ಇತ್ತೀಚಿನ ಸುದ್ದಿ
ಬೆಂಗಳೂರಯ | ಬೆತ್ತಲೆ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ: ಬೆಡ್ರೂಮ್ ತುಂಬಾ ಹರಿದ ಪೇಪರ್ ತುಂಡುಗಳು
28/04/2026, 21:14
ಬೆಂಗಳೂರು(reporterkarnataka.com): ಬೆಂಗಳೂರಿನ ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಜಾರ್ಖಂಡ್ ಮೂಲದ 34 ವರ್ಷದ ಪೂಜಾ ದತ್ತಾ ಎಂಬ ಮಹಿಳೆ ತನ್ನ ಬಾಡಿಗೆ ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಈಕೆ ಹಿಂದೆ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಸದ್ಯ ಕೆಲಸ ಬಿಟ್ಟಿದ್ದರು ಎನ್ನಲಾಗಿದೆ. ಇಂದು ಸಂಜೆ ಈಕೆಯ ಮೃತದೇಹ ಮನೆಯೊಳಗೆ ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಾವಿನ ಸುತ್ತ ಹತ್ತಾರು ಅನುಮಾನಗಳು ಸೃಷ್ಟಿಯಾಗಿವೆ.
*ಮನೆಯಿಂದ ಬರುತ್ತಿತ್ತು ವಾಸನೆ:*
ಪೂಜಾ ದತ್ತಾ ಎರಡು ಮೂರು ದಿನಗಳ ಹಿಂದೆಯೇ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಮೃತದೇಹ ಸಂಪೂರ್ಣವಾಗಿ ಕೊಳೆಯಲು ಶುರುವಾಗಿದ್ದು, ಅಕ್ಕಪಕ್ಕದ ರೂಮಿನವರಿಗೆ ಭೀಕರ ವಾಸನೆ ಬಂದಿದೆ. ಅನುಮಾನಗೊಂಡು ಬಾಗಿಲು ತೆರೆದು ನೋಡಿದಾಗ ಪೂಜಾ ಮೃತದೇಹ ಕಂಡುಬಂದಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಬಂದ ಆಡುಗೋಡಿ ಪೊಲೀಸರು ಪರಿಶೀಲನೆ ನಡೆಸಿದಾಗ ರೂಮ್ ತುಂಬಾ ಪೇಪರ್ ತುಂಡುಗಳನ್ನು ಹರಿದು ಹಾಕಿರೋದು ಪತ್ತೆಯಾಗಿದೆ.
ಪೂಜಾ ವಾಸವಿದ್ದ ರೂಮಿನ ತುಂಬಾ ಬರೀ ಪೇಪರ್ ಪತ್ತೆಯಾಗಿದೆ. ಡ್ರಾಯಿಂಗ್ ಮಾಡಿರುವ ನೂರಾರು ಪೇಪರ್ ಗಳು ಪತ್ತೆ.ಪ್ರೇಮ ವೈಫಲ್ಯದಿಂದ ಡಿಪ್ರೆಶನ್ ನಲ್ಲಿದ್ದರಾ ಅನ್ನೋ ಶಂಕೆ ವ್ಯಕ್ತವಾಗಿದೆ. ಯುವಕನ ಹೆಸರು ಬರೆದಿಟ್ಟಿರುವ ಪೇಪರ್ಗಳು ಪತ್ತೆಯಾಗಿವೆ. ಆಡುಗೋಡಿಯ ಮುನಿಕೃಷ್ಣಪ್ಪ ಲೇಔಟ್ನಲ್ಲಿ ಪೂಜ ವಾಸವಿದ್ದರು. ಪೂಜಾ ಕೈ ಮತ್ತು ಕುತ್ತಿಗೆ ಬಳಿ ಗಾಯದ ಗುರುತುಗಳು ಪತ್ತೆಯಾಗಿವೆ.
*ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ:?*
ಮನೆಯಲ್ಲಿ ಪೂಜಾ ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯ ಐಡಿ ಕಾರ್ಡ್ ಪತ್ತೆಯಾಗಿದೆ. ಶವ ಬೆತ್ತಲೆ ಸ್ಥಿತಿಯಲ್ಲಿ ಇರುವುದು ಮತ್ತು ರೂಮಿನಲ್ಲಿದ್ದ ಪೇಪರ್ಗಳನ್ನು ಹರಿದು ಹಾಕಿರುವುದು ನೋಡಿದರೆ ಇದೊಂದು ವ್ಯವಸ್ಥಿತ ಸಂಚು ಇರಬಹುದೇ ಎಂಬ ಸಂಶಯ ಮೂಡಿಸಿದೆ.
ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸುತ್ತಿದ್ದು, ಮರಣೋತ್ತರ ಪರೀಕ್ಷೆಯ ವರದಿಯ ನಂತರವಷ್ಟೇ ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಅಸಲಿ ಸತ್ಯ ಹೊರಬರಬೇಕಿದೆ.












