ಇತ್ತೀಚಿನ ಸುದ್ದಿ
ಆತ್ಮಶಕ್ತಿ ಸಹಭಾಗಿತ್ವದಲ್ಲಿ ಸಹಕಾರ ನಿರ್ವಹಣೆಯಲ್ಲಿ ಉನ್ನತ ಡಿಪ್ಲೋಮದ 9ನೇ ಬ್ಯಾಚ್ ಹಾಗೂ 74 ಮತ್ತು 75ನೇ ಅಧಿವೇಶ ಉದ್ಘಾಟನೆ
21/07/2026, 22:59
ಮಂಗಳೂರು(reporterkarnataka.com): ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ ಬೆಂಗಳೂರು ಮತ್ತು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಮಂಗಳೂರು ಇದರ ಸಮನ್ವಯದಲ್ಲಿ ನಡೆಸಲ್ಪಡುವ ಸಹಕಾರ ನಿರ್ವಹಣೆಯಲ್ಲಿ ಉನ್ನತ ಡಿಪ್ಲೋಮ ಇದರ 9ನೇ ಬ್ಯಾಚ್ ಹಾಗೂ 74 ಮತ್ತು 75ನೇ ಅಧಿವೇಶನದ ಉದ್ಘಾಟನಾ ಸಮಾರಂಭವು ನಗರದ ಪಡೀಲ್ ನ “ಆತ್ಮಶಕ್ತಿ ಸೌಧ”ದಲ್ಲಿ ಜರುಗಿತು.
ಶಿಕ್ಷಣಾರ್ಥಿಗಳಿಗೆ ಪಠ್ಯಪುಸ್ತಕ ವಿತರಿಸುವ ಮುಖಾಂತರ ಕಾರ್ಯಕ್ರಮದ ಉದ್ಘಾಟನೆಯನ್ನು ನೇರವೇರಿಸಲಾಯಿತು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ರವರು ಪ್ರಾಸ್ತವಿಕ ಮಾತನಾಡಿ “ನವದೆಹಲಿಯ ನ್ಯಾಷನಲ್ ಕೌನ್ಸಿಲ್ ಫಾರ್ ಕೋ-ಆಪರೇಟಿವ್ ಟ್ರೈನಿಂಗ್ (ಎನ್.ಸಿ.ಸಿ.ಟಿ) ಇದರ ಅಂಗಸಂಸ್ಥೆ ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ (ಆರ್.ಐ.ಸಿ.ಎಮ್) ಬೆಂಗಳೂರು, ಇವರಿಂದ ನಡೆಸಲ್ಪಡುವ ಸಹಕಾರ ನಿರ್ವಹಣೆಯಲ್ಲಿ ಉನ್ನತ ಡಿಪ್ಲೋಮ ತರಬೇತಿಯನ್ನು ಕಳೆದ ಹತ್ತು ವರ್ಷಗಳಿಂದ ಮಂಗಳೂರನ್ನು ಕೇಂದ್ರಿಕೃತವಾಗಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸಹಭಾಗಿತ್ವದಲ್ಲಿ ಅವಿಭಜಿತ ದ.ಕ ಮತ್ತು ಉಡುಪಿ ಜಿಲ್ಲೆಯ ಸಹಕಾರಿಗಳಿಗೆ ನೇರವಾಗುವ ನಿಟ್ಟಿನಲ್ಲಿ ನಿರಂತರವಾಗಿ ನಡೆಸುತ್ತಾ ಬಂದಿರುತ್ತದೆ. ಸಹಕಾರ ಸಂಘದ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಯಲ್ಲಿ ಮತ್ತು ಸಿಬ್ಬಂದಿಗಳ ಹುದ್ದೆಯ ಪದೋನ್ನತಿಯಲ್ಲಿ ಸಹಕಾರ ನಿರ್ವಹಣೆಯಲ್ಲಿ ಉನ್ನತ ಡಿಪ್ಲೋಮಕ್ಕೆ ಪ್ರಾಶಸ್ತ್ಯ ನೀಡಲಾಗುತ್ತಿದೆ, ಈಗಾಗಲೇ ಸುಮಾರು 1000ಕ್ಕೂ ಮಿಕ್ಕಿ ಶಿಕ್ಷಣಾರ್ಥಿಗಳು ಸಹಕಾರ ನಿರ್ವಹಣೆಯಲ್ಲಿ ಉನ್ನತ ಡಿಪ್ಲೋಮ ತರಬೇತಿಯನ್ನು ಪಡೆದಿದ್ದು, 500ಕ್ಕೂ ಮಿಕ್ಕಿ ಶಿಕ್ಷಣಾರ್ಥಿಗಳು ಪದೋನ್ನತಿ ಹೊಂದಿದ್ದು, 40ಕ್ಕೂ ಮಿಕ್ಕಿ ಶಿಕ್ಷಣಾರ್ಥಿಗಳು ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಪದೋನ್ನತಿ ಹೊಂದಿರುತ್ತಾರೆ” ಎಂದು ತಿಳಿಸಿದರು.
ಆರ್.ಐ.ಸಿ.ಎಮ್ ಬೆಂಗಳೂರು ಇದರ ತರಬೇತಿ ಸಮನ್ವಯ ಅಧಿಕಾರಿ ಹಾಗೂ ಉಪನ್ಯಾಸಕರಾಗಿದ್ದ ಶ್ರೀ ಸುರೇಶ್ ಪಿ.ಎನ್. ಇವರು ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ (ಆರ್.ಐ.ಸಿ.ಎಮ್) ಬೆಂಗಳೂರು, ಇದರ ಉಪನಿರ್ದೇಶಕರಾಗಿ ಪದೋನ್ನತಿ ಹೊಂದಿರುವುದಕ್ಕೆ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಮಂಗಳೂರು ಇದರ ವತಿಯಿಂದ ಸನ್ಮಾನಿಸುವ ಮೂಲಕ ಗೌರವಿಸಲಾಯಿತು.

74 ಮತ್ತು 75ನೇ ಅಧಿವೇಶನದಲ್ಲಿ ಇತರೆ ಸಹಕಾರ ಸಂಘದ ಸಿಬ್ಬಂದಿಗಳು ಹಾಗೂ ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಸೇರಿದಂತೆ ಒಟ್ಟು 101 ಶಿಕ್ಷಣಾರ್ಥಿಗಳು ನೋಂದಾಯಿಸಿರುತ್ತಾರೆ.
ಆತ್ಮಶಕ್ತಿ ವಿವಿಧೋದ್ದೋಶ ಸಹಕಾರಿ ಸಂಘದ ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ, ಆರ್.ಐ.ಸಿ.ಎಮ್ ಬೆಂಗಳೂರು ಇದರ ತರಬೇತಿ ಸಮನ್ವಯ ಅಧಿಕಾರಿ ಹಾಗೂ ಉಪನ್ಯಾಸಕರಾದ ಡಾ. ಜಯಪ್ರಕಾಶ್ ಎಮ್ ಹಾಗೂ ಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.











