ಇತ್ತೀಚಿನ ಸುದ್ದಿ
ಅಲ್ಲಿ ಸಂತೆಯ ಗೌಜಿ ಇತ್ತು!!: ಬಸ್ಲೆ ಸೊಪ್ಪು 20 ರೂ. ನುಗ್ಗೆಕಾಯಿ 15 ರೂ. ಜ್ಯೂಸ್ ಸ್ಟಾಲ್, ಬಟ್ಟೆ ಎಲ್ಲದಕ್ಕೂ ಫುಲ್ ಡಿಸ್ಕೌಂಟ್!!!
02/03/2026, 23:19
ರಶ್ಮಿ ಶ್ರೀಕಾಂತ್ ನಾಯಕ್
ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ಬಸ್ಲೆ ಸೊಪ್ಪು 20 ರೂಪಾಯ್, ನುಗ್ಗೆಕಾಯಿ ಬರೀ 15 ರೂಪಾರ್, ಇವತ್ ಮಾತ್ರ ಫುಲ್ ಡಿಸ್ಕೌಂಟ್ ಇತ್ತ್ ಕಾಣಿ, ಫುಲ್ ಬಿಸ್ಲು ಒಂದ್ ಲೋಟ ಜ್ಯೂಸ್ ಕುಡಿಲಕ್ ಬನ್ನಿ ಅಂತ ಅಲ್ಲಿನ ಮಕ್ಕಳು ಕೂಗಿ ಕರೆಯುತ್ತಿದ್ದರೇ ಗ್ರಾಹಕರು ತಮಗೆ ಬೇಕಾದ್ದನ್ನು ಕೊಂಡು ತೆರಳುತ್ತಿದ್ದರು. ಅಸಲಿಗೆ ಅಲ್ಲಿದ್ದವರ್ಯಾರೂ ವ್ಯಾಪಾರಿಗಳೂ ಆಗಿರಲಿಲ್ಲ, ಕೊಳ್ಳಲು ಹೋದವರು ಅಲ್ಲಿನ ಗ್ರಾಹಕರೂ ಆಗಿರಲಿಲ್ಲ, ಅಷ್ಟೇ ಏಕೆ ಅದು ದಿನವೂ ಸಂತೆ ನಡೆಯುವ ಸ್ಥಳವೂ ಆಗಿರಲಿಲ್ಲ. ಮತ್ತೇನು ಅಂತೀರಾ ತಾಲೂಕಿನ ಆಗುಂಬೆ ಸಮೀಪದ ಹೊನ್ನೇತಾಳು ಸರ್ಕಾರಿ ಶಾಲೆಯ ಆವರಣದಲ್ಲಿ ಸಂತೆ ಮೇಳ ಆಯೋಜನೆ ಮಾಡಲಾಗಿತ್ತು. ಅಲ್ಲಿ ಸಂತೆಯ ಗೌಜು ಜೋರಾಗಿತ್ತು.
ಆಗುಂಬೆ ಸಮೀಪದ ಹೊನ್ನೇತಾಳು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬೆಳಿಗ್ಗಿನಿಂದಲೇ ಒಂದು ವಿಶೇಷ ಸಡಗರ ಆರಂಭಗೊಂಡಿತ್ತು. ಅಲ್ಲಿ ಅಕ್ಷರಶಃ ಸಂತೆಯ ವಾತಾವರಣ ನಿರ್ಮಾಣಗೊಂಡಿತ್ತು. ಆ ಹೊತ್ತಿಗೆ ಶಾಲೆಯ ಮಕ್ಕಳೆಲ್ಲ ವ್ಯಾಪಾರಿಗಳಾಗಿದ್ದರು. ಪೋಷಕರು, ಊರವರೆಲ್ಲ ಗ್ರಾಹಕರಾಗಿದ್ದರು. ‘ಮಕ್ಕಳ ಸಂತೆ’ ಎಂಬ ಹೆಸರನ್ನೂ ಮೀರಿಸಿ ವ್ಯಾಪಾರ-ವಹಿವಾಟು ನಡೆಸುತ್ತಿದ್ದರು. ಏನಿದು ಮಕ್ಕಳ ಸಂತೆ: ಮಕ್ಕಳಲ್ಲಿ ವ್ಯವಹಾರ ಕುಶಲತೆ, ಸಂವಹನ ಕಲೆ, ಸಾಮಾಜಿಕ ಬದುಕಿನೊಂದಿಗಿನ ಒಡನಾಟದ ಕೌಶಲ್ಯವನ್ನು ಕಲಿಸುವುದರೊಂದಿಗೆ, ಅವರಲ್ಲಿನ ಸೃಜನಶೀಲತೆಯನ್ನು ಅನಾವರಣಗೊಳಿಸುವ ಉದ್ದೇಶದಿಂದ ಹಮ್ಮಿಕೊಂಡ ವಿಭಿನ್ನ ಕಾರ್ಯಕ್ರಮ ಮಕ್ಕಳ ಸಂತೆ. ಶಾಲಾ ವಠಾರದಲ್ಲಿ ಮಕ್ಕಳ ಸಂತೆ ಅನಾವರಣಗೊಂಡಿತ್ತು. ಊರಿನ ಜನರೂ ಕೂಡ ಮಕ್ಕಳ ಸಂತೆಗೆ ಬಂದು ತಮಗೆ ಬೇಕಾದ ವಸ್ತುಗಳನ್ನು ಕೊಂಡುಕೊಂಡರು. ಏನೇನಿತ್ತು ಮಕ್ಕಳ ಸಂತೆಯಲ್ಲಿ: ಸೊಪ್ಪು, ತರಕಾರಿ ಅಂಗಡಿ, ವಿವಿಧ ಹಣ್ಣು, ಪಾನೀಯದ ಅಂಗಡಿ, ಬುಕ್ ಸ್ಟಾಲ್, ಬಟ್ಟೆ ಅಂಗಡಿ, ಬಗೆಬಗೆಯ ತಿಂಡಿ ತಿನಿಸುಗಳ ಮಳಿಗೆ, ನಾಟಿ ಕೋಳಿ ಮೊಟ್ಟೆ ವ್ಯಾಪಾರ, ಹೀಗೆ ಹತ್ತಾರು ಅಂಗಡಿ ಮಳಿಗೆಗಳಲ್ಲಿ ಕುಳಿತು ಮಕ್ಕಳು ಗ್ರಾಹಕರನ್ನು ಕೂಗಿ ಕರೆದು ವ್ಯಾಪಾರ ನಡೆಸುತ್ತಿದ್ದರು. ಊರಿಗೆ ಸಂಭ್ರಮ, ಭರ್ಜರಿ ವ್ಯಾಪಾರ: ತಾಲೂಕಿನ ಉತ್ತಮ ಶಾಲೆ ಎಂದು ಬಿರುದು ಪಡೆದ ಶಾಲೆಯಲ್ಲಿ ಇಂತಹದ್ದೊಂದು ಕಾರ್ಯಕ್ರಮ ನಡೆದುದ್ದರಿಂದ ಊರಿನ ಜನರಲ್ಲೂ ಹೇಗೆ ನಡೆಯುತ್ತದೆಂಬ ಕುತೂಹಲವಿತ್ತು. 2 ದಿನದ ಹಿಂದೆಯೇ ಸಂತೆ ಅಂತೆ ಎಂಬ ಮಾತು ಊರಿನಲ್ಲಿ ಕೇಳಿ ಬರುತ್ತಿತ್ತು. ಕಾರ್ಯಕ್ರಮಕ್ಕೆ ಶಾಲೆಯ ದಾನಿಗಳಾದ ಸೀತಾರಾಮ್ ಭಟ್ ಚಾಲನೆ ನೀಡಿದರು. ಮುಖ್ಯ ಅತಿಥಿಯಾಗಿ ಚರಿತ್ರೆ ಯೌಟ್ಯೂಬ್ ಸಹ ಸಂಸ್ಥಾಪಕರಾದ ನಿತಿನ್ ಸಮಾರಂಭದಲ್ಲಿದ್ದರು. ಸಂಜೆಯ ತನಕವೂ ನಡೆದ ಸಂತೆಯಲ್ಲಿ ವ್ಯಾಪಾರ ಮಾತ್ರ ಭರ್ಜರಿಯಾಗಿತ್ತು. ಮಧ್ಯಾಹ್ನದ ವೇಳೆಗಾಗಲೇ ಕೆಲವು ವಸ್ತುಗಳ ಖಾಲಿಯಾಗಿದ್ದವು. ಮಕ್ಕಳಲ್ಲಿ ವ್ಯವಹಾರ ಕುಶಲತೆ, ತೂಕ-ಅಳತೆಗಳ ಬಗ್ಗೆ ಅರಿವು ಹಾಗೂ ಸಮಾಜದೊಂದಿಗೆ ಬೆರೆಯುವ ರೀತಿಯು ತಿಳಿಯಬೇಕೆಂಬ ಎಂಬ ಉದ್ದೇಶದಿಂದ ಮಕ್ಕಳ ಸಂತೆಯನ್ನು ಆಯೋಜಿಸಲಾಗಿತ್ತು. ಮಕ್ಕಳ ಪೋಷಕರು, ಊರಿನ ಜನ ನಿರೀಕ್ಷೆಗೂ ಮೀರಿ ಮಕ್ಕಳ ಸಂತೆಯಲ್ಲಿ ಪಾಲ್ಗೊಂಡು, ಕೊಂಡು ಹೋಗಿದ್ದಾರೆ. ಇದೊಂದು ವಿಭಿನ್ನ ಅನುಭವ ನೀಡಿದೆ ಎಂದು ಮುಖ್ಯ ಶಿಕ್ಷಕಿ ಶಿಲ್ಪ ತಿಳಿಸಿದರು. ಒಟ್ಟಿನಲ್ಲಿ ಆಟ ಪಾಠಗಳಿಗಷ್ಟೇ ಸೀಮಿತವಾಗಿದ್ದ ಮಕ್ಕಳಲ್ಲಿನ ಸೃಜನಶೀಲತೆಯನ್ನು ಹೊರಹಾಕಲು ‘ಮಕ್ಕಳ ಸಂತೆ’ ಎಂಬ ವಿನೂತನ ಕಾರ್ಯಕ್ರಮವನ್ನು ಏರ್ಪಡಿಸುವ ಮೂಲಕ ವಿಭಿನ್ನ ಪ್ರಯತ್ನಕ್ಕೆ ಮುಂದಾದ ಶಾಲಾ ಶಿಕ್ಷಕರು ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷರ ಮತ್ತು ತಂಡದ ಪ್ರಯತ್ನವನ್ನು ಮೆಚ್ಚಲೇಬೇಕು ಎಂದು ಪೋಷಕರೊಬ್ಬರು ತಿಳಿಸಿದರು.













