ್ಲ, ಕರೋಕಿ ಇಲ್ಲ. ಆಧುನಿಕ ಸಂಗೀತ ಸಲಕರಣೆಗಳಿಲ್ಲ. ಕೀ ಬೋರ್ಡ್ ಬಿಟ್ಟರೆ ಎಲ್ಲ ಸಾಂಪ್ರದಾಯಿಕ ಸಂಗೀತ ಸಾಧನ ಬಳಸಿ ರಸಮಂಜರಿ ಉಣ ಬಡಿಸಲಾಗುತ್ತಿತ್ತು. ಹಾಗೆಂತ ಸೆಲೆಬ್ರಿಟಿ ಗಳು, ಮರಿ ಸೆಲೆಬ್ರಿಟಿ ಗಳು ಯಾರೂ ಇಲ್ಲ. ಅವರೆಲ್ಲ ಸಾಮಾನ್ಯ ಹಾಡುಗಾರರು. ಅದೂ ಕೂಡ ಕಣ್ಣು ಕಾಣದ ಅಂಧ ಗಾಯಕರು!

ಇದೆಲ್ಲ ನಡೆದದ್ದು ಕಡಲನಗರಿ ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಳಿ 45 ನಂಬರ್ ಸಿಟಿ ಬಸ್ ನಿಲ್ಲುವ ಜಾಗದ ಪಕ್ಕದಲ್ಲಿ. ಬಸ್ ತಂಗುದಾಣದ ಪಕ್ಕದಲ್ಲಿರುವ ತ್ರಿಕೋನಾಕಾರದ ಪುಟ್ಟ ಜಾಗದಲ್ಲಿ ಒಂದು ಸಣ್ಣ ಸೆಟ್ ಅಪ್ ಮಾಡಿಕೊಂಡು ಅಲ್ಲೇ ಒಂದು ಸಣ್ಣ ವೇದಿಕೆ ನಿರ್ಮಿಸಿ, ದೊಡ್ಡ ಎರಡು ಸೌಂಡ್ ಬಾಕ್ಸ್ ಅಳವಡಿಸಿ ಹಿತವಾದ, ಮಿತವಾದ ಧ್ವನಿಯಲ್ಲಿ ರಸಮಂಜರಿ ನಡೆಯುತ್ತಿತ್ತು. ಇದನ್ನು ನಡೆಸುತ್ತಿದ್ದ ತಂಡ ನಮ್ಮ ನೆರೆಯ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಸಮೀಪದ ಕಾಂಚಿ ನಗರದ ಆಶ್ರಯ ಕಾಲೊನಿಯ ಶ್ರೀ ಶಾರದಾ ಅಂಧರ ಗೀತಗಾಯನ ಕಲಾ ಸಭಾದ ಕಲಾವಿದವರು. ವಿಶೇಷವೆಂದರೆ ಗಾಯಕರು, ಪಕ್ಕ ವಾದ್ಯದವರೆಲ್ಲ ಅಂಧರು. ಗಾಯಕರೊಬ್ಬರು ಕಾರ್ಯಕ್ರಮ ನಿರೂಪಿಸುವುದರ ಜತೆಗೆ ಮದ್ದಲೆ ನುಡಿಸುತ್ತಿದ್ದರು. ವಾದ್ಯ ಸಂಗೀತ ನುಡಿಸುತ್ತಿದ್ದವರೆಲ್ಲ ಗಾಯಕರೂ ಕೂಡ ಆಗಿದ್ದರು.

ಸಂಜೆ ಸುಮಾರು 4 ಗಂಟೆಯ ವೇಳೆಗೆ ಗಾನಸುಧೆ ಹರಿಯಲಾರಂಭಿಸಿತು. ಅಕ್ಕಪಕ್ಕದವರೆಲ್ಲ ಕ್ಷಣ ಮಾತ್ರದಲ್ಲಿ ಅಲ್ಲಿ ಸುತ್ತಮುತ್ತ ನೆರೆದಿದ್ದರು. ಹಾಡು ಕೇಳಿ ಕೆಲವರು ಬಂದ ಕಾರ್ಯವನ್ನೇ ಮರೆತಂತೆ ಕಂಡು ಬಂತು. ಇನ್ನೂ ಕೆಲವರು ಮೊಬೈಲ್ ಹೊರತೆಗೆದು ವೀಡಿಯೊ ಮಾಡಲಾರಂಭಿಸಿದರು. ಮತ್ತೆ ಕೆಲವರು ಫೋಟೋ ಕ್ಲಿಕ್ಕಿಸಲಾರಂಭಿಸಿದರು.
ಸಿನಿಮಾ ಹಾಡು, ಭಕ್ತಿಗೀತೆ, ಜನಪದ ಗೀತೆ, ತುಳು ಹಾಡುಗಳು ವಿವಿಧ ಗಾಯಕರಿಂದ ಅಲೆ ಅಲೆಯಾಗಿ ಹರಿಯಲಾರಂಭಿಸಿತು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬೊಂಬೆ ಹೇಳುತ್ತೈತೆ ಎಂಬ ಹಾಡು ಅಂಧ ಗಾಯಕರೊಬ್ಬರ ಕಂಠದಿಂದ ಹೊರ ಹೊಮ್ಮುತ್ತಿದ್ದಂತೆ ಅಲ್ಲಿ ನೆರೆದವರೆಲ್ಲ ಅಕ್ಷರಶಃ ಭಾವಪರವಶರಾದರು. ಕಾಲಿಗೆ ಬ್ಯಾಂಡೇಜ್ ಸುತ್ತಿದ್ದ ವೃದ್ಧರೊಬ್ಬರು 10 ರೂಪಾಯಿಯ ನೋಟು ತಂದು ಕಲಾವಿದರ ಮುಂದಿಟ್ಟ ಡಬ್ಬದೊಳಗೆ ತುರುಕುವ ದೃಶ್ಯವಂತು ಒಂದು ಕ್ಷಣ ಎಂಥಹ ಕಲ್ಲು ಹೃದಯವನ್ನಾದರೂ ಕರಗಿಸುವಂತಿತ್ತು. ನಂತರ ‘ಆಡಿಸಿ ನೋಡು ಬೀಳಿಸಿ ನೋಡು’ ಹಾಡು ಹೊರಹೊಮ್ಮಿತು.


ಯುವಕರು, ವೃದ್ಧರು, ಮಹಿಳೆಯರು, ಮಕ್ಕಳು, ಸಿಟಿ ಬಸ್ ಡ್ರೈವರ್ ಗಳು, ಕಂಡೆಕ್ಟರ್ ಗಳು, ಕೈಯಲ್ಲಿ ಚೀಲ ಹಿಡಿದರು, ಫೈಲ್ ಹಿಡಿದವರು ತಮ್ಮ ಶಕ್ತಿಗೆ ಅನುಸಾರವಾಗಿ ತಮ್ಮ ಆರ್ಥಿಕ ಸಹಾಯವನ್ನು ಆ ಪುಟ್ಟ ಡಬ್ಬದೊಳಗೆ ತುರುಕುತ್ತಿದ್ದರು. ಕಡಲನಗರಿಯಲ್ಲಿ ಮಾನವೀಯತೆ ಇನ್ನೂ ಜೀವಂತವಾಗಿದೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿತ್ತು. ಡಬ್ಬದೊಳಗೆ ಹಣ ತುರುಕಿದವರು ಮಾತ್ರ ಬಡವರು, ಕೆಳ ಮಧ್ಯಮ ವರ್ಗದವರು, ಮಧ್ಯಮ ವರ್ಗದವರಾಗಿದ್ದರು. ವಿಲಾಸಿ ಕಾರಿನಲ್ಲಿ ಬಂದವರು ಮಾತ್ರ ಇತ್ತ ಕಣ್ಣೆತ್ತಿಯೂ ನೋಡದೆ ತೆರಳುತ್ತಿರುವುದು ಕಂಡು ಬಂತು.

ಇತ್ತೀಚಿನ ಸುದ್ದಿ

ಜಾಹೀರಾತು