ಇತ್ತೀಚಿನ ಸುದ್ದಿ
ರಾಜ್ಯಾದ್ಯಂತ ವರ ಮಹಾಲಕ್ಷ್ಮಿ ಹಬ್ಬ ಆಚರಣೆ: ಬೆಂಗಳೂರು, ಮಂಗಳೂರು, ಚಿಕ್ಕಮಗಳೂರು ಸೇರಿದಂತೆ ವಿವಿಧಡೆ ಸಂಭ್ರಮ
08/08/2025, 21:21

ಬೆಂಗಳೂರು(reporterkarnataka.com): ರಾಜ್ಯಾದ್ಯಂತ ಇಂದು ವರಮಹಾಲಕ್ಷ್ಮೀ ಹಬ್ಬವನ್ನು ಸಂಭ್ರಮ- ಸಡಗರದಿಂದ ಆಚರಿಸಲಾಯಿತು.
ರಾಜಧಾನಿ ಬೆಂಗಳೂರಿನ ನಾನಾ ದೇಗುಲಗಳಲ್ಲಿ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ ನಡೆಸಲಾಯಿತು. ಹೆಂಗಳೆಯರು ವ್ರತ ಆಚರಿಸಿ ಲಕ್ಷ್ಮೀದೇವಿಯ ಆಶೀರ್ವಾದ ಬೇಡಿಕೊಂಡರು.
ಮೈಸೂರು, ಹುಬ್ಬಳ್ಳಿ, ಮಂಗಳೂರು, ಚಿಕ್ಕಮಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಹಬ್ಬ ಆಚರಿಸಲಾಯಿತು. ಚಿಕ್ಕಮಗಳೂರು ಜಿಲ್ಲೆಯ
ಕೊಟ್ಟಿಗೆಹಾರ ಪಟ್ಟಣ ಸೇರಿದಂತೆ ಬಣಕಲ್, ಬಾಳೂರು ಸುತ್ತಮುತ್ತ ವರಮಹಾಲಕ್ಷ್ಮಿ ಹಬ್ಬವನ್ನು ಗೃಹಿಣಿಯರು ಸಂಭ್ರಮದಿಂದ ಆಚರಿಸಿದರು. ಮಹಿಳೆಯರು ಮುಂಜಾನೆಯೇ ಎದ್ದು ಸ್ನಾನ ಮಡಿಯಾಗಿ ಉಪವಾಸ ವ್ರತ ಆಚರಿಸಿದರು. ಮನೆಯಲ್ಲಿ ಕಲಶ ಸ್ಥಾಪಿಸಿ ದೇವಿಗೆ ಸೀರೆ ಉಡಿಸಿ ಆಭರಣಗಳಿಂದ ಅಲಂಕರಿಸಿದರು. ದೇವಿಯ ಮುಂದೆ ಹಣವನ್ನು ಇಟ್ಟು ಪೂಜಿಸಿದರು. ಈ ಹಬ್ಬವು ಕುಟುಂಬದಲ್ಲಿ ಸುಖ,ಶಾಂತಿ,ನೆಮ್ಮದಿ,ಧನ,ದಾನ್ಯ ಸಂಪತ್ತು ಹೆಚ್ಚಾಗಲೆಂದು ಮನೆಯ ಮಹಿಳೆಯರು ಪ್ರಾರ್ಥಿಸಿದರು. ಹೆಣ್ಣು ಮಕ್ಕಳಿಗೆ, ಮುತ್ತೈದೆಯರಿಗೆ ಅರಿಶಿಣ,ಕುಂಕುಮ, ಬಳೆ ನೀಡುವ ಪದ್ದತಿಯೂ ಆಚರಣೆಯಲ್ಲಿದೆ. ಕೊಟ್ಟಿಗೆಹಾರದ ಶ್ರೀ ಸೀತಾರಾಮ ದೇವಸ್ಥಾನದಲ್ಲಿ ಮಹಿಳೆಯರು ಸೇರಿ ಸಾಮೂಹಿಕವಾಗಿ ವರಮಹಾಲಕ್ಷ್ಮಿ ಹಬ್ಬ ಆಚರಿಸಿದರು. ಅತ್ತಿಗೆರೆಯಲ್ಲಿ ಗೃಹಿಣಿಯರಾದ ಸಾವಿತ್ರಿ, ಜ್ಯೋತಿ ಹಾಗೂ ಮತ್ತಿತರರು ಸೇರಿ ಸಂಭ್ರಮದಿಂದ ವರಮಹಾಲಕ್ಷ್ಮಿ ಹಬ್ಬ ಆಚರಿಸಿದರು. ವಿವಿಧ ತಿಂಡಿ ತಿನಿಸುಗಳನ್ನು ಮಾಡಿ ಹಂಚಿದರು.