ಇತ್ತೀಚಿನ ಸುದ್ದಿ
ಮಾಲೀಕನೊಂದಿಗೆ ಲೈಂಗಿಕ ಕ್ರಿಯೆಗೆ ನಿರಾಕರಣೆ; ಹಲ್ಲೆಯಿಂದ ಕೇರಳದ ಮಹಿಳೆ ಸಾವು
09/05/2026, 18:27
ತ್ರಿಶೂರು(reporterkarnataka.com): ಕೆಲಸಕ್ಕಿದ್ದ ಮಾಲೀಕನ ಜೊತೆ ಲೈಂಗಿಕ ಕ್ರಿಯೆಗೆ ಒಪ್ಪದ ಕಾರಣ ಹಲ್ಲೆ ಒಳಗಾಗಿ ತ್ರಿಶೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೇರಳದ ಮಹಿಳೆ ಮೃತಪಟ್ಟಿದ್ದಾರೆ. ಕೇರಳಂ ಸುನೀತಾ ಸ್ಮೀತಾ(47)ಮೃತ ಮಹಿಳೆ. ಮೃತಳ ಪತಿ ಸಿಂಟೋ ಆ್ಯಂಟನಿ ತ್ರಿಶೂರ್ ಪೊಲೀಸ್ ಠಾಣೆಯಲ್ಲಿ ಸೂಲಿಬೆಲೆಯ ದೀಪಕ್ ಕೃಷ್ಣ ಎಂಬಾತನ ವಿರುದ್ಧ ದೂರು ದಾಖಲಿಸಿದ್ದರು. ತ್ರಿಶೂರ್ ಪೊಲೀಸರು ಪ್ರಕರಣವನ್ನು ಸೂಲಿಬೆಲೆ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದರು.

ಮೇ 5ರಂದು ಸೂಲಿಬೆಲೆ ಪೊಲೀಸರು ಆರೋಪಿ ದೀಪಕ್ ಕೃಷ್ಣನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ದೀಪಕ್ ಕೃಷ್ಣ ಸೂಲಿಬೆಲೆಯ ತಮ್ಮ ಮನೆಯಲ್ಲಿ ನಾಯಿಗಳನ್ನು ಸಾಕಿದ್ದರು. ಅವುಗಳ ಆರೈಕೆಗೆ ಕೇರಳಂನ ತ್ರಿಶೂರ್ ಜಿಲ್ಲೆಯ ಪಥಮ್ಕಲ್ಲು ನಿವಾಸಿ ಸುನೀತಾ ಸ್ಮಿತಾ ಅವರನ್ನು ಕರೆ ತಂದಿದ್ದರು. ಸ್ಮಿತಾ ಜೊತೆ ಆಲೀನಾ, ಚಿನ್ನು ಎಂಬುವರೂ ಬಂದಿದ್ದರು.
ಮೇ 3ರಂದು ಆರೋಪಿ ದೀಪಕ್, ಸ್ಮಿತಾ ಅವರನ್ನು ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಒತ್ತಾಯಿಸಿದ್ದ. ಅದಕ್ಕೆ ನಿರಾಕರಿಸಿದ ಸ್ಮಿತಾ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ತಲೆಗೆ ಗಂಭೀರ ಪೆಟ್ಟಾಗಿತ್ತು. ಬಿಡಿಸಲು ಬಂದ ಅಲೀನಾ, ಚಿನ್ನು ಅವರಿಗೂ ಚಾಕು ತೋರಿಸಿ ಬೆದರಿಸಿದ್ದ ಎಂದು ಪೊಲೋಸರು ತಿಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಸ್ಮಿತಾ ಅವರನ್ನು ತಕ್ಷಣ ಸೂಲಿಬೆಲೆಯ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ ನಂತರ ಎಂವಿಜೆ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು.ಆರೋಗ್ಯ ಸ್ಥಿತಿ ಗಂಭಿರವಾಗಿದ್ದ ಕಾರಣ ಕೃತಕ ಉಸಿರಾಟ ಕಲ್ಪಿಸಲಾಗಿತ್ತು. ಪರಿಸ್ಥಿತಿ ಬಿಗಡಾಯಿಸಿದ್ದರಿಂದ ತ್ರಿಶೂರ್ ಜುಬಿಲಿ ಮಿಷನ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಕೃತಕ ಉಸಿರಾಟ ವ್ಯವಸ್ಥೆಯಲ್ಲಿದ್ದ ಸ್ಮಿತಾ ಮಂಗಳವಾರ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರು.
*ಜೈಲಿನಿಂದ ಬಂದು ಕೃತ್ಯ:*
ಸೂಲಿಬೆಲೆಯ ನಿರ್ಜನ ಪ್ರದೇಶದಲ್ಲಿ ಮನೆ ಕಟ್ಟಿಕೊಂಡಿರುವ ದೀಪಕ್ ಕೃಷ್ಣ ಅದರಲ್ಲಿ ನಾಯಿಗಳನ್ನು ಸಾಕಿಕೊಂಡಿದ್ದಾರೆ. ಮನೆ ಒಳಗೆ ಏನೇ ನಡೆದರೂ ಹೊರಗೆ ಗೋತ್ತಾಗದಂತೆ ಮನೆಯ ಸುತ್ತಲೂ ಎತ್ತರದ ಕಾಂಪೌಂಡ್ ಕಟ್ಟಿಸಿದ್ದಾರೆ. ಆಗಾಗ ಗಲಾಟೆ ಮಾಡುವುದು ಈತನ ಚಾಳಿಯಾಗಿತ್ತು ಎಂದು ಸ್ಥಳೀಯರು ದೂರಿದ್ದಾರೆ. ಕೆಲ ತಿಂಗಳ ಹಿಂದೆ ಸೂಲಿಬೆಲೆ ಬಾರ್ವೊಂದರ ಮುಂದೆ ಗಲಾಟೆ ಮಾಡಿ ಗನ್ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದ. ಇದರಿಂದ ಜೈಲು ಸೇರಿದ್ದ ದೀಪಕ್ ಕೃಷ್ಣ ಜೈಲಿನಿಂದ ಹೊರ ಬಂದು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
*ಕೇರಳದಲ್ಲಿ ಸುನೀತಾ ಸಾವು ಸದ್ದು:*
ಸುನೀತಾ ಸ್ಮೀತಾ ಸಾವು ಕೇರಳದಲ್ಲಿ ದೊಡ್ಡ ಸದ್ದು ಮಾಡುತ್ತಲಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಸಾವಿನ ಚರ್ಚೆ ನಡೆಯುತ್ತಿದೆ. ಆರೋಪಿ ವಿರುದ್ಧ ಸಾರ್ವಜನಿಕರು ಹಾಗೂ ಸೆಲೆಬ್ರೆಟಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಟಿ ಪಾರ್ವತಿ ತಿರುವೋತ್ತರ್ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿ ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.












