ಇತ್ತೀಚಿನ ಸುದ್ದಿ
ಗೋಮಾತ ಗೌರವ ದಿನ: ವಿಶ್ವ ಹಿಂದೂ ಪರಿಷತ್ ವತಿಯಿಂದ ಅಭಿಯಾನ; ಸರಕಾರಕ್ಕೆ ಮನವಿ ಸಲ್ಲಿಕೆ
27/04/2026, 23:17
ಎಚ್ ಡಿ ಕೋಟೆ(reporterkarnataka.com): ಏಪ್ರಿಲ್ 27 ಗೋಮಾತಾ ಗೌರವ ದಿನವಾದ ಇಂದು ಗೋವು ರಕ್ಷಣೆಗೆ ಸಂಬಂಧಿಸಿದ ಹತ್ತು ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಎಚ್ ಡಿ ಕೋಟೆ ತಾಲೂಕು ಘಟಕದ ವತಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ತಹಸೀಲ್ದಾರ್ ಮುಖಾಂತರ ಮನವಿ ಪತ್ರ ಸಲ್ಲಿಸಲಾಯಿತು.
ಹೆಗ್ಗಡದೇವ ಕೋಟೆ ತಾಲೂಕು ಕಚೇರಿಗೆ ತೆರಳಿದ ವಿಶ್ವ ಹಿಂದೂ ಪರಿಷತ್ ಮುಖಂಡರುಗಳು ತಹಸೀಲ್ದಾರ್ ಶ್ರೀನಿವಾಸ್ ಅವರ ಮುಖಾಂತರ ಭಾರತದ ಸನ್ಮಾನ್ಯ ರಾಷ್ಟ್ರಪತಿಗಳು, ಸನ್ಮಾನ್ಯ ಪ್ರಧಾನ ಮಂತ್ರಿಗಳು ಸೇರಿದಂತೆ ಕರ್ನಾಟಕ ಸರ್ಕಾರದ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಗೋಮಾತೆಗೆ ರಾಷ್ಟ್ರೀಯ ತಾಯಿ, ರಾಷ್ಟ್ರೀಯ ದೇವತೆ, ರಾಷ್ಟ್ರೀಯ ಪರಂಪರೆ ಅಥವಾ ರಾಷ್ಟ್ರೀಯ ಗುರುತಿನ ಗೌರವಾನ್ವಿತ ಸ್ಥಾನವನ್ನು ನೀಡಬೇಕು, ಗೋವಿನ ಸೇವೆಗಾಗಿ ಕೇಂದ್ರ ಕಾನೂನು ರೂಪಿಸಬೇಕು ಭಾರತದಲ್ಲಿ ಗೋ ಹತ್ಯೆಯನ್ನು ಸಂಪೂರ್ಣವಾಗಿ ಕೊನೆಗಾಣಿಸಬೇಕು ಸೇರಿದಂತೆ ಗೋ ರಕ್ಷಣೆಗೆ ಸಂಬಂಧಿಸಿದಂತೆ ಅನುದಾನ ನೀಡುವುದು ಗೋಶಾಲೆಗಳನ್ನು ತೆರೆದು ಮೇವು ಒದಗಿಸುವುದು ಕಾನೂನು ಮತ್ತು ರಕ್ಷಣೆ ಒದಗಿಸುವುದು, ಗೋವು ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ತೆರೆಯುವುದು, ಸರ್ಕಾರಿ ಮತ್ತು ಸರ್ಕಾರೇತರ ಶಾಲಾ ಕಾಲೇಜುಗಳಲ್ಲಿ ದೇಸಿ ಹಸುಗಳ ವೈಜ್ಞಾನಿಕ, ಆರ್ಥಿಕ ಮತ್ತು ಧಾರ್ಮಿಕ ಮಹತ್ವವು ಕಡ್ಡಾಯ ಅಧ್ಯಯನ ವಿಷಯಗಳಾಗಿರಬೇಕು ಎಂಬ ಹತ್ತು ಹಲವು ಬೇಡಿಕೆ ಹಾಗೂ ವಿಷಯಗಳನ್ನು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.

ಮನವಿ ಪತ್ರ ಸ್ವೀಕರಿಸಿದ ತಹಸೀಲ್ದಾರ್ ಶಿವಕುಮಾರ್ ಅವರು ಮಾತನಾಡಿ ತಮ್ಮ ಮನವಿ ಪತ್ರಗಳನ್ನು ತಕ್ಷಣವೇ ಮಾನ್ಯ ಜಿಲ್ಲಾಧಿಕಾರಿಗಳ ಮುಖಾಂತರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ತಲುಪಿಸಲಾಗುವುದು ಎಂದರು.
ಈ ಸಂದರ್ಭ ವಿಶ್ವ ಹಿಂದೂ ಪರಿಷತ್ ತಾಲೂಕು ಘಟಕದ ಅಧ್ಯಕ್ಷರಾದ ಆನಂದ ಕುಮಾರಸ್ವಾಮಿ, ಉಪಾಧ್ಯಕ್ಷ ಸುಧಾಕರ್, ಮಾತೃ ಶಕ್ತಿ ಪ್ರಮುಖ್ ಶ್ರೀಮತಿ ಲಲಿತಾ, ಬಜರಂಗದಳದ ಸಂಯೋಜಕ ನಾಗೇಶ್ ಸಹ ಸಂಯೋಜಕ ಸಂತೋಷ್, ಧರ್ಮ ಪ್ರಸಾರಕ ಮಹದೇವಪ್ಪ, ಜಿಲ್ಲಾ ಕಾರ್ಯದರ್ಶಿ ಪ್ರಶಾಂತ್ ಸೇರಿದಂತೆ ಮುಖಂಡರುಗಳಾದ ಸತ್ಯನಾರಾಯಣ, ನಾಗ ಪುರುಷೋತ್ತಮ್ ಪಂಡಿತ್, ಗಿರೀಶ್ ರಾಜೆ ಅರಸ್, ಕೆಜಿ ಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












