6:44 PM Tuesday30 - June 2026
ಬ್ರೇಕಿಂಗ್ ನ್ಯೂಸ್
Belagavi | ವಿವಾಹಿತೆಯೊಂದಿಗೆ ಪರಾರಿ: ಯುವಕನ ಮನೆ ಧ್ವಂಸ; ಕುರಿಗಳನ್ನೂ ಹೊತ್ತೊಯ್ದು ಭರ್ಜರಿ… ಮತಾಂತರ ಆರೋಪ: ಕುಶಾಲನಗರದಲ್ಲಿ ಸ್ವಯಂಪ್ರೇರಿತ ಬಂದ್; ಎಲ್ಲವೂ ಸ್ತಬ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕುಟುಂಬಸ್ಥರಿಂದ ಭೂಕಬಳಿಕೆ ಆರೋಪ: ಮುಖ್ಯಮಂತ್ರಿ ಡಿಕೆಶಿ ಮುಂದೆ ಹಾಸನ… ಗೆಳೆಯ ವೈಶಾಖ್‌ ಆತ್ಮಹತ್ಯೆ ಪ್ರಕರಣ: ಫಸ್ಟ್‌ ರಿಯಾಕ್ಷನ್ ಕೊಟ್ಟ ನಟಿ ಕೃಷಿ ತಾಪಂಡ ರೆಸಾರ್ಟ್ ನ ಈಜುಕೊಳದಲ್ಲಿ ದುರಂತ | 10 ಅಡಿ ಎತ್ತರದಿಂದ 4 ಅಡಿ… 2 ದಿನಗಳ ರಾಜ್ಯ ಪ್ರವಾಸ ಮುಗಿಸಿದ ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರಿಗೆ… ಆರೆಸ್ಸೆಸ್ ವಿರುದ್ಧ ಪೋಸ್ಟ್ : ಗೃಹ ಸಚಿವ ಪ್ರಿಯಾಂಕ್ ಖರ್ಗೆ, ನಲಪಾಡ್‌ಗೆ ಕೋರ್ಟ್… ಕ್ರಿಪ್ಟೋ ಹೂಡಿಕೆ ಹೆಸರಿನಲ್ಲಿ ಕೋಟ್ಯಂತರ ರೂ. ವಂಚನೆ ಆರೋಪ: ತೀರ್ಥಹಳ್ಳಿ ಕಾಲೇಜು ಪ್ರಾಧ್ಯಾಪಕ… ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ತೂರಿದ ಪ್ರಕರಣ | 4 ಮಂದಿ… ಮುಂಬೈ | ಮೊಹರಂ ವೇಳೆ ಸಾಮೂಹಿಕ ವಿಷಪ್ರಾಶನಕ್ಕೆ ಸಂಚು: 14,900 ಕ್ಯಾಪ್ಸುಲ್‌ ವಶಕ್ಕೆ;…

ಇತ್ತೀಚಿನ ಸುದ್ದಿ

ಸಮುದ್ರದಲ್ಲಿ ತುಫಾನ್ ಏಳದಿದ್ದರೆ ಮಳೆಗಾಲದಲ್ಲಿ ಮೀನು ಸಿಗಲ್ವಾ?: ಈ ‘ನಂಬಿಕೆ’ ಹಿಂದೆ ಅಡಗಿದೆ ವೈಜ್ಞಾನಿಕ ಸತ್ಯ!

30/06/2026, 18:10

ಮನೋಜ್ ಕೆ.ಬೆಂಗ್ರೆ, ಮಂಗಳೂರು

info.reporterkarnataka@gmail.com

“ಮಳೆಗಾಲದಲ್ಲಿ ಸಮುದ್ರದಲ್ಲಿ ಒಂದ್ಸಲವಾದರೂ ತುಫಾನ್ ಎದ್ದೇಳಬೇಕು… ಇಲ್ಲಾಂದ್ರೆ ಈ ಸೀಸನ್‌ನಲ್ಲಿ ಮೀನು ಸಿಗುವುದು ತುಂಬಾ ಕಷ್ಟ, ಮಾರ್ರೆ!” ಕರಾವಳಿಯ ಮೀನುಗಾರರ ಬಾಯಲ್ಲಿ ಈ ಮಾತು ನೀವು ಹಲವು ಬಾರಿ ಕೇಳಿರಬಹುದು. ಸಮುದ್ರ ಶಾಂತವಾಗಿದ್ದರೆ ಮೀನು ಸಿಗಲ್ಲ, ಅದೇ ಸಮುದ್ರ ರೊಚ್ಚಿಗೆದ್ದು ಮತ್ತೆ ಕೂಲ್ ಆದ್ರೆ ಹೆಚ್ಚು ಮೀನು ಸಿಗುತ್ತೆ ಅನ್ನೋದು ಕರಾವಳಿಯ ಹಿರಿಯ ಮೀನುಗಾರರ ಬಲವಾದ ನಂಬಿಕೆ. ​


ಆದರೆ, ಚಂಡಮಾರುತಕ್ಕೂ ಮೀನು ಸಿಗುವುದಕ್ಕೂ ನಿಜವಾಗಿಯೂ ಲಿಂಕ್ ಇದೆಯಾ? ವಿಜ್ಞಾನ ಏನು ಹೇಳುತ್ತೆ? ಕರಾವಳಿಯ ಈ ‘ನಂಬಿಕೆ’ ಹಿಂದಿರುವ ‘ಸತ್ಯತೆ’ ಏನು?

*’ಸಮುದ್ರ ಅಡಿಮೇಲು’: ಏನಿದು ಪ್ರಕೃತಿ ಮಹಿಮೆ!*
​ವಿಜ್ಞಾನದ ಪ್ರಕಾರ, ಸಮುದ್ರ ಮೇಲ್ನೋಟಕ್ಕೆ ಶಾಂತವಾಗಿದ್ದಾಗ ಮೇಲಿನ ನೀರು ಬಿಸಿಯಾಗಿರುತ್ತದೆ ಮತ್ತು ಪೌಷ್ಟಿಕಾಂಶಗಳೆಲ್ಲ ಸಮುದ್ರದ ತಳಭಾಗದಲ್ಲಿ (Bottom) ಕುಳಿತಿರುತ್ತವೆ. ಆದರೆ ಮಳೆಗಾಲದಲ್ಲಿ ಭಾರಿ ಗಾಳಿ ಬೀಸಿ, ತುಫಾನ್ ಮುನ್ಸೂಚನೆ ಇರುವಾಗ ಸಮುದ್ರದಲ್ಲಿ ದೊಡ್ಡ ತಲ್ಲಣ ಸೃಷ್ಟಿಯಾಗುತ್ತದೆ.
​ಇದನ್ನು ವಿಜ್ಞಾನಿಗಳು ‘ಅಪ್‌ವೆಲ್ಲಿಂಗ್’ (Upwelling) ಎನ್ನುತ್ತಾರೆ. ಅಂದರೆ ಸಮುದ್ರದ ತಳದಲ್ಲಿದ್ದ ತಣ್ಣನೆಯ ನೀರು ಮತ್ತು ಅದ್ಭುತ ಪೌಷ್ಟಿಕಾಂಶಗಳು (Nutrients) ಮೇಲಕ್ಕೆ ಚಿಮ್ಮುತ್ತವೆ. ಈ ಪೌಷ್ಟಿಕಾಂಶಗಳನ್ನು ತಿನ್ನಲು ಕೋಟ್ಯಂತರ ಸಣ್ಣ ಪ್ಲಾಂಕ್ಟನ್‌ಗಳು (Planktons) ಮೇಲ್ಮೈಗೆ ಬರುತ್ತವೆ. ಇವುಗಳನ್ನು ಬೇಟೆಯಾಡಲು ಬೂತಾಯಿ (Sardines), ಬಂಗುಡೆ (Mackerel) ಸೇರಿದಂತೆ ಇತರ ಮೀನುಗಳ ಹಿಂಡು ದಡದ ಹತ್ತಿರ ಮತ್ತು ಸಮುದ್ರದ ಮೇಲ್ಭಾಗಕ್ಕೆ ಧಾವಿಸಿ ಬರುತ್ತವೆ. ಸಮುದ್ರ ಕಲಕಿದಾಗ ಮೀನು ಸಿಗಲು ಇದೇ ಪ್ರಮುಖ ಕಾರಣ.

*​ತುಫಾನ್ ಎದ್ದಾಗ ದಿಕ್ಕು ತಪ್ಪುವ ಮತ್ಸ್ಯ ಸಂಕುಲ!*
​ಭಾರಿ ಗಾಳಿ ಮತ್ತು ಅಲೆಗಳ ಅಬ್ಬರಕ್ಕೆ ಸಮುದ್ರದ ನೀರು ಸಂಪೂರ್ಣವಾಗಿ ಗೊಂದಲಮಯವಾಗುತ್ತದೆ. ಈ ಕ್ಷೋಭೆಯ ಸಮಯದಲ್ಲಿ ಮೀನುಗಳು ತಮ್ಮ ದಿಕ್ಕನ್ನು ಕಳೆದುಕೊಳ್ಳುತ್ತವೆ ಮತ್ತು ಸುರಕ್ಷಿತ ಜಾಗ ಅರಸಿ ದಡದ ಕಡೆಗೆ ಬರುತ್ತವೆ. ತುಫಾನ್ ತಣ್ಣಗಾದ ಸಮಯದಲ್ಲಿ ಮೀನುಗಾರರಿಗೆ ಬಲೆ ತುಂಬಾ ಮೀನು ಸಿಗುವುದು ಇದೇ ಕಾರಣಕ್ಕೆ.

*ಆಳದಲ್ಲೇ ಆರಾಮವಿದ್ರೆ… ಓಡಿಸ್ತಾನೆ ಮಳೆರಾಯ:*
​ತುಫಾನ್ ಬಾರದಿದ್ದರೂ ಮೀನುಗಳು ಸಮುದ್ರದಲ್ಲಿ ಇದ್ದೇ ಇರುತ್ತವೆ! ಆದರೆ, ಸಮುದ್ರ ಸಂಪೂರ್ಣ ಶಾಂತವಾಗಿದ್ದಾಗ ಅವು ಆಳ ಸಮುದ್ರದ ತಳಭಾಗದಲ್ಲಿ ಆರಾಮವಾಗಿರುತ್ತವೆ. ಹಾಗಾಗಿ ಮಳೆಗಾಲದಲ್ಲಿ ನಾಡದೋಣಿಗಳಿಗೆ ಅವು ಸುಲಭವಾಗಿ ಸಿಗುವುದಿಲ್ಲ.

*​ಸ್ವಲ್ಪ ಜಾಸ್ತಿ ಮೀನು ಬಂದ್ರೆ ‘ದೊಡ್ಡ ಸುದ್ದಿ’:*
​ಮಳೆಗಾಲದಲ್ಲಿ ಜೂನ್ ಮತ್ತು ಜುಲೈ ತಿಂಗಳಲ್ಲಿ ಯಾಂತ್ರೀಕೃತ ಚಿಕ್ಕ-ದೊಡ್ಡ ಬೋಟ್‌ ಮೀನುಗಾರಿಕೆಯನ್ನು ಸಂಪೂರ್ಣ ನಿಷೇಧಿಸಲಾಗಿರುತ್ತದೆ. ಇದು ಮೀನುಗಳ ಸಂತಾನೋತ್ಪತ್ತಿಯ (Breeding Season) ಟೈಮ್. ಈ ಅವಧಿಯಲ್ಲಿ ಕೇವಲ ನಾಡದೋಣಿಗಳು ಮಾತ್ರ ದಡದಿಂದ ಇಂತಿಷ್ಟೇ ದೂರದಲ್ಲಿ ಮೀನು ಹಿಡಿಯುತ್ತವೆ. ಸಪ್ಲೈ ಕಡಿಮೆಯಿರುವಾಗ, ಸಮುದ್ರದ ಅಬ್ಬರದ ಮಧ್ಯೆ ಸ್ವಲ್ಪ ಜಾಸ್ತಿ ಮೀನು ಮಾರುಕಟ್ಟೆಗೆ ಬಂದರೂ ಅದು ‘ದೊಡ್ಡ ಸುದ್ದಿ’ಯಾಗುತ್ತದೆ.

*ಮಳೆ ಬಿದ್ದರೆ ಮೀನು ಭರಪೂರ:*
“ರೈತರು ಉತ್ತಮ ಮಳೆಗಾಗಿ ಹೇಗೆ ಕಾಯುತ್ತಾ ಇರುತ್ತಾರೆಯೋ ಹಾಗೇ ಮೀನುಗಾರರು ಕೂಡ ಮಳೆಯ ನಿರೀಕ್ಷೆಯಲ್ಲಿರುತ್ತಾರೆ. ಏಕೆಂದರೆ ಮಳೆ ಬಿದ್ದರೆ ನದಿ, ಸಮುದ್ರದಲ್ಲಿ ಲವಣಾಂಶ ಹೆಚ್ಚಾಗಿ ಮೀನುಗಳಿಗೆ ಯಥೇಚ್ಛವಾಗಿ ಆಹಾರ ಸಿಗುತ್ತದೆ. ಈ ಸಂದರ್ಭ ತುಫಾನ್ ಬಂದರೆ ಸಮುದ್ರದ ಆ ಏರಿಯಾದಲ್ಲಿ ಮಂಥನವಾದಂತಾಗುತ್ತವೆ. ಆಗ ಮೀನುಗಳು ಸ್ವಾಭಾವಿಕವಾಗಿ ಆಹಾರದ ಆಸೆಯಿಂದ ಆ ತೀರ ಪ್ರದೇಶಗಳತ್ತ ಧಾವಿಸುತ್ತವೆ” ಎಂದು ಬೆಂಗ್ರೆಯ ಮೀನುಗಾರ ಅಲ್ಬರ್ಟ್(ಅಲ್ಬಿ) ಹೇಳುತ್ತಾರೆ.
​​ಹಾಗಾಗಿ, “ತುಫಾನ್ ಆಗದಿದ್ದರೆ ಮೀನು ಸಿಗಲ್ಲ” ಎಂಬ ಮೀನುಗಾರರ ಅನುಭವದ ಮಾತು ಬರೀ ನಂಬಿಕೆಯಲ್ಲ, ಅದರ ಹಿಂದೆ ದೊಡ್ಡ ವಿಜ್ಞಾನವೇ ಅಡಗಿದೆ! ಕಡಲ ಒಡಲಿನ ‘ಅಡಿಮೇಲು’ ಪ್ರಕ್ರಿಯೆಯೇ ಕರಾವಳಿಯ ಜೀವನಾಡಿಯಾದ ಮೀನುಗಾರಿಕೆಗೆ ಶಕ್ತಿ, ಮೀನುಗಾರರ ತುತ್ತಿನ ಚೀಲ ತುಂಬಿಸುತ್ತದೆ.

ಇತ್ತೀಚಿನ ಸುದ್ದಿ

ಜಾಹೀರಾತು