ಇತ್ತೀಚಿನ ಸುದ್ದಿ
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕುಟುಂಬಸ್ಥರಿಂದ ಭೂಕಬಳಿಕೆ ಆರೋಪ: ಮುಖ್ಯಮಂತ್ರಿ ಡಿಕೆಶಿ ಮುಂದೆ ಹಾಸನ ರೈತರ ದೂರಿನ ಸುರಿಮಳೆ
30/06/2026, 18:13
ಬೆಂಗಳೂರು(reporterkarnataka.com): ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಹಾಸನ ಜಿಲ್ಲಾ ರೈತ ಸಂಘಟನೆಯ ಪ್ರತಿನಿಧಿಗಳ ನಿಯೋಗವು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿತು.
ಈ ವೇಳೆ ಪ್ರಸ್ತಾಪಿಸಿದ ರೈತರು, ಎಚ್.ಡಿ.ದೇವೇಗೌಡ ಎಜುಕೇಷನ್ ಟ್ರಸ್ಟ್ ಮಾಡಲು ನಮ್ಮ ಭೂಮಿ ಕಬಳಿಕೆ ಮಾಡಲಾಗಿದೆ. ಅದರಲ್ಲೂ, ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಕುಮ್ಮಕ್ಕಿನಿಂದ ನಿವೇಶನವೂ ಇಲ್ಲ, ಪರಿಹಾರವೂ ಇಲ್ಲ. ಐಐಟಿಗೆ ಮೊದಲು 334 ಎಕರೆ ಭೂಸ್ವಾಧೀನ ಎನ್ನುವ ಮಾತುಗಳು ಕೇಳಿಬಂದವು, ನಂತರ 1057 ಎಕರೆ ಎಂದು ಹೇಳಿದರು. ಈಗ ನೋಡಿದರೆ ಐಐಟಿ ಧಾರವಾಡಕ್ಕೆ ಹೋಗಿದೆ.ಆದರೆ, ಅದರ ಹೆಸರಲ್ಲಿ ದೇವೇಗೌಡರ ಕುಟುಂಬ ಭೂಕಬಳಿಸಲು ಸಂಚು ಮಾಡಿದೆ ಎಂದು ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ನಾನು ಬಿಡದಿ ರೈತರಿಗೆ ಒಂದು ನ್ಯಾಯ, ಹಾಸನ ರೈತರಿಗೆ ಮತ್ತೊಂದು ನ್ಯಾಯ ಮಾಡುವುದಿಲ್ಲ. ರೈತರ ಕೈಗೆ ಹೆಚ್ಚಿಗೆ ಹಣ ಬಂದರೆ ಎಲ್ಲರಿಗಿಂತ ಹೆಚ್ಚು ಸಂತೋಷ ಪಡುವವನು ನಾನು. ಈ ಸರಕಾರ ರೈತರ ಪರವಾಗಿ ಇರುತ್ತದೆ. ಸಂಬಂಧಪಟ್ಟ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಸ್ಥಳದಲ್ಲೇ ಚರ್ಚಿಸಿ, ಸಮಸ್ಯೆಗಳ ಶೀಘ್ರ ಹಾಗೂ ಕಾನೂನುಬದ್ಧ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡುತ್ತೇನೆ ಎಂದರು.
ಸಭೆಯಲ್ಲಿ ಹಾಸನ ಕಾಂಗ್ರೆಸ್ ಸಂಸದ ಶ್ರೇಯಸ್ ಪಟೇಲ್, ಶಾಸಕ ಶಿವಲಿಂಗೇಗೌಡ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಗೋಪಾಲಸ್ವಾಮಿ ಸೇರಿದಂತೆ ಯೋಜನೆ ವ್ಯಾಪ್ತಿಯ ಏಳು ಗ್ರಾಮಗಳ ರೈತರು ಭಾಗಿಯಾಗಿದ್ದರು.













