ಇತ್ತೀಚಿನ ಸುದ್ದಿ
ಏರುತ್ತಿರುವ ತಾಪಮಾನ: ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡಿದ ಗ್ರಾಮಸ್ಥರು; ಊರು ತುಂಬಾ ಮೆರವಣಿಗೆ
01/05/2024, 19:11

ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ಮಳೆಯಿಲ್ಲದೆ ಬಿರು ಬಿಸಿಲ ಬೇಗೆಗೆ ತತ್ತರಿಸಿದ ಜನರು ಕಪ್ಪೆಗೆ ಮದುವೆ ಮಾಡಿಸಿದ ಪ್ರಸಂಗ ನಂಜನಗೂಡು ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದ್ದು,ನಂತರ ಕಪ್ಪೆಗಳ ಮೆರವಣಿಗೆ ನಡೆಸಲಾಯಿತು.
ಬತ್ತಿಹೋದ ಕೆರೆಕಟ್ಟೆಗಳು ಅಂತರ್ಜಲವಿಲ್ಲದೆ ಖಾಲಿ, ಖಾಲಿ ನಿಂತಿರುವ ಬೋರ್ ವೆಲ್ ಗಳಿಂದ ಅಯೋಮಯವಾದ ರೈತರ ಬೆಳೆಗಳು ಮತ್ತು ಜೀವನಕ್ಕೆ ಸಂಕಷ್ಟ ಎದುರಾಗಿದೆ.
ಅತೀವ ಉಷ್ಣಾಂಶ ದಿಂದ ಕೂಡಿದ ಬಿಸಿಲ ಬೇಗೆ ತಾಳಲಾರದ ವಯೋವೃದ್ಧರು, ಮಕ್ಕಳು ಮತ್ತು ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ.
ಇಂತಹ ಸಂಕಷ್ಟ ದಲ್ಲಿ ಕಪ್ಪೆಗಳ ಮದುವೆ ಮಾಡಿಸಿದರೆ ಮಳೆಯಾಗುತ್ತದೆ ಎಂಬುದು ತಲೆತಲಾಂತರದಿಂದ ನಡೆದುಕೊಂಡು ಬಂದ ಹಿರಿಯರ ವಾಡಿಕೆ ಮತ್ತು ನಂಬಿಕೆಯಾಗಿದೆ. ಅದರಂತೆ
ಕಪ್ಪೆಗಳಿಗೆ ಮದುವೆ ಮಾಡಿಸಲಾಯಿತು. ಬಳಿಕ ಹೊಸಹಳ್ಳಿ ಗ್ರಾಮದಲ್ಲಿ ಮಳೆಗಾಗಿ ನಡೆದ ಕಪ್ಪೆಗಳ ಮದುವೆ ಮೆರವಣಿಗೆ ನಡೆಸಲಾಯಿತು. ಗ್ರಾಮದ ಬೀದಿ ಬೀದಿಗಳಲ್ಲಿ ತಮಟೆ ವಾದ್ಯಗಳೊಂದಿಗೆ ಕಪ್ಪೆಗಳ ಮೆರವಣಿಗೆ ಮಾಡಿ ಮಳೆಗಾಗಿ ಮಹಾದೇವನ ಪ್ರಾರ್ಥನೆ ಮಾಡಲಾಯಿತು.
ಮೆರವಣಿಗೆಯಲ್ಲಿ ಉಯ್ಯೊ ಉಯ್ಯೋ ಮಳೆರಾಯ ಬಾಳೆ ತೋಟಕ್ಕೆ ನೀರಿಲ್ಲ ಎಂದು ಮಳೆಗಾಗಿ ಗ್ರಾಮಸ್ಥರು ಪ್ರಾರ್ಥನೆ ಮಾಡಿದರು.