ಇತ್ತೀಚಿನ ಸುದ್ದಿ
ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ನಿರ್ಧಾರ ಕೈಬಿಡದಿದ್ದರೆ ಧರಣಿ: ವಿವಿಧ ಸಂಘಟನೆಗಳ ಆಕ್ರೋಶ
18/07/2026, 19:41
ಗಿರಿಧರ್ ಕೊಂಪುಳಿರ ಮೈಸೂರು
info.reporterkarnataka@gmail.com
ದಸರಾ ಹಬ್ಬದಲ್ಲಿ ಕಂಬಳ ಆಯೋಜನೆ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ, ಪರಿಸರಕ್ಕಾಗಿ ನಾವು ಸಂಘಟನೆ, ದಲಿತ ಸಂಘರ್ಷ ಸಮಿತಿ, ಟೀಂ ಮೈಸೂರು, ಕನ್ನಡ ಪರ ಸಂಘಟನೆಗಳು ಹಾಗೂ ಕೆಆರ್ಎಸ್ ಪಕ್ಷದ ಸದಸ್ಯರು ಪ್ರತಿಭಟಿಸಿದರು. ಕಂಬಳ ನಡೆಸಲು ಉದ್ದೇಶಿಸಿರುವ ಸಾತಗಳ್ಳಿ ಜಮೀನಿನಲ್ಲಿ ಶನಿವಾರ ಬೆಳಿಗ್ಗೆ ಜಮಾಯಿಸಿದ ಪ್ರತಿಭಟನಾಕಾರರು, ಹಬ್ಬದಿಂದ ಸಂಭ್ರಮ ಪಡಬೇಕು, ಸಂಕಟ ಆಗಬಾರದು. ಕಂಬಳ ಆಯೋಜನೆ ನಿರ್ಧಾರದಿಂದ ಹಿಂದೆ ಸರಿಯಿರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಂಬಳ ಆಯೋಜನೆ ಕೈ ಬಿಟ್ಟಿದ್ದೇವೆ ಎಂದು ಘೋಷಿಸದಿದ್ದರೇ ಇದೇ ಸ್ಥಳದಲ್ಲಿ ಧರಣಿ ಸತ್ಯಾಗ್ರಹ ಕೂರುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಗಿಂಬಳ ಗಿಟ್ಟಿಸಲು ಕಂಬಳ ಬೇಡ, ಈ ಭೂಮಿಯ ಹಕ್ಕು ಮಾನವನಿಗೆ ಮಾತ್ರ ಅಲ್ಲ ಸಕಲ ಜೀವಿಗೂ ಬದುಕುವ ಹಕ್ಕಿದೆ, ಕಂಬಳ ಕ್ರೀಡೆಗಾಗಿ ಪರಿಸರ ನಾಶ ಖಂಡನೀಯ, ಮರಗಳನ್ನು ಕಡಿದು, ಕೆರೆಗಳನ್ನು ಮುಚ್ಚಿ ಕಂಬಳ ಮಾಡಬೇಕೆ?, ಸ್ಥಳೀಯ ಕಲೆಗಳಿಗೆ ಆದ್ಯತೆ ಮಾನ್ಯತೆ ದೊರೆಯಲಿ, ಸರ್ಕಾರವೇ ಕೆರೆ ಮುಚ್ಚುವುದು ಬೇಲಿಯೇ ಎದ್ದು ಹೊಲ ಮೇದಂತೆ, ಇದು ಮರಗಳನ್ನು ಬೆಳೆಸಬೇಕಾದ ಕಾಲ, ಅವುಗಳನ್ನು ಕಡಿವುದು ಸಲ್ಲ ಇತ್ಯಾದಿ ಘೋಷಣಾ ವಾಕ್ಯ ಇರುವ ಫಲಕಗಳನ್ನು ಪ್ರದರ್ಶಿಸಿದರು.
*ಪೊಲೀಸ್ ಬಂದೋಬಸ್ತ್:* ಪ್ರತಿಭಟನಾ ಸ್ಥಳದಲ್ಲಿ ಹಿರಿಯ ಅಧಿಕಾರಿಗಳ ಸಹಿತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಪ್ರತಿಭಟನೆ ನಡೆಸುವವರಿಗಿಂತ ಹೆಚ್ಚು, ಪೊಲೀಸರೇ ಸೇರಿದ್ದರು. ಅನುಮತಿ ಪಡೆದು ನಡೆಸುತ್ತಿದ್ದ ಪ್ರತಿಭಟನೆಗೆ ಪೊಲೀಸರ ಭದ್ರತೆ ನೋಡಿ ಪ್ರತಿಭಟನಾಕಾರರೇ ಅಚ್ಚರಿಪಟ್ಟರು.’ಪೊಲೀಸರು ನಿಜಾಂಶ ಅರಿತು ಪರಿಸರ ಸಂರಕ್ಷಣೆ ಮಾಡುತ್ತಿರುವವರ ರಕ್ಷಣೆ ಮಾಡಬೇಕು. ರಾಜಕಾರಣಿಗಳ ಕೈಗೊಂಬೆಗಳಾಗಬಾರದು’ ಎಂದು ಆಗ್ರಹಿಸಿದರು.













