ಇತ್ತೀಚಿನ ಸುದ್ದಿ
Karkala News | ಪೊಲೀಸ್ ಕರ್ತವ್ಯಕ್ಕೆ ಅಡ್ಡಿ; ಕ್ರಿಕೆಟ್ ಬೆಟ್ಟಿಂಗ್ ಆರೋಪ: 5 ಮಂದಿ ಬಂಧನ
29/03/2026, 18:07
ಉಡುಪಿ(reporterkarnataka.com): ಜಿಲ್ಲೆಯ ಕಾರ್ಕಳ ಮತ್ತು ಶಿರ್ವ ಪ್ರದೇಶಗಳಲ್ಲಿ ಪೊಲೀಸ್ ಸಿಬ್ಬಂದಿಯ ಮೇಲೆ ದಾಳಿ ಮಾಡಲು ಯತ್ನಿಸಿದ ಹಾಗೂ ಕ್ರಿಕೆಟ್ ಬೆಟ್ಟಿಂಗ್ ಜಾಲದಲ್ಲಿ ತೊಡಗಿದ್ದ ಪ್ರಕರಣಗಳಡಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ.
ಈ ಕುರಿತು ಕಾರ್ಕಳ ಮತ್ತು ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
*ಪೊಲೀಸರ ಮೇಲೆ ಗಾಡಿ ಹರಿಸಲು ಯತ್ನ*
ಮೊದಲ ಘಟನೆ ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಹಂಚಿಕಟ್ಟೆ ಸಮೀಪದ ಹೋಂಡಾ ಶೋರೂಮ್ ಬಳಿ ನಡೆದಿದೆ. ಕಾರ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಪ್ರಸನ್ನ ಎಂ.ಎಸ್. ಮತ್ತು ಅವರ ತಂಡವು ಬಂಗ್ಲೆಗುಡ್ಡೆ ವೃತ್ತದಿಂದ ಬರುತ್ತಿದ್ದ ಕಪ್ಪು ಕಾರನ್ನು ನಿಲ್ಲಿಸಲು ಪ್ರಯತ್ನಪಟ್ಟರು. ಆದರೆ ಕಾರಿನಲ್ಲಿದ್ದವರು ವಾಹನವನ್ನು ನಿಲ್ಲಿಸುವ ಬದಲು, ಪೊಲೀಸ್ ಸಿಬ್ಬಂದಿಯ ಮೇಲೆಯೇ ದಾಳಿ ಮಾಡಲು ಯತ್ನಿಸಿದರೆಂದು ಆರೋಪಿಸಲಾಗಿದೆ. ಆರೋಪಿಗಳು ವಾಹನವನ್ನು ಪೊಲೀಸರ ಮೇಲೆ ಹರಿಸಲು ಪ್ರಯತ್ನಿಸಿ, ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿರ್ವ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಮಂಜುನಾಥ ಮರಬಾಡ ಅವರ ತಂಡಕ್ಕೆ ಅದೇ ಕಾರು ಸಂಶಯಾಸ್ಪದವಾಗಿ ಬೆಳ್ಮಣ್ದಿಂದ ಬರುತ್ತಿರುವ ಮಾಹಿತಿ ಲಭ್ಯವಾಗಿತ್ತು. ವಾಹನವನ್ನು ತಡೆದಾಗ ಚಾಲಕ ಮೊದಲು ವೇಗ ಕಡಿಮೆ ಮಾಡಿದರೂ, ಬಳಿಕ ಪೊಲೀಸ್ ಅಧಿಕಾರಿಯನ್ನು ತಳ್ಳಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ ಎಂದು ಹೇಳಲಾಗಿದೆ. ನಂತರ ಶಿರ್ವ ಪಟ್ಟಣದಲ್ಲಿ ಪೊಲೀಸರು ವಾಹನವನ್ನು ವಶಕ್ಕೆ ಪಡೆದಿದ್ದಾರೆ.
*ಬೆಟ್ಟಿಂಗ್ ಮೂಲಕ ವಂಚನೆ*
ಬಂಧಿತರನ್ನು ನಾಡೂರು ನಿವಾಸಿ ಸುದರ್ಶನ್ ಶೆಟ್ಟಿ (29), ಹೆರೂರು ನಿವಾಸಿ ಕಾರ್ತವ್ಯ ಶೆಟ್ಟಿ (27), ಮೂಡೂರು ನಿವಾಸಿ ಅರುಣ್ ಶೆಟ್ಟಿ (29), ಹೆಬ್ರಿಯ ಬೆಲಂಜೆ ನಿವಾಸಿ ತೇಜಸ್ (28) ಮತ್ತು ಬೈಂದೂರು ತಾಲೂಕಿನ ಶಿರೂರು ನಿವಾಸಿ ಪ್ರಜ್ವಲ್ ಶೆಟ್ಟಿ (29) ಎಂದು ಗುರುತಿಸಲಾಗಿದೆ. ತನಿಖೆ ವೇಳೆ ಆರೋಪಿಗಳು ಸಂಘಟಿತ ಕ್ರಿಕೆಟ್ ಬೆಟ್ಟಿಂಗ್ ಜಾಲದಲ್ಲಿ ತೊಡಗಿದ್ದರೆಂದು ಪತ್ತೆಯಾಗಿದೆ. ಜನರನ್ನು ಹಣ ಹೂಡಿಕೆ ಮಾಡಲು ಪ್ರೇರೇಪಿಸಿ, ಮೋಸ ಮಾಡಿ ಅಕ್ರಮ ಜೂಜಾಟದಲ್ಲಿ ತೊಡಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













