7:51 PM Saturday20 - June 2026
ಬ್ರೇಕಿಂಗ್ ನ್ಯೂಸ್
Chitradurga | ಪರಶುರಾಂಪುರ: ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ಎಸ್. ಆರ್. ರಾಜೇಶ್… ವಿಧಾನ ಪರಿಷತ್‌ ಚುನಾವಣೆಯಲ್ಲಿ ಅಡ್ಡ ಮತದಾನ: ಬಿ.ವೈ. ವಿಜಯೇಂದ್ರಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ… Bangalore | ಕಳ್ಳನ ಹಿಡಿಯಬೇಕಿದ್ದ ಖಾಕಿಯಿಂದಲೇ ಲೂಟಿ!: 20 ಲಕ್ಷ ದೋಚಿದ ಸಿಐಡಿ… ಕುಶಾಲನಗರ | ಹೆತ್ತ ತಾಯಿಯಿಂದಲೇ ಮಗನ ಬಲವಂತದ ಮತಾಂತರ: ಇಬ್ಬರ ಬಂಧನ ಗ್ಯಾರಂಟಿ ಸೌಲಭ್ಯಕ್ಕೆ ಹೊಸದಾಗಿ ಅರ್ಜಿ ಬೇಡ, ಮರು ಪರಿಶೀಲನೆ ಮಾತ್ರ: ಸಿಎಂ ಸಭೆಯಲ್ಲಿ… ವಿಧಾನ ಪರಿಷತ್ ಚುನಾವಣೆ ಫಲಿತಾಂಶ: ಫಲಿಸಿದ ಸಿಎಂ ಡಿಕೆಶಿ ರಣತಂತ್ರ; 5ರಲ್ಲಿ ಕೈ… ಬಾರ್ಬರ್ ಶಾಪ್‌ನಿಂದ ಬಿ-ಸ್ಕೂಲ್‌ವರೆಗೆ: ತಂದೆಯ ಕತ್ತರಿ ಹಿಡಿದ ಬಿಬಿಎ ವಿದ್ಯಾರ್ಥಿನಿ ಬಿಂದುಪ್ರಿಯಾ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರಾವಳಿ ಸಹಿತ ರಾಜ್ಯಾದ್ಯಂತ ಬಿರುಸಿನ ಮಳೆ ನಿರೀಕ್ಷೆ ದುಬಾರೆ ದುರಂತದ ಬಳಿಕ ರಾಜ್ಯದ ಆನೆ ಶಿಬಿರಗಳಲ್ಲಿ ಹೊಸ ನಿಯಮ ಜಾರಿ: ಪ್ರವಾಸಿಗರ… ವಿದ್ಯಾರ್ಥಿನಿ ಜೊತೆ ಅನೈತಿಕ ಸಂಬಂಧ ಆರೋಪ: ಕರ್ನಾಟಕ ವಿವಿ ಪ್ರೊ. ದೇವರಾಜನ್ ತಂಗದುರೈ…

ಇತ್ತೀಚಿನ ಸುದ್ದಿ

ಕರೋಕಿ ಇಲ್ಲದ ಲೈವ್ ಆರ್ಕೆಸ್ಟ್ರಾ: ಮಲೆನಾಡಿನ ಅಂಧ ಗಾಯಕರಿಗೆ ಕಡಲನಗರಿ ಫಿದಾ!

13/10/2022, 21:21

ಅಶೋಕ್ ಕಲ್ಲಡ್ಕ ಮಂಗಳೂರು

info.reporterkarnataka@gmail.com

ಅದೊಂದು ಲೈವ್ ಆರ್ಕೆಸ್ಟ್ರಾ… ಕ್ಯಾಸೆಟ್ ಇಲ್ಲ, ಕರೋಕಿ ಇಲ್ಲ. ಆಧುನಿಕ ಸಂಗೀತ ಸಲಕರಣೆಗಳಿಲ್ಲ. ಕೀ ಬೋರ್ಡ್ ಬಿಟ್ಟರೆ ಎಲ್ಲ ಸಾಂಪ್ರದಾಯಿಕ ಸಂಗೀತ ಸಾಧನ ಬಳಸಿ ರಸಮಂಜರಿ ಉಣ ಬಡಿಸಲಾಗುತ್ತಿತ್ತು. ಹಾಗೆಂತ ಸೆಲೆಬ್ರಿಟಿ ಗಳು, ಮರಿ ಸೆಲೆಬ್ರಿಟಿ ಗಳು ಯಾರೂ ಇಲ್ಲ. ಅವರೆಲ್ಲ ಸಾಮಾನ್ಯ ಹಾಡುಗಾರರು. ಅದೂ ಕೂಡ ಕಣ್ಣು ಕಾಣದ ಅಂಧ ಗಾಯಕರು!

ಇದೆಲ್ಲ ನಡೆದದ್ದು ಕಡಲನಗರಿ ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಳಿ 45 ನಂಬರ್ ಸಿಟಿ ಬಸ್ ನಿಲ್ಲುವ ಜಾಗದ ಪಕ್ಕದಲ್ಲಿ. ಬಸ್ ತಂಗುದಾಣದ ಪಕ್ಕದಲ್ಲಿರುವ ತ್ರಿಕೋನಾಕಾರದ ಪುಟ್ಟ ಜಾಗದಲ್ಲಿ ಒಂದು ಸಣ್ಣ ಸೆಟ್ ಅಪ್ ಮಾಡಿಕೊಂಡು ಅಲ್ಲೇ ಒಂದು ಸಣ್ಣ ವೇದಿಕೆ ನಿರ್ಮಿಸಿ, ದೊಡ್ಡ ಎರಡು ಸೌಂಡ್ ಬಾಕ್ಸ್ ಅಳವಡಿಸಿ ಹಿತವಾದ, ಮಿತವಾದ ಧ್ವನಿಯಲ್ಲಿ ರಸಮಂಜರಿ ನಡೆಯುತ್ತಿತ್ತು. ಇದನ್ನು ನಡೆಸುತ್ತಿದ್ದ ತಂಡ ನಮ್ಮ ನೆರೆಯ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಸಮೀಪದ ಕಾಂಚಿ ನಗರದ ಆಶ್ರಯ ಕಾಲೊನಿಯ ಶ್ರೀ ಶಾರದಾ ಅಂಧರ ಗೀತಗಾಯನ ಕಲಾ ಸಭಾದ ಕಲಾವಿದವರು. ವಿಶೇಷವೆಂದರೆ ಗಾಯಕರು, ಪಕ್ಕ ವಾದ್ಯದವರೆಲ್ಲ ಅಂಧರು. ಗಾಯಕರೊಬ್ಬರು ಕಾರ್ಯಕ್ರಮ ನಿರೂಪಿಸುವುದರ ಜತೆಗೆ ಮದ್ದಲೆ ನುಡಿಸುತ್ತಿದ್ದರು. ವಾದ್ಯ ಸಂಗೀತ ನುಡಿಸುತ್ತಿದ್ದವರೆಲ್ಲ ಗಾಯಕರೂ ಕೂಡ ಆಗಿದ್ದರು.

ಸಂಜೆ ಸುಮಾರು 4 ಗಂಟೆಯ ವೇಳೆಗೆ ಗಾನಸುಧೆ ಹರಿಯಲಾರಂಭಿಸಿತು. ಅಕ್ಕಪಕ್ಕದವರೆಲ್ಲ ಕ್ಷಣ ಮಾತ್ರದಲ್ಲಿ ಅಲ್ಲಿ ಸುತ್ತಮುತ್ತ ನೆರೆದಿದ್ದರು. ಹಾಡು ಕೇಳಿ ಕೆಲವರು ಬಂದ ಕಾರ್ಯವನ್ನೇ ಮರೆತಂತೆ ಕಂಡು ಬಂತು. ಇನ್ನೂ ಕೆಲವರು ಮೊಬೈಲ್ ಹೊರತೆಗೆದು ವೀಡಿಯೊ ಮಾಡಲಾರಂಭಿಸಿದರು. ಮತ್ತೆ ಕೆಲವರು ಫೋಟೋ ಕ್ಲಿಕ್ಕಿಸಲಾರಂಭಿಸಿದರು.
ಸಿನಿಮಾ ಹಾಡು, ಭಕ್ತಿಗೀತೆ, ಜನಪದ ಗೀತೆ, ತುಳು ಹಾಡುಗಳು ವಿವಿಧ ಗಾಯಕರಿಂದ ಅಲೆ ಅಲೆಯಾಗಿ ಹರಿಯಲಾರಂಭಿಸಿತು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬೊಂಬೆ ಹೇಳುತ್ತೈತೆ ಎಂಬ ಹಾಡು ಅಂಧ ಗಾಯಕರೊಬ್ಬರ ಕಂಠದಿಂದ ಹೊರ ಹೊಮ್ಮುತ್ತಿದ್ದಂತೆ ಅಲ್ಲಿ ನೆರೆದವರೆಲ್ಲ ಅಕ್ಷರಶಃ ಭಾವಪರವಶರಾದರು. ಕಾಲಿಗೆ ಬ್ಯಾಂಡೇಜ್ ಸುತ್ತಿದ್ದ ವೃದ್ಧರೊಬ್ಬರು 10 ರೂಪಾಯಿಯ ನೋಟು ತಂದು ಕಲಾವಿದರ ಮುಂದಿಟ್ಟ ಡಬ್ಬದೊಳಗೆ ತುರುಕುವ ದೃಶ್ಯವಂತು ಒಂದು ಕ್ಷಣ ಎಂಥಹ ಕಲ್ಲು ಹೃದಯವನ್ನಾದರೂ ಕರಗಿಸುವಂತಿತ್ತು. ನಂತರ ‘ಆಡಿಸಿ ನೋಡು ಬೀಳಿಸಿ ನೋಡು’ ಹಾಡು ಹೊರಹೊಮ್ಮಿತು.


ಯುವಕರು, ವೃದ್ಧರು, ಮಹಿಳೆಯರು, ಮಕ್ಕಳು, ಸಿಟಿ ಬಸ್ ಡ್ರೈವರ್ ಗಳು, ಕಂಡೆಕ್ಟರ್ ಗಳು, ಕೈಯಲ್ಲಿ ಚೀಲ ಹಿಡಿದರು, ಫೈಲ್ ಹಿಡಿದವರು ತಮ್ಮ ಶಕ್ತಿಗೆ ಅನುಸಾರವಾಗಿ ತಮ್ಮ ಆರ್ಥಿಕ ಸಹಾಯವನ್ನು ಆ ಪುಟ್ಟ ಡಬ್ಬದೊಳಗೆ ತುರುಕುತ್ತಿದ್ದರು. ಕಡಲನಗರಿಯಲ್ಲಿ ಮಾನವೀಯತೆ ಇನ್ನೂ ಜೀವಂತವಾಗಿದೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿತ್ತು. ಡಬ್ಬದೊಳಗೆ ಹಣ ತುರುಕಿದವರು ಮಾತ್ರ ಬಡವರು, ಕೆಳ ಮಧ್ಯಮ ವರ್ಗದವರು, ಮಧ್ಯಮ ವರ್ಗದವರಾಗಿದ್ದರು. ವಿಲಾಸಿ ಕಾರಿನಲ್ಲಿ ಬಂದವರು ಮಾತ್ರ ಇತ್ತ ಕಣ್ಣೆತ್ತಿಯೂ ನೋಡದೆ ತೆರಳುತ್ತಿರುವುದು ಕಂಡು ಬಂತು.

ಇತ್ತೀಚಿನ ಸುದ್ದಿ

ಜಾಹೀರಾತು