ಇತ್ತೀಚಿನ ಸುದ್ದಿ
ಪಚ್ಚನಾಡಿ ದೇವಿನಗರ ಶ್ರೀ ದೇವಿ ಫ್ರೆಂಡ್ಸ್ ಸರ್ಕಲ್ ವತಿಯಿಂದ ಸಂಭ್ರಮದ ಸ್ವಾತಂತ್ರ್ಯ ಅಮೃತ ಮಹೋತ್ಸವ
16/08/2022, 09:06

ಮಂಗಳೂರು(reporterkarnataka.com): ನಗರದ ಪಚ್ಚನಾಡಿ ದೇವಿನಗರದ ಶ್ರೀ ದೇವಿ ಫ್ರೆಂಡ್ಸ್ ಸರ್ಕಲ್ ವತಿಯಿಂದ ಪುಟಾಣಿ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರವರೆಗೆ ಎಲ್ಲರೂ ಸೇರಿ ಬಹಳ ಸಂಭ್ರಮದಿಂದ ಅದ್ದೂರಿಯಾಗಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸಲಾಯಿತು.
ಬೆಳಗ್ಗೆ 10.00 ಗಂಟೆಗೆ ಅಂಗನವಾಡಿಯ ಮಕ್ಕಳು, ಅತಿಥಿ ಗಣ್ಯರು, ಸದಸ್ಯರು ಶ್ರೀ ದೇವಿ ಫ್ರೆಂಡ್ಸ್ ಸರ್ಕಲ್, ಸದಸ್ಯರು ಶ್ರೀ ದೇವಿ ಮಾತೃ ಮಂಡಳಿ, ಸ್ವಸಹಾಯ ಸಂಘದ ಸದಸ್ಯರು, ಅಂಗನವಾಡಿ ಮಕ್ಕಳ ಪೋಷಕರು, ಕಾರ್ಯಕರ್ತೆ ಮತ್ತು ಸಹಾಯಕಿ ಆಶ್ರಯ ಅಂಗನವಾಡಿ ಕೇಂದ್ರ ಅಲ್ಲದೆ ಹಿರಿಯ ನಾಗರಿಕರು, ಪಚ್ಚನಾಡಿ ಪರಿಸರದ ನೂರಾರು ರಾಷ್ಟ್ರಭಕ್ತ ನಾಗರಿಕರು ರಸ್ತೆಯಲ್ಲಿ ಮೆರವಣಿಗೆಯ ಮೂಲಕ ದೇವಿನಗರ ಮೈದಾನದ ಧ್ವಜಸ್ತoಭದ ಬಳಿ ಸೇರಲಾಯಿತು. ಮೆರವಣಿಗೆಯಲ್ಲಿ ವಿಶೇಷ ಆಕರ್ಷಣೆಯಾಗಿ ಭಾರತ ಮಾತೆಯ ರೂಪದಲ್ಲಿ ಪುಟಾಣಿ ಕಂದಮ್ಮ ಕಂಗೊಳಿಸುತ್ತಿದ್ದಳು.
ಪುಟಾಣಿ ಬಾಲಕನಿಂದ ದೇವರ ಸ್ತುತಿಃ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅತಿಥಿ ಗಣ್ಯರಾದ ಜಿಲ್ಲಾ ಸರಕಾರಿ ನ್ಯಾಯವಾದಿಗಳು ಮನೋರಾಜ್ ರಾಜೀವ ಶಕ್ತಿನಗರ , ನ್ಯಾಯವಾದಿಗಳಾದ ಕಿಶೋರ್ ಕುಮಾರ್ ಕೋಡಿಕಲ್, ಮಂಗಳ ಜ್ಯೋತಿ ಸಮಗ್ರ ಶಾಲೆಯ ನಿವೃತ್ತ ಮುಖ್ಯ್ಯೋಪಾಧ್ಯಾಯ ಅಶೋಕ್ ಶೆಟ್ಟಿ, ಕಾರ್ಮಿಕ ಮುಖಂಡರು, ಸಮಾಜ ಸೇವಕರು ಬಿ. ಎಸ್. ಚಂದ್ರು, ಹಸಿರು ದಳ ಸಂಯೋಜಕರು
ನಾಗರಾಜ್ ಬಜಾಲ್, ಶ್ವಾನ ಪ್ರಿಯ ರಜನಿ ಶೆಟ್ಟಿ ಬಲ್ಲಾಳ್ ಬಾಗ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಮುಖರಾದ
ಸೆಲ್ವರಾಜ್, ಶ್ರೀ ದೇವಿ ಮಾತೃ ಮಂಡಳಿ ಪ್ರಮುಖರಾದ ಲಾಲಿನಿ, ಶ್ರೀ ದೇವಿ ಫ್ರೆಂಡ್ಸ್ ಸರ್ಕಲ್ ಗೌರವಾಧ್ಯಕ್ಷ ಮೋಹನ್ ಪಚ್ಚನಾಡಿ, ಶ್ರೀ ದೇವಿ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ರಾಜೇಶ್ ಕುಲಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅತಿಥಿಗಣ್ಯರನ್ನು ಶಾಲು ಹೊದಿಸಿ ಕಾರ್ಯಕ್ರಮಕ್ಕೆ ಸ್ವಾಗತಿಸಲಾಯಿತು. ವಂದೇ ಮಾತರಂ ರಾಷ್ಟ್ರ ಗೀತೆ ಹಾಡಿ ಅತಿಥಿ ಗಣ್ಯರಿಂದ ಧ್ವಜಾರೋಹಣಗೈದು ಧ್ವಜಕ್ಕೆ ವಂದಿಸಿ ಧ್ವಜಗೀತೆ ಹಾಡಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಿಲ್ಲಾ ಸರಕಾರಿ ನ್ಯಾಯವಾದಿಗಳು ಮನೋರಾಜ್ ಆರ್ ಮಾತನಾಡಿ, ಮೂಲಭೂತ ಹಕ್ಕಿಗಾಗಿ ಹೋರಾಡುವ ನಾವು ಮೂಲಭೂತ ಕರ್ತವ್ಯದ ಬಗ್ಗೆಯೂ ತಿಳಿದುಕೊಳ್ಳಬೇಕು. ದೊರೆತಿರುವ ಸ್ವಾತಂತ್ರ್ಯವನ್ನು ಉಳಿಸುವಲ್ಲಿ ನಾಗರಿಕರು ಕಟಿಬದ್ಧರಾಗಿರಬೇಕು. ಆ ನಿಟ್ಟಿನಲ್ಲಿ ಶ್ರೀ ದೇವಿ ಫ್ರೆಂಡ್ಸ್ ಸರ್ಕಲ್ ಉತ್ತಮ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಮಾದರಿಯಾಗಿದ್ದಾರೆ ಎಂದು ಹೇಳಿದ ಅವರು ಎಲ್ಲರಿಗೂ ಅಮೃತ ಸ್ವಾತಂತ್ರ್ಯ ಮಹೋತ್ಸವದ ಶುಭಾಶಯವನ್ನು ಕೋರಿದರು. ನಂತರ ಮಾತನಾಡಿದ ನ್ಯಾಯವಾದಿಗಳಾದ ಕಿಶೋರ್ ಕುಮಾರ್ ಅವರು ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರುಷಗಳು ಕಳೆದಿವೆ. ಈ ಸ್ವಾತಂತ್ರ್ಯ ನಮಗೆ ಸುಮ್ಮನೆ ದೊರೆತಿಲ್ಲ. ಬ್ರಿಟಿಷರ ವಿರುದ್ಧ ಹೋರಾಡಿದ ಐದು ಲಕ್ಷ ಭಾರತೀಯರ ಬಲಿದಾನದಿಂದ ಸ್ವಾತಂತ್ರ್ಯ ದೊರೆತಿದೆ. ಭಾರತದಲ್ಲಿರುವ ಶೇಕಡಾ ನಲವ್ವತೈದು ಭಾಗದಷ್ಟಿರುವ ಯುವಕರಿಂದ ದೇಶ ಕಟ್ಟುವ ಕಾರ್ಯವಾದರೆ ಭಾರತ ವಿಶ್ವ ಗುರುವಾಗುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದ ಅವರು ಶ್ರೀ ದೇವಿ ಫ್ರೆಂಡ್ಸ್ ಸರ್ಕಲ್ ಧಾರ್ಮಿಕ ಸಾಮಾಜಿಕ ಚಟುವಟಿಕೆಗಳಲ್ಲಿ ಬಹಳಷ್ಟು ಸಾಧನೆಯನ್ನು ಮಾಡಿರುತ್ತದೆ ಎಂದು ಹಾಡಿ ಹೊಗಳಿದರು. ನಂತರ ಮಾತನಾಡಿದ ಸಾಮಾಜಿಕ ಕಾರ್ಯಕರ್ತರಾದ ಬಿ. ಎಸ್. ಚಂದ್ರುರವರು ತಾವು ಸುಮಾರು 20 ವರ್ಷಗಳಿಂದ ಪಚ್ಚನಾಡಿಯ ನಾಗರಿಕರು ಮತ್ತು ಶ್ರೀ ದೇವಿ ಫ್ರೆಂಡ್ಸ್ ಸರ್ಕಲ್ ಪ್ರಮುಖರ ಜೊತೆ ಸೇರಿಕೊಂಡು ಡಂಪಿಂಗ್ ಯಾರ್ಡ್ ವಿರುದ್ಧ ಹೋರಾಟ ನಡೆಸಿದ ಪರಿಣಾಮವಾಗಿ ಡಂಪಿಂಗ್ ಯಾರ್ಡ್ ನಲ್ಲಿರುವ ಕಸದ ರಾಶಿ ಸಂಪೂರ್ಣ ವಿಲೇವಾರಿ ಆಗುವ ನಿಟ್ಟಿನಲ್ಲಿ ಕೆಲಸ ನಡೆಯುತ್ತದೆ ಎಂದು ಹೇಳಲು ಸಂತೋಷವಾಗುತ್ತಿದೆ. ಮುಂದೆ ಡಂಪಿಂಗ್ ಯಾರ್ಡ್ ಜಾಗದಲ್ಲಿ ಉದ್ಯಾನವನ ನಿರ್ಮಾಣವಾದರೆ ನಮ್ಮೆಲ್ಲರ ಹೋರಾಟಕ್ಕೆ ಸಾರ್ಥಕತೆ ದೊರೆಯುತ್ತದೆ ಎಂದರು. ನಮ್ಮ ತೆರಿಗೆ ಹಣ ವ್ಯರ್ಥವಾಗದೆ ಒಳ್ಳೆಯ ಅಭಿವೃದ್ಧಿ ಆಗಲಿ ಎಂದು ಆಶಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಅಶೋಕ್ ಕುಮಾರ್ ಶೆಟ್ಟಿಯವರು ಮಾತನಾಡುತ್ತಾ, ಪ್ರಧಾನಿಯವರ ಆಶಯದಂತೆ ದೇಶದಾದ್ಯಂತ ಮನೆಮನೆಯಲ್ಲಿ ತಿರಂಗ ಹಾರಾಡುತ್ತಿದೆ. ದೇಶದ ಮೂಲೆ ಮೂಲೆಯಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ದೇಶದ ಜನರ ಹೃದಯದಲ್ಲಿ ದೇಶ ಭಕ್ತಿ ಹೊಮ್ಮಿದೆ. ನಮಗೆ ಸ್ವಾತಂತ್ರ್ಯವು ಹಿಂಸೆ ಹಾಗೂ ಅಹಿಂಸೆಯ ಹೋರಾಟ ಹಾಗೂ ತಂತ್ರಗಾರಿಕೆಯಿಂದ ದೊರೆತಿದೆ. ಸಿಕ್ಕಿರುವ ಸ್ವಾತಂತ್ರ್ಯವನ್ನು ಉಳಿಸಲು ನಮ್ಮ ನಡುವೆ ಇರುವ ದೇಶದ್ರೋಹಿಗಳನ್ನು ಗುರುತಿಸಿ ಎಲ್ಲರೂ ಒಂದಾಗಿ ಜಾತ್ಯತೀತವಾಗಿ ಪಕ್ಷಾತೀತವಾಗಿ ಮಟ್ಟ ಹಾಕಬೇಕಾಗಿದೆ. ಶ್ರೀ ದೇವಿ ಫ್ರೆಂಡ್ಸ್ ಸರ್ಕಲ್ ನ ಸದಸ್ಯರ ಒಗ್ಗಟ್ಟನ್ನು ಹಾಡಿ ಹೊಗಳಿದ ಅವರು ಶ್ರೀ ದೇವಿ ಫ್ರೆಂಡ್ಸ್ ಸರ್ಕಲ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೆಮ್ಮೆಯಾಗುತ್ತಿದೆ ಎಂದರು.
ಶ್ರೀ ದೇವಿ ಫ್ರೆಂಡ್ಸ್ ಸರ್ಕಲ್ ಮಾರ್ಗದರ್ಶಕರಾದ ದಿವಂಗತ ಪುರುಷೋತ್ತಮ ಕೊಟ್ಟಾರಿಯವರ ದಿವ್ಯಾತ್ಮಕ್ಕೆ ಚಿರಶಾಂತಿ ಕೋರಿ ಒಂದು ನಿಮಿಷದ ಸಾರ್ವಜನಿಕ ಮೌನ ಪ್ರಾರ್ಥನೆ ನಡೆಯಿತು.
ಜನಗಣಮನ ರಾಷ್ಟ್ರ ಗೀತೆ ಹಾಡಿ ಸಿಹಿ ಹಂಚಿ ಕಾರ್ಯಕ್ರಮಕ್ಕೆ ಪೂರ್ಣವಿರಾಮ ಹಾಕಲಾಯಿತು. ಹರಿಣಾಕ್ಷಿ ಟೀಚರ್, ಶ್ರೀ ಕೃಷ್ಣಾನಂದ ಸನಿಲ್, ಶ್ರೀ ನಟರಾಜ್ ಪಚ್ಚನಾಡಿ ಕಾರ್ಯಕ್ರಮ ಸಂಯೋಜಿಸಿ ನಿರ್ವಹಿಸಿ ನಿರೂಪಿಸಿದರು.