ಇತ್ತೀಚಿನ ಸುದ್ದಿ
ಅಂಬೇಡ್ಕರ್ ಜಯಂತಿ ಮೆರವಣಿಗೆ ಮೇಲೆ ಕುಡುಕ ಚಾಲಕನಿಂದ ಕಾರು ಚಲಾವಣೆ: ಬಾಲಕಿ ಸ್ಥಳದಲ್ಲೇ ಸಾವು; 7 ಮಂದಿಗೆ ಗಾಯ
15/04/2026, 19:09
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಅಂಬೇಡ್ಕರ್ ಜಯಂತಿ ಮೆರವಣಿಗೆ ವೇಳೆ ಕುಡುಕ ಕಾರು ಚಾಲಕ ಮೆರವಣಿಗೆಯಲ್ಲಿದ್ದವರ ಮೇಲೆ ಕಾರು ಚಾಲನೆ ಮಾಡಿದ ಪರಿಣಾಮ 7 ವರ್ಷದ ಬಾಲಕಿಯೊಬ್ಬಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇತರ 7 ಮಂದಿ ಗಾಯಗೊಂಡಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಬಿಳೇಕಲ್ಲು ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ.
ಮೃತ ಬಾಲಕಿಯನ್ನ ಸಾನ್ವಿ(7) ಎಂದು ಗುರುತಿಸಲಾಗಿದೆ.
11 ವರ್ಷದ ನಿಶ್ಚಿತ್, ತೃಪ್ತಿ, ತಿಮ್ಮರಾಜು, ಉಷಾ, ಚೇತನ್, ಸೃಷ್ಠಿ ಹಾಗೂ ನಾಗರಾಜ್ ಗಾಯಗೊಂಡಿದ್ದು, ಇವರನ್ನು ಹಾಸನದ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತವಾಗುತ್ತಿದ್ದಂತೆ ಕಾರು ಚಾಲಕ ಸುಧಾಕರ್ ನನ್ನ ಹಿಡಿದು ಸ್ಥಳೀಯರು ಥಳಿಸಿದ್ದಾರೆ. ಅಪಘಾತದ ಬಳಿಕ ಕಾರಿನಲ್ಲಿದ್ದ ಮತ್ತೋರ್ವ ಪರಾರಿಯಾಗಿದ್ದಾನೆ.





ಕಾರು ಚಾಲಕನನ್ನ ಜಿಲ್ಲಾಸ್ಪತ್ರೆಗೆ ಸ್ಥಳೀಯರು ದಾಖಲಿಸಿದ್ದಾರೆ. ಕಾರಿನ ಗಾಜುಗಳನ್ನ ಪುಡಿ-ಪುಡಿ ಮಾಡಿ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲಾಸ್ಪತ್ರೆ ಮುಂಭಾಗ ಕೆಲ ಕಾಲ ಪ್ರಕ್ಷುಬ್ಧ ವಾತಾವರಣ ನೆಲೆಸಿತ್ತು.
ಸ್ಥಳದಲ್ಲಿ 50ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.
ಆಸ್ಪತ್ರೆ ಮುಂಭಾಗ ಆಕ್ರೋಶಿತರ ನೆರೆದು ಪೊಲೀಸರ ಮಾತು ಕೇಳದೆ ಇದ್ದಾಗ ಸ್ಥಳಕ್ಕೆ ಎಎಸ್ಪಿ ಜಯಕುಮಾರ್ ಭೇಟಿ ನೀಡಿದರು. ಎಎಸ್ಪಿ ಜಯಕುಮಾರ್ ಮುಂದೆ ಮಕ್ಕಳ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.














