ಇತ್ತೀಚಿನ ಸುದ್ದಿ
ಮಾನವೀಯತೆ ಮೆರೆದ ಸಹ ಪ್ರಯಾಣಿಕ ಮಹಿಳೆಯರು: ವೈದ್ಯಕೀಯ ನೆರವಿಲ್ಲದೆ ರೈಲಿನಲ್ಲೇ ಯಶಸ್ವಿ ಹೆರಿಗೆ!
27/04/2026, 20:16
ಬಂಟ್ವಾಳ(reporterkarnataka.com): ಉತ್ತರ ಕನ್ನಡದ ಕಾರವಾರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಯಶವಂತಪುರ ಎಕ್ಸ್ಪ್ರೆಸ್ ರೈಲಿನಲ್ಲಿ ಮಾನವೀಯತೆ ಮೆರೆದ ಘಟನೆಯೊಂದು ನಡೆದಿದೆ. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿಯೊಬ್ಬರಿಗೆ ಹಠಾತ್ ಹೆರಿಗೆ ನೋವು ಕಾಣಿಸಿಕೊಂಡಾಗ, ಸಹಪ್ರಯಾಣಿಕ ಮಹಿಳೆಯರೇ ದಾದಿಯರಾಗಿ ಹೆರಿಗೆ ಮಾಡಿಸುವ ಮೂಲಕ ತಾಯಿ-ಮಗುವಿನ ಪ್ರಾಣ ಉಳಿಸಿದ್ದಾರೆ. ಮಹಿಳಾ ಪ್ರಯಾಣಿಕರ ಸಮಯಪ್ರಜ್ಞೆ ತುರ್ತು ವೈದ್ಯಕೀಯ ಚಿಕಿತ್ಸೆ ನೆರವಿಗಾಗಿ ಸುಮಾರು 30 ನಿಮಿಷಗಳ ಕಾಲ ಕಾಯಲಾಯಿತು. ಆದರೂ ಯಾವುದೇ ವೈದ್ಯಕೀಯ ನೆರವು ಸಕಾಲಕ್ಕೆ ಲಭ್ಯವಾಗಲಿಲ್ಲ. ಸಮಯ ವ್ಯರ್ಥವಾದರೆ ತಾಯಿ-ಮಗುವಿನ ಜೀವಕ್ಕೆ ಅಪಾಯವಿರುವುದನ್ನು ಅರಿತ ರೈಲಿನಲ್ಲಿದ್ದ ಇತರ ಮಹಿಳಾ ಪ್ರಯಾಣಿಕರು ತಕ್ಷಣ ಕಾರ್ಯಪ್ರವೃತ್ತರಾದರು. ರೈಲಿನ ಬೋಗಿಗೆ ಬೆಡ್ಶೀಟ್ಗಳ ಮೂಲಕ ಪರದೆ ಕಟ್ಟಿ, ತಾತ್ಕಾಲಿಕ ಹೆರಿಗೆ ಕೋಣೆಯನ್ನಾಗಿ ಪರಿವರ್ತಿಸಿದರು.
ಮೈಸೂರು ಮೂಲದ ಗರ್ಭಿಣಿಯೊಬ್ಬರು ಮಂಗಳೂರು ಜಂಕ್ಷನ್ನಿಂದ ರೈಲು ಹತ್ತಿದ್ದರು. ರೈಲು ಬಿ.ಸಿ. ರೋಡ್ ನಿಲ್ದಾಣದ ಸಮೀಪ ಬರುತ್ತಿದ್ದಂತೆ ಮಹಿಳೆಗೆ ತೀವ್ರವಾದ ಹೆರಿಗೆ ನೋವು ಕಾಣಿಸಿಕೊಂಡಿದೆ. ರೈಲಿನಲ್ಲಿ ಯಾವುದೇ ವೈದ್ಯಕೀಯ ಸೌಲಭ್ಯ ಲಭ್ಯವಿಲ್ಲದಿದ್ದರೂ, ಪರಿಸ್ಥಿತಿಯ ಗಂಭೀರತೆಯನ್ನು ಅರಿತ ರೈಲ್ವೇ ಸಿಬ್ಬಂದಿ ಕೂಡಲೇ ಸ್ಪಂದಿಸಿ ರೈಲನ್ನು ಬಿ.ಸಿ. ರೋಡ್ ನಿಲ್ದಾಣದಲ್ಲಿ ಸ್ಥಗಿತಗೊಳಿಸಿದರು.
*ದಾದಿಯರಾದ ಮಹಿಳೆಯರು:*
ಹೆರಿಗೆ ನೋವಿನಿಂದ ಮಹಿಳೆ ಕಿರುಚಾಡುತ್ತಿದ್ದಾಗ, ಅದೇ ಬೋಗಿಯಲ್ಲಿದ್ದ ಇಬ್ಬರು ಮಹಿಳಾ ಪ್ರಯಾಣಿಕರು ಧೈರ್ಯದಿಂದ ಮುಂದೆ ಬಂದರು. ಕಿಕ್ಕಿರಿದು ತುಂಬಿದ್ದ ರೈಲಿನಲ್ಲಿ ಇತರ ಪ್ರಯಾಣಿಕರು ಬಟ್ಟೆಯ ಪರದೆಗಳನ್ನು ನಿರ್ಮಿಸಿ ತಾತ್ಕಾಲಿಕ ಹೆರಿಗೆ ಕೊಠಡಿಯನ್ನು ಸಿದ್ಧಪಡಿಸಿದರು. ಅನುಭವೀ ದಾದಿಯರಂತೆ ಕಾರ್ಯನಿರ್ವಹಿಸಿದ ಈ ಮಹಿಳೆಯರು ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದು, ಗರ್ಭಿಣಿ ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.


ನಂತರ ತಾಯಿ ಮತ್ತು ನವಜಾತ ಶಿಶುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಮಯಪ್ರಜ್ಞೆ ಮೆರೆದ ಸಹಪ್ರಯಾಣಿಕರು ಮತ್ತು ರೈಲ್ವೇ ಸಿಬ್ಬಂದಿಯ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.












