ಇತ್ತೀಚಿನ ಸುದ್ದಿ
ನಾವೆಲ್ಲ ಒಂದು ಎಂದು ಅರಿತುಕೊಂಡಾಗ ಸಮಾಜದ ಅಭಿವೃದ್ಧಿ ಸಾಧ್ಯ: ಮಂಗಳೂರು ದಸರಾಕ್ಕೆ ಚಾಲನೆ ನೀಡಿ ಸ್ಪೀಕರ್ ಖಾದರ್
26/09/2025, 12:10

ಮಂಗಳೂರು(reporterkarnata.com): ಕುದ್ರೋಳಿ ಕ್ಷೇತ್ರ ಸೌಹಾರ್ದ ಪರಂಪರೆಯ ಸಂದೇಶ ಸಾರುವ ಕೇಂದ್ರ.
ಕುದ್ರೋಳಿಯಲ್ಲಿ ನಡೆಯುತ್ತಿರುವ ಮಂಗಳೂರು ದಸರಾದಲ್ಲಿ ಜಿಲ್ಲೆಯ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಕಾಣಲು ಸಾಧ್ಯ. ನಾವೆಲ್ಲರೂ ಭಾರತೀಯರು; ನಾವೆಲ್ಲ ಒಂದು ಎಂದು ಅರಿತುಕೊಂಡಾಗ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಹೇಳಿದರು.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಮಂಗಳೂರು ದಸರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಮೈಸೂರು ದಸರಾ ಬಳಿಕ ರಾಜ್ಯದಲ್ಲಿ ಮಂಗಳೂರು ದಸರಾ ಪ್ರತಿವರ್ಷ ಜನಾಕರ್ಷಣೆ ಪಡೆಯುತ್ತಿದೆ. ಜನಾರ್ದನ ಪೂಜಾರಿಯವರು ನೇತೃತ್ವದಲ್ಲಿ ಅವರ ಕಳಕಳಿಯಿಂದ ದಸರಾ ನಾಡಹಬ್ಬವಾಗಿ ಎಲ್ಲಾ ಜನ ಪಾಲ್ಗೊಳ್ಳುತ್ತಿರುವುದು ಶ್ಲಾಘನೀಯ. ಧಾರ್ಮಿಕ ಚಟುವಟಿಕೆಗಳು ನಮ್ಮ ಬದುಕಿನ ಅಂಗ. ಇದರೊಂದಿಗೆ ನಾವು ಪರಸ್ಪರ ಪ್ರೀತಿ ವಿಶ್ವಾಸದೊಂದಿಗೆ ಸಾಗಬೇಕು. ಮುಂದಿನ ವರ್ಷ ದಿಂದ ಮಂಗಳೂರು ದಸರಾ ಉತ್ಸವಕ್ಕೂ ಸರ್ಕಾರದ ಅನುದಾನ ನೀಡುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಧಾರ್ಮಿಕ ದತ್ತಿ ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಶುಭಹಾರೈಸಿದರು. ಕ್ಷೇತ್ರದ ಅಭಿವೃದ್ಧಿಯ ರೂವಾರಿ ಬಿ.ಜನಾರ್ದನ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಸಂಸದ ಕ್ಯಾ.ಬ್ರಿಜೇಶ್ ಚೌಟ, ವಿಧಾನಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಐವನ್ ಡಿಸೋಜ, ಮುಖ್ಯ ಸಚೇತಕ ಅಶೋಕ್ ದೇವಪ್ಪ ಪಟ್ಟಣ್, ಗಡಿನಾಡ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನ ಮರದ, ಮಾಜಿ ಸಚಿವ ರಮಾನಾಥ ರೈ, ಮಾಜಿ ಶಾಸಕ ಜೆ.ಆರ್.ಲೋಬೊ, ಹರೀಶ್ ಕುಮಾರ್, ದೇವಳ ಆಡಳಿತ ಮಂಡಳಿ ಅಧ್ಯಕ್ಷ ಜೈರಾಜ್ ಎಚ್.ಸೋಮಸುಂದರಂ, ಉಪಾಧ್ಯಕ್ಷೆ ಊರ್ಮಿಳಾ ರಮೇಶ್, ಕಾರ್ಯದರ್ಶಿ ಬಿ. ಮಾಧವ ಸುವರ್ಣ, ಸದಸ್ಯ ಎಚ್.ಎಸ್.ಸಾಯಿರಾಂ, ಕೇತ್ರಾಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಉಪಾಧ್ಯಕ್ಷ ಡಾ.ಬಿ.ಜಿ.ಸುವರ್ಣ, ಟ್ರಸ್ಟಿ ಕೃತೀನ್ ಅಮೀನ್, ಅಭಿವೃದ್ಧಿ ಸಮಿತಿ ಸದಸ್ಯರಾದ ಹರಿಕೃಷ್ಣ ಬಂಟ್ವಾಳ್, ಲೀಲಾಕ್ಷ ಕರ್ಕೆರಾ, ಸಂತೋಷ್ ಜೆ. ಪೂಜಾರಿ, ಆಡಳಿತ ಮಂಡಳಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕೋಶಾಧಿಕಾರಿ ಪದ್ಮರಾಜ್ ಆರ್.ಪೂಜಾರಿ ಸ್ವಾಗತಿಸಿದರು. ಸ್ಮಿತೇಶ್ ಎಸ್. ಬಾರ್ಯ ಕಾರ್ಯಕ್ರಮ ನಿರೂಪಿಸಿದರು.
ಮಂಗಳೂರು ದಸರಾ ಗೌರವ ಸಮ್ಮಾನ್
ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ನಿರ್ದೇಶಕ ಡಾ.ತುಕಾರಾಮ ಪೂಜಾರಿ, ಲೇಡಿಗೋಶನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ದುರ್ಗಾ ಪ್ರಸಾದ್ ಎಂ.ಆರ್ ಅವರಿಗೆ ‘ದಸರಾ ಗೌರವ ಸಮ್ಮಾನ್-2025’ ಪ್ರದಾನಿಸಲಾಯಿತು. ಮೂಕ ಪ್ರಾಣಿಗಳ ಸಾಕು ತಾಯಿ ಶಾಲೆಟ್ ಅವರಿಗೆ ಅಸಮಾನ್ಯ ಸ್ತ್ರೀ ಪುರಸ್ಕಾರ ನೀಡಲಾಯಿತು.