5:34 PM Saturday10 - January 2026
ಬ್ರೇಕಿಂಗ್ ನ್ಯೂಸ್
ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಿದಾಗ ಮಾತ್ರ ಸುಖಿ ರಾಜ್ಯ ಸ್ಥಾಪನೆ… ಕಿಂಗ್ ಸಿಗರೇಟ್: ಎಂಆರ್‌ಪಿ ₹170 ಇದ್ದರೂ ₹250ಕ್ಕೆ ಮಾರಾಟ; ನಿಯಂತ್ರಣವಿಲ್ಲದ ದರ; ಗ್ರಾಹಕರ… ಒಣಗಿದ್ದ ಸಿಪ್ಪೆ ಸಾಗಿಸುತ್ತಿದ್ದ ಲಾರಿ ಬೆಂಕಿಗಾಹುತಿ: ಮೈಸೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ವಾಹನ ಕೇರಳ ಸರ್ಕಾರದಿಂದ ಭಾಷಾ ಸ್ವಾತಂತ್ರ್ಯದ ಉಲ್ಲಂಘನೆ: ಸಚಿವ ಶಿವರಾಜ್ ‌ತಂಗಡಗಿ ಪ್ರಹ್ಲಾದ್ ಜೋಶಿ ಅವರಿಗೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಇತಿಹಾಸ ಗೊತ್ತಿಲ್ಲ: ಡಿಸಿಎಂ ಡಿ.ಕೆ.… ನಿಷ್ಕ್ರಿಯ ಪತ್ರಿಕೆಗಾಗಿ ರಾಜ್ಯದ ಖಜಾನೆ ಲೂಟಿ ಮಾಡಿದ ಕಾಂಗ್ರೆಸ್ ಸರ್ಕಾರ: ಕೇಂದ್ರ ಸಚಿವ… ವಿಮಾನದಲ್ಲಿ ಶೈಕ್ಷಣಿಕ ಪ್ರವಾಸ: ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ನಿಂತ ಮುತ್ತಿಗೆಪುರ ಸರಕಾರಿ… ಅಕ್ರಮ ಗಾಂಜಾ ಮಾರಾಟ: ಅಸ್ಸಾಂ ಮೂಲದ ಇಬ್ಬರು ಆರೋಪಿಗಳ ಬಂಧನ ನಮ್ಮ ಮೆಟ್ರೋದಲ್ಲಿ ವಿದ್ಯಾರ್ಥಿಗಳಿಗೆ ರಿಯಾಯಿತಿ ಪಾಸ್: ಎಎಪಿ ಯುವ ಘಟಕದಿಂದ ಸಹಿ ಸಂಗ್ರಹಣ… ಬಾಂಗ್ಲಾದವರು ನುಸುಳುವವರೆಗೆ ಕೇಂದ್ರ ಗೃಹ ಇಲಾಖೆ ನಿದ್ದೆಗೆ ಜಾರಿತ್ತಾ?: ಸಚಿವ ಕೃಷ್ಣ ಬೈರೇಗೌಡ…

ಇತ್ತೀಚಿನ ಸುದ್ದಿ

ಸ್ಕೀಂ ಬದಲು ಸ್ಕ್ಯಾಮ್ ಬಗ್ಗೆ ಯೋಚಿಸುವ ಕಾಂಗ್ರೆಸ್ ಪಕ್ಷ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ

10/01/2026, 17:26

ಬೆಂಗಳೂರು(reporterkarnataka.com): ಕೇಂದ್ರ ಸರಕಾರದ ಯೋಜನೆಗಳ ಕುರಿತು ತಪ್ಪು ಮಾಹಿತಿ ನೀಡಿ ಜನರಲ್ಲಿ ತಪ್ಪು ಕಲ್ಪನೆ ಮೂಡಿಸುವ ಕೆಲಸವನ್ನು ರಾಜ್ಯದ ಕಾಂಗ್ರೆಸ್ ಸರಕಾರ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.
“ಗೋಲ್ಡ್ ಫಿಂಚ್ ಹೊಟೇಲ್” ನಲ್ಲಿ ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ವಿಬಿ ಜಿ ರಾಮ್ ಜಿ ಯೋಜನೆ ಜಾರಿಯ ಮೂಲಕ ಲಕ್ಷಾಂತರ ಕೋಟಿ ಹೂಡಿಕೆ ಮಾಡಿ ಗ್ರಾಮೀಣ ಅಭಿವೃದ್ಧಿ ಕನಸು ನನಸಾಗಿಸಲು ಮುಂದಾದುದು ತಪ್ಪೇ ಎಂದು ಕೇಳಿದರು.
ಗಾಂಧೀಜಿ ಅವರ ಗ್ರಾಮ ಸ್ವರಾಜ್ಯದ ಕನಸು ನನಸಾಗಲು ಏಳೆಂಟು ಲಕ್ಷ ಕೋಟಿ ಖರ್ಚು ಮಾಡುವ ಈ ಯೋಜನೆ ಸುಲಲಿತವಾಗಿ ಸಾಗಬೇಕು; ಬಡವರಿಗೆ ತಲುಪಬೇಕೆಂದು ಪ್ರಧಾನಿಯವರು ಆಲೋಚಿಸಿದ್ದೇ ತಪ್ಪೇ ಹಾಗಿದ್ದರೆ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಪಕ್ಷ ಹತ್ತಾರು ವರ್ಷ ಆಡಳಿತ ಮಾಡಿದಾಗ ಸ್ಕೀಂ ಬಗ್ಗೆ ಯೋಚಿಸಿಲ್ಲ; ಸ್ಕ್ಯಾಮ್ ಬಗ್ಗೆಯೇ ಅವರು ಯೋಚಿಸಿದರು ಎಂದು ಟೀಕಿಸಿದರು.
ಜಿ ರಾಮ್ ಜಿ ಮೂಲಕ ಮೋದಿಜೀ ಅವರು ಒಂದು ಚಾರಿತ್ರಿಕ ನಿರ್ಧಾರ ಮಾಡಿದ್ದಾರೆ ಎಂದು ಶ್ಲಾಘಿಸಿದರು. ಆದರೆ, ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಯೋಜನೆಯನ್ನು ಮರು ಜಾರಿ ಮಾಡುವ ಮೊದಲೇ ಕಾಂಗ್ರೆಸ್ ಪಕ್ಷವು ವಿಬಿ ಜಿ ರಾಮ್ ಜಿ ಯೋಜನೆ ಬಗ್ಗೆ ಸುಳ್ಳುಗಳನ್ನು ಹರಡುತ್ತಿದೆ ಎಂದು ಆಕ್ಷೇಪಿಸಿದರು. ಕಾಂಗ್ರೆಸ್ ಪಕ್ಷವು ಯಾವತ್ತು ಮಹಾತ್ಮ ಗಾಂಧೀಜಿ ಅವರನ್ನು ಗೌರವಿಸಿರಲಿಲ್ಲ ಎಂಬುದು ದೇಶಕ್ಕೇ ಗೊತ್ತಿರುವ ಸಂಗತಿ. ಅಲ್ಲದೇ ಕಾಂಗ್ರೆಸ್ ಪಕ್ಷವು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರನ್ನೂ ಗೌರವಿಸುತ್ತಿರಲಿಲ್ಲ ಎಂದು ಟೀಕಿಸಿದರು.
ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿ ಆಗಬೇಕಿದೆ. ಜೊತೆಗೇ ಮೂಲಭೂತ ಸೌಕರ್ಯಗಳನ್ನೂ ಕೊಡಬೇಕಾಗಿದೆ. ಇದೇ ಉತ್ತಮ ಉದ್ದೇಶದೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ಇಡೀ ಯೋಜನೆಯಲ್ಲಿ ಗಮನಾರ್ಹ, ಮೌಲ್ಯಯುತ ಬದಲಾವಣೆಗಳನ್ನು ಜಾರಿಗೊಳಿಸಿದ್ದಾರೆ ಎಂದು ವಿವರಿಸಿದರು.
ಕೆಲಸ ಮಾಡುವ ದಿನಗಳನ್ನು 100 ರಿಂದ 125ಕ್ಕೆ ಏರಿಸಿದ್ದಾರೆ. ಕೃಷಿ ಚಟುವಟಿಕೆ ನಡೆಯುವಾಗ ರೈತರಿಗೆ ಅನಾನುಕೂಲ ಆಗಬಾರದೆಂಬ ದೃಷ್ಟಿಯಿಂದ ಆ ಸಂದರ್ಭದಲ್ಲಿ ಜಿ ರಾಮ್ ಜಿ ನಿಲ್ಲಿಸಿದ್ದಾರೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಿಂದಿನಂತೆ ತೀರ್ಮಾನಗಳು ಆಗಲಿವೆ. ಗ್ರಾಮ ಪಂಚಾಯಿತಿ ಅಧಿಕಾರವನ್ನು ಕಿತ್ತುಕೊಳ್ಳುವ ಕೆಲಸವನ್ನು ಕೇಂದ್ರ ಸರಕಾರ, ನರೇಂದ್ರ ಮೋದಿಜೀ ಅವರು ಮಾಡುತ್ತಿಲ್ಲ ಎಂದು ನುಡಿದರು.
ಬಿಜೆಪಿ ಮತ್ತು ಜೆಡಿಎಸ್, ಸುಳ್ಳು- ಅಪಪ್ರಚಾರಕ್ಕೆ ಅವಕಾಶ ಕೊಡುವುದಿಲ್ಲ. ಗ್ರಾಮ ಮಟ್ಟಕ್ಕೂ ನಾವು ತೆರಳಿ ಜನರಿಗೆ, ಕಾರ್ಮಿಕರಿಗೆ ಮನವರಿಕೆ ಮಾಡಲಿದ್ದೇವೆ. ಕಾಂಗ್ರೆಸ್ ಪಕ್ಷದ ಷಡ್ಯಂತ್ರವನ್ನು ನಾವು ಬಯಲಿಗೆ ಎಳೆಯುತ್ತೇವೆ ಎಂದು ಪ್ರಕಟಿಸಿದರು.
ವಿಬಿ ಜಿ ರಾಮ್ ಜಿ ಸಮರ್ಪಕವಾಗಿ ಅನುಷ್ಠಾನದ ಮೂಲಕ ಗ್ರಾಮೀಣ ಭಾರತದ ಸಮಗ್ರ ಅಭಿವೃದ್ಧಿಯ ಪ್ರಮುಖ ಚಿಂತನೆ ಇದರಡಿ ಇದೆ ಎಂದು ವಿವರಿಸಿದರು. ಆದರೆ, ಈ ದೇಶದಲ್ಲಿ 55ರಿಂದ 60 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷವು ಸ್ಕೀಂಗಳಲ್ಲಿ ನಂಬಿಕೆ ಇಟ್ಟಿರಲಿಲ್ಲ; ಅವರು ಸ್ಕ್ಯಾಮ್‍ಗಳಲ್ಲಿ (ಹಗರಣ) ನಂಬಿಕೆ ಇಟ್ಟಿದ್ದರು ಎಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷ ಆಡಳಿತದಲ್ಲಿದ್ದಾಗ ಹಾಗೂ ಯುಪಿಎ ಅವಧಿಯಲ್ಲಿ ನಡೆದ ಹಗರಣಗಳಿಂದ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿಲ್ಲ. ಇವತ್ತು ಗೌರವಾನ್ವಿತ ಪ್ರಧಾನಿಯವರು ಗ್ರಾಮೀಣ ಜನತೆಗೆ ಪ್ರಯೋಜನ ನೀಡುವ ದೃಷ್ಟಿಯಿಂದ ಯೋಜನೆ ತರಲು ಮುಂದಾಗಿದ್ದಾರೆ. ಭ್ರಷ್ಟಾಚಾರ ಇಲ್ಲದ, ಸಮರ್ಪಕ ಲೆಕ್ಕಪತ್ರ ಇರುವ ಯೋಜನೆ ತರುತ್ತಿರುವಾಗ ಕಾಂಗ್ರೆಸ್ ಪಕ್ಷವು ಸುಳ್ಳುಗಳ ಅಪಪ್ರಚಾರ ಮಾಡುತ್ತಿದೆ ಎಂದು ಆಕ್ಷೇಪಿಸಿದರು.
ವಿಬಿ ಜಿ ರಾಮ್ ಜಿ ಯೋಜನೆ ಕುರಿತು ಚರ್ಚಿಸಲು ವಿಶೇಷ ಅಧಿವೇಶನ ಕರೆಯುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಿರ್ಧಾರ ಸ್ವಾಗತಾರ್ಹ. ಸದನದಲ್ಲಿ ಇದನ್ನು ಚರ್ಚಿಸೋಣ. ಮನ್‍ರೇಗಾ ಮೂಲಕ ಕಾಂಗ್ರೆಸ್ ಇಷ್ಟು ವರ್ಷಗಳಲ್ಲಿ ಏನು ಮಾಡಿದೆ? ಕಳೆದ 10 ವರ್ಷಗಳಲ್ಲಿ ನಾವು ಮೋದಿಜೀ ಅವರ ನಾಯಕತ್ವದಡಿ ಮಾಡಿದ ಸಾಧನೆ ಏನು ಎಂಬುದನ್ನು ಚರ್ಚಿಸಲು ನಾವು ಸಿದ್ಧರಿದ್ದೇವೆ ಎಂದು ಸವಾಲು ಹಾಕಿದರು.


ಆದರೆ, ಕಾಂಗ್ರೆಸ್ ಪಕ್ಷಕ್ಕೆ ಮೋದಿಜೀ ಅವರ ಜನಪ್ರಿಯತೆಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದು ಹತಾಶೆಯ ಸ್ಥಿತಿಯಲ್ಲಿದೆ. ಎನ್‍ಡಿಎ ಸರಕಾರದ ಪ್ರತಿಯೊಂದು ಯೋಜನೆ ಬಗ್ಗೆ ಅದು ಸುಳ್ಳು ಹೇಳುತ್ತಿದೆ. ಕರ್ನಾಟಕದಲ್ಲೂ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಮೊದಲ ದಿನದಿಂದ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‍ಇಪಿ) ಜಾರಿಗೊಳಿಸದೇ ಇರಲು ನಿರ್ಧರಿಸಿದರು. ರಾಜ್ಯ ಶಿಕ್ಷಣ ನೀತಿ ಜಾರಿ (ಎಸ್‍ಇಪಿ) ಮಾಡುವುದಾಗಿ ಸಿದ್ದರಾಮಯ್ಯನವರು ಹೇಳಿದ್ದರು. ಇಲ್ಲಿನವರೆಗೆ ಹೊಸ ನೀತಿ ಜಾರಿ ಆಗಿಲ್ಲ ಎಂದು ಟೀಕಿಸಿದರು. ಯುಪಿಎ ಸರಕಾರದ 2 ಜಿ ಸ್ಕ್ಯಾಮ್, ಕಲ್ಲಿದ್ದಲು ಹಗರಣ ಸೇರಿ ವಿವಿಧ ಹಗರಣಗಳ ಕುರಿತು ನಾನು ಪುನರುಚ್ಚಾರ ಮಾಡಲು ಹೋಗುವುದಿಲ್ಲ. ದೇಶದ ಜನರು ಕಾಂಗ್ರೆಸ್ ಪಕ್ಷದ ಆಡಳಿತವನ್ನು ಇನ್ನೂ ಮರೆತಿಲ್ಲ ಎಂದು ತಿಳಿಸಿದರು. ಅಲ್ಲದೇ ಮಾಧ್ಯಮ ಪ್ರತಿನಿಧಿಗಳಿಗೆ ಸಂಕ್ರಾಂತಿಯ ಶುಭಾಶಯಗಳನ್ನೂ ಕೋರಿದರು.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಜೆಡಿಎಸ್ ಯುವ ಘಟಕದ ರಾಜ್ಯ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು