ಇತ್ತೀಚಿನ ಸುದ್ದಿ
ಬಂಟ್ವಾಳ ಸಜಿಪಮೂಡ | ಅಕ್ರಮ ಜಾನುವಾರು ವಧೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
29/05/2026, 21:33
ಬಂಟ್ವಾಳ(reporterkarnataka.com): ಅಕ್ರಮ ಜಾನುವಾರು ವಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಜಾನುವಾರುಗಳು ಹಾಗೂ ಮಾಂಸ ಸ್ವಾಧೀನ ಪಡಿಸಿಕೊಂಡಿದ್ದಾರೆ.
ಮೇ 27ರಂದು ರಾತ್ರಿ, ಅಕ್ರಮ ಜಾನುವಾರು ವಧೆ ನಡೆಯುತ್ತಿರುವ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣಾ ಉಪ ನಿರೀಕ್ಷಕರಾದ ಸಂದೀಪ್ ಕುಮಾರ್ ಶೆಟ್ಟಿ ಅವರಿಗೆ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಗಳೊಂದಿಗೆ ಬಂಟ್ವಾಳ ಸಜಿಪಮೂಡ ಗ್ರಾಮದ ಪಂಜಾಜೆ ಎಂಬಲ್ಲಿಗೆ ತೆರಳಿ ಪರಿಶೀಲಿಸಿದಾಗ, ಮನೆಯೊಂದರ ಹಿಂಬದಿಯ ಕೊಟ್ಟಿಗೆಯಲ್ಲಿ ಮಾಂಸ ಕತ್ತರಿಸುತ್ತಿರುವುದು ಕಂಡುಬಂದಿರುತ್ತದೆ. ಈ ವೇಳೆ ಧಾಳಿ ನಡೆಸಿ ಇಬ್ಬರನ್ನು ಹಿಡಿದು ವಿಚಾರಿಸಿದಾಗ, ಬಂಟ್ವಾಳ ಸಜಿಪಮೂಡ ನಿವಾಸಿ ಮುಸ್ತಾಪ (33) ಹಾಗೂ ಬಂಟ್ವಾಳ ಬಿ ಕಸಬಾ ನಿವಾಸಿ ಮಹಮ್ಮದ್ ಸಾದೀಕ್ (30) ಎಂಬುದಾಗಿ ತಿಳಿದುಬಂದಿರುತ್ತದೆ. ವಿಚಾರಣೆಯ ವೇಳೆ ಆರೋಪಿಗಳು ಪರವಾನಿಗೆ ಹೊಂದದೇ ಅಕ್ರಮವಾಗಿ ಕೃತ್ಯ ನಡೆಸುತ್ತಿರುವುದು ಧೃಢಪಟ್ಟಿದ್ದು, ಸ್ಥಳದಲ್ಲಿ ಒಂದು ಜಾನುವಾರನ್ನು ವಧೆ ಮಾಡಿ ಕತ್ತರಿಸಲಾದ ಮಾಂಸ, 6 ಜಾನುವಾರುಗಳು, ಒಂದು ಕಾರು ಹಾಗೂ ಕೃತ್ಯಕ್ಕೆ ಬಳಸಿದ ಸಾಮಾಗ್ರಿಗಳು ಪತ್ತೆಯಾಗಿರುತ್ತದೆ. ಮುಂದಿನ ಕಾನೂನು ಕ್ರಮಕ್ಕಾಗಿ ಆರೊಪಿಗಳನ್ನು ಜಾನುವಾರುಗಳನ್ನು ಮತ್ತು ಇತರೆ ಸೊತ್ತುಗಳೊಂದಿಗೆ ವಶಕ್ಕೆ ಪಡೆದು, ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ 68/2026, ಕಲಂ: 4,7,12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.












