ಇತ್ತೀಚಿನ ಸುದ್ದಿ
ಕೊಡಗು ಮತ್ತು ಕಣ್ಣೂರು ಪ್ರಯಾಣಿಕರ ಗಮನಕ್ಕೆ: ವಿಮಾನ ವೇಳಾಪಟ್ಟಿಯಲ್ಲಿ ಪ್ರಮುಖ ಬದಲಾವಣೆ
17/06/2026, 22:37
ಗಿರಿಧರ್ ಕೊಂಪುಳಿರ ಮೈಸೂರು
info.reporterkarnataka@gmail.com
ಹೆಚ್ಚುತ್ತಿರುವ ಇಂಧನ ದರ ಹಾಗೂ ಜಾಗತಿಕ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಕೊಡಗು ಜಿಲ್ಲೆಯ ಜನರಿಗೆ ಅತ್ಯಂತ ಹತ್ತಿರವಿರುವ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ವಿಮಾನಗಳ ವೇಳಾಪಟ್ಟಿ ಬದಲಾಗಲಿದೆ.
ಏರ್ ಇಂಡಿಯಾ ಎಕ್ಸ್ಪ್ರೆಸ್ ಮತ್ತು ಇಂಡಿಗೋ ಸಂಸ್ಥೆಗಳು ತಮ್ಮ ಕೆಲವು ದೇಶೀಯ ವಿಮಾನ ಸೇವೆಗಳನ್ನು ಕಡಿತಗೊಳಿಸುತ್ತಿದ್ದು, ಇಂಡಿಗೋ ಸಂಸ್ಥೆಯು ಜುಲೈನಿಂದ ಪ್ರತಿ ದಿನ ಇದ್ದ ದೆಹಲಿ ವಿಮಾನ ಸೇವೆಯನ್ನು ಕಡಿತಗೊಳಿಸಿ ವಾರಕ್ಕೆ ಕೇವಲ 3 ದಿನ ಮಾತ್ರ ನಡೆಸಲು ನಿರ್ಧರಿಸಿದೆ.
ಇನ್ನು ಬೆಂಗಳೂರು ಮಾರ್ಗದಲ್ಲೂ ಕಡಿತವಾಗಿದ್ದು, ದಿನಕ್ಕೆ ಎರಡು ವಿಮಾನಗಳಿದ್ದ ಇಂಡಿಗೋ ಸೇವೆ ಜೂನ್ 15 ರಿಂದ ದಿನಕ್ಕೆ ಕೇವಲ 1 ವಿಮಾನಕ್ಕೆ ಸೀಮಿತವಾಗಲಿದೆ. ಆದಾಗ್ಯೂ, ಜೂನ್ 1ರಂದು ಸ್ಥಗಿತಗೊಂಡಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ನ ಬೆಂಗಳೂರು ವಿಮಾನ ಸೇವೆ ಜೂನ್ 23ರಿಂದ ಮತ್ತೆ ಆರಂಭವಾಗಲಿದ್ದು ವಾರಕ್ಕೆ 2 ದಿನ ಸಂಚರಿಸಲಿದೆ.
ಮಾರ್ಚ್ ತಿಂಗಳಿನಲ್ಲಿ ಜಾಗತಿಕ ಸಂಘರ್ಷಗಳ ಕಾರಣದಿಂದ ಕಣ್ಣೂರು ವಿಮಾನ ನಿಲ್ದಾಣದ ಪ್ರಯಾಣಿಕರ ಸಂಖ್ಯೆ ಕೇವಲ 5,329 ಕ್ಕೆ ಕುಸಿದಿತ್ತಾದರೂ, ಮೇ ತಿಂಗಳಿನಲ್ಲಿ 87,259 ಕ್ಕೆ ಏರಿಕೆಯಾಗುವ ಮೂಲಕ ಪ್ರಯಾಣಿಕರ ಸಂಖ್ಯೆ ಈಗ ಗಣನೀಯವಾಗಿ ಚೇತರಿಸಿಕೊಳ್ಳುತ್ತಿದೆ. ಬೆಂಗಳೂರು ಮತ್ತು ದೆಹಲಿ ಮಾರ್ಗಗಳ ಕಡಿತದಿಂದಾಗಿ ಮಡಿಕೇರಿ, ವಿರಾಜಪೇಟೆ, ಗೋಣಿಕೊಪ್ಪಲು ಮತ್ತು ಕುಶಾಲನಗರ ಭಾಗದಿಂದ ಕಣ್ಣೂರು ಮೂಲಕ ಪ್ರಯಾಣಿಸುವ ಸಾರ್ವಜನಿಕರು ತಮ್ಮ ಪ್ರಯಾಣವನ್ನು ಯೋಜಿಸುವ ಮುನ್ನ ಹೊಸ ವೇಳಾಪಟ್ಟಿಯನ್ನು ಮತ್ತೊಮ್ಮೆ ಪರಿಶೀಲಿಸಿಕೊಳ್ಳುವುದು ಒಳ್ಳೆಯದು.












