6:36 AM Wednesday1 - April 2026
ಬ್ರೇಕಿಂಗ್ ನ್ಯೂಸ್
ತಮಿಳುನಾಡಿನಿಂದ ರೈಲಿನಲ್ಲಿ ಬಂದು ಕೆಂಜಾರು ದೇಗುಲದ ಹುಂಡಿ ಕಳ್ಳತನ: ಅಂತಾರಾಜ್ಯ ಕಳ್ಳನ ಬಂಧನ ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರ ಬರೀ ಲೂಟಿ ಮಾಡಿದ್ದು ಬಿಟ್ಟರೆ ಅಭಿವೃದ್ಧಿ ಮಾಡಲಿಲ್ಲ: ಸಿಎಂ… ಸಿದ್ದರಾಮಯ್ಯ ಕಳ್ಳಮತಗಳಿಂದ ನನ್ನ ವಿರುದ್ಧ ಬಾದಾಮಿಯಲ್ಲಿ ಗೆದ್ದರು: ಶ್ರೀರಾಮುಲು ಆರೋಪ ಯತ್ನಾಳ್‌ ಬಂದರೆ ಸ್ವಾಗತ: ರಾಜ್ಯ ಬಿಜೆಪಿಯಲ್ಲಿ ಕುತೂಹಲ ಮೂಡಿಸಿದ ಮಾಜಿ ಸಿಎಂ ಯಡಿಯೂರಪ್ಪ… ಉಪ ಚುನಾವಣೆ | ಸಿಎಂ ಸಭೆಯಲ್ಲಿ ಭಾಗಿಯಾಗಿದ್ದ ಸರಕಾರಿ ಶಿಕ್ಷಕ ಕಬ್ಬಿನ ಗದ್ದೆಯೊಳಗೆ… ಬಾಗಲಕೋಟೆ ಉಪ ಚುನಾವಣೆ: ಆಲಮಟ್ಟಿ ಬಳಿ ರಾತೋರಾತ್ರಿ ಸಿಎಂ ಭೇಟಿಯಾದ ಮುಸ್ಲಿಂ​ ಮುಖಂಡರು;… ಉಪ ಚುನಾವಣೆ | ಸಿಎಂ ಸಭೆಯಲ್ಲಿ ಭಾಗಿಯಾಗಿದ್ದ ಸರಕಾರಿ ಶಿಕ್ಷಕ ಕಬ್ಬಿನ ಗದ್ದೆಯೊಳಗೆ… ರಂಗೇರಿದ ಉಪ ಚುನಾವಣಾ ಕಣ: ಅಖಾಡಕ್ಕಿಳಿದ ಸಿಎಂ ಸಿದ್ದರಾಮಯ್ಯ, ವಿಜಯೇಂದ್ರ; ಕೈ, ಕಮಲ… ಕೌಟುಂಬಿಕ ಕಲಹ: ಭದ್ರಾ ಬಲದಂಡೆ ನಾಲೆ ಬ್ರಿಡ್ಜ್ ನಿಂದ ಹಾರಿ ಸೂಪರ್ ವೈಸರ್… ಗ್ಯಾಸ್ ಸಿಲಿಂಡರ್ ಗೆ ರೆಗ್ಯುಲೇಟರಿ ಅಳವಡಿಸುವಾಗ ಏಕಾಏಕಿ ಸ್ಫೋಟ: ಮನೆ ಛಿದ್ರಛಿದ್ರ; 4…

ಇತ್ತೀಚಿನ ಸುದ್ದಿ

ಮಂಗಳೂರು ಕ್ಷೇತ್ರ: ಸೋಲಿಸುವ ಜಿದ್ದಿಗೆ ಬಿದ್ದ ಬಿಜೆಪಿ: ಗೆಲ್ಲುವ ಹಠ ತೊಟ್ಟ ಖಾದರ್; ಹಾಗಾದರೆ ಮತದಾರರ ನಾಡಿ ಮಿಡಿತ ಏನು?

14/03/2023, 10:20

ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ಶತಾಯಗತಾಯ ಸೋಲಿಸಿಯೇ ಸಿದ್ದ ಎಂಬ ಜಿದ್ದಿಗೆ ಬಿದ್ದ ಬಿಜೆಪಿ, ಗೆದ್ದೇ ಗೆಲ್ಲುತ್ತೇನೆ ಎಂಬ ಹಠಕ್ಕೆ ಬಿದ್ದ ಖಾದರ್. ಇದು ಸದ್ಯ ಮಂಗಳೂರು ಕ್ಷೇತ್ರದ ಪರಿಸ್ಥಿತಿ. ಹಲವು ದಶಕಗಳಿಂದ ಗೆದ್ದು ಬರುತ್ತಿರುವ ಕಾಂಗ್ರೆಸ್ ಗೆ ಮತ್ತೆ ಗೆಲ್ಲುವ ಹಂಬಲವಾದರೆ, ಮತ್ತೊಮ್ಮೆ ಇಲ್ಲಿ ಗೆಲ್ಲಬೇಕೆಂಬ ತವಕದಲ್ಲಿರುವ ಬಿಜೆಪಿಗೆ ಖಾದರ್ ಅವರನ್ನು ಸೋಲಿಸಬೇಕೆಂಬ ಸಂಕಲ್ಪ. ಗೆಲ್ಲಲು ಶಾಸಕರ ಕಡೆಯಿಂದ ರಂಗತಾಲೀಮು. ಸೋಲಿಸಲು ಪಾಳಯದಿಂದ ಮಾಸ್ಟರ್ ಪ್ಲಾನ್.
ಪ್ರತಿಷ್ಠಿತ ಕ್ಷೇತ್ರ: ನೆರೆಯ ಕೇರಳ ರಾಜ್ಯದೊಂದಿಗೆ ಪ್ರಮುಖ ಗಡಿಯನ್ನು ಹಂಚಿಕೊಂಡಿರುವ ಮಂಗಳೂರು ಕ್ಷೇತ್ರ ರಾಜ್ಯದ ಪ್ರತಿಷ್ಠಿತ ಕ್ಚೇತ್ರಗಳಲ್ಲಿ ಒಂದು. ರಾಣಿ ಅಬ್ಬಕ್ಕನ ಆಳ್ವಿಕೆಗೆ ಒಳಪಟ್ಟಿದ್ದ ಉಳ್ಳಾಲ ಪ್ರದೇಶದ ಈ ಕ್ಷೇತ್ರದ ತೆಕ್ಕೆಯೊಳಗಿದೆ. ಈ ಹಿಂದೆ ಉಳ್ಳಾಲ ಕ್ಷೇತ್ರವೆಂದೇ ಇದನ್ನು ಕರೆಯಲಾಗುತ್ತಿತ್ತು. ಕ್ಷೇತ್ರಗಳು ಪುನರ್ ವಿಂಗಡನೆಯಾದಾಗ ಮಂಗಳೂರು, ಮಂಗಳೂರು ಉತ್ತರ ಮತ್ತು ಮಂಗಳೂರು ದಕ್ಷಿಣ ಕ್ಷೇತ್ರಗಳು ಅಸ್ತಿತ್ವಕ್ಕೆ ಬಂತು.
ಮತದಾರರ ಸಂಖ್ಯೆ: ಮಂಗಳೂರು ಕ್ಷೇತ್ರದಲ್ಲಿ ಒಟ್ಟು ಜನಸಂಖ್ಯೆ 2,67,775 ಇದ್ದಾರೆ. ಇವರಲ್ಲಿ ಪುರುಷರು-1,32,883 ಹಾಗೂ ಮಹಿಳೆಯರು 1,34,893 ಮಂದಿ ಇದ್ದಾರೆ. ಹಾಗೆ ಒಟ್ಟು ಮತದಾರರು 200001 ಮಂದಿ ಇದ್ದಾರೆ. ಇವರಲ್ಲಿ ಪುರುಷರು 98,240 ಮತ್ತು ಮಹಿಳೆಯರು 1,01,754 ಇದ್ದಾರೆ. ನಾವು ಜಾತಿ, ಧರ್ಮ, ಮತ, ಪಂಗಡವನ್ನು ಬಿಟ್ಟು ಲೆಕ್ಕಾಚಾರ ಹಾಕಿದರೂ ಮತದಾರರು ಯಾರ ಪರವಾಗಿದ್ದಾರೆ ಎನ್ನುವ ಸ್ಪಷ್ಟ ಚಿತ್ರಣ ಲಭ್ಯವಾಗುತ್ತದೆ.
1978ರ ಚುನಾವಣೆಯ ವರೆಗೂ ಮಂಗಳೂರು ವಿಧಾನಸಭೆ ಕ್ಷೇತ್ರ ಉಳ್ಳಾಲ ವಿಧಾನಸಭೆ ಕ್ಷೇತ್ರವಾಗಿತ್ತು. ಬಳಿಕ 2008ರಲ್ಲಿ ಕ್ಷೇತ್ರ ಪುನರ್‌ ವಿಂಗಡನೆ ಸಂದಭ೯ದಲ್ಲಿ ಮಂಗಳೂರು ವಿಧಾನ ಸಭೆ ಕ್ಷೇತ್ರವಾಗಿ ಪುನರ್‌ ನಾಮಕರಣಗೊಂಡಿತು.
ಇತಿಹಾಸ: 1957ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗಜಾನನ ಪಂಡಿತ್ ಆಯ್ಕೆಯಾಗಿ ಮೊದಲ ಶಾಸಕ ಎಂಬ ಹೆಗ್ಗಳಿಕೆಯ ಪಾತ್ರರಾದರು. 1962ರಲ್ಲಿ ಕಮ್ಯುನಿಸ್ಟ್‌ ಪಕ್ಷದ ಎ.ಕೃಷ್ಣ ಶೆಟ್ಟಿ ಅವರು ವಿಜಯಗಳಿಸಿದರು. 1983ರಲ್ಲಿ ಸಿಪಿಎಂನ ಪಿ.ರಾಮಚಂದ್ರ ರಾವ್ ಶಾಸಕರಾಗಿ ಆಯ್ಕೆಯಾಗಿದ್ದರು. 1994ರಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿಯ ಕೆ.ಜಯರಾಮ ಶೆಟ್ಟಿ ಜಯಗಳಿಸಿದ್ದರು. ಇದು ಬಿಜೆಪಿಯ ಮೊದಲ ಗೆಲುವು.
ನಂತರ ಕವಿ, ಸಾಹಿತಿ ಬಿ.ಎಂ. ಇದಿನಬ್ಬ ಅವರು ಈ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷದಿಂದ 3 ಬಾರಿ ಪ್ರತಿನಿಧಿಸಿದ್ದರು. ಯು.ಟಿ.ಫರೀದ್ ಅವರು ಈ ಕ್ಷೇತ್ರವನ್ನು 4 ಬಾರಿ ಪ್ರತಿನಿಧಿಸಿದ್ದರೆ ಅವರ ಪುತ್ರ , ಹಾಲಿ ಶಾಸಕ ಯು.ಟಿ.ಖಾದರ್ ಅವರು ಕೂಡಾ ಸತತವಾಗಿ 4ನೇ ಬಾರಿಗೆ ಪ್ರತಿನಿಧಿಸುತ್ತಿದ್ದಾರೆ.
ಇದೀಗ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಡ್ಡೋಲಗ ಮಾಡಿ ಮಂಗಳೂರಿಗೆ ಯಾರೆಂದು ಬಲ್ಲಿರಾ ಎಂದು ಪ್ರಶ್ನಿಸಿದರೆ, ಯು.ಟಿ. ಖಾದರ್ ಎಂಬ ಉತ್ತರ ಬರುತ್ತದೆ. ಯಾಕೆಂದರೆ ಸತತ 4 ಬಾರಿ ಆಯ್ಕೆಯಾಗಿದ್ದಾರೆ. ಮೊದಲ ಬಾರಿ ಉಪ ಚುನಾವಣೆಯಲ್ಲಿ ಜಯಗಳಿಸಿದ್ದರು.
2018ರ ವಿಧಾನಸಭೆ ಚುನಾವಣೆಯಲ್ಲಿ ಮೋದಿ ಅಲೆಗೆ ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಧೂಳೀಪಟವಾದಾಗ ಕೈ ಪಾಳಯದ ಮಾನ ಉಳಿಸಿದ್ದು ಇದೇ ಮಂಗಳೂರು ಕ್ಷೇತ್ರ ಮತ್ತು ಯು.ಟಿ. ಖಾದರ್. ಖಾದರ್ ತನ್ನ ವೈಯಕ್ತಿಕ ಚರಿಷ್ಮಾದಿಂದಲೇ ತನ್ನ ಖದರ್ ತೋರಿಸಿದ್ದು ಇತಿಹಾಸ. ಇದೀಗ ಮತ್ತೆ ಚುನಾವಣೆ ಎದುರಾಗಿದೆ. ಮಂಗಳೂರು ಕ್ಷೇತ್ರದಲ್ಲಿ ರಾಜಕೀಯ ರಂಗು ರಂಗೇರುತ್ತಿದೆ. ಖಾದರ್ ಅವರನ್ನು ಹೇಗಾದರೂ ಈ ಬಾರಿ ಸೋಲಿಸಬೇಕೆಂಬ ಹಠಕ್ಕೆ ಬಿಜೆಪಿ ಬಿದ್ದಿದೆ. ಖಾದರ್ ಅವರ ವಿಜಯ ಯಾತ್ರೆಗೆ ಬ್ರೇಕ್ ಹಾಕಲು ಎಲ್ಲ ಪ್ರಯತ್ನಗಳು ನಡೆಯುತ್ತಿವೆ. ಮತ್ತೊಂದು ಕಡೆಯಿಂದ ಎಸ್ ಡಿಪಿಐ ಕೂಡ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ. ಮುಸ್ಲಿಂ ಮತಗಳು ವಿಭಜನೆಯಾಗುವ ಸಾಧ್ಯತೆಯ ಬಗ್ಗೆ ಲೆಕ್ಕಾಚಾರ ನಡೆಯುತ್ತಿದೆ.
ಈ ಲೆಕ್ಕಾಚಾರಗಳೆಲ್ಲ ಏನಿದ್ದರೂ
ಮಂಗಳೂರು ಕ್ಷೇತ್ರದ ಹೆಚ್ಚಿನ ಮತದಾರರಿಗೆ ಖಾದರ್ ಅವರು ತುಂಬಾ ಪ್ರಿಯರಾಗಿ ಕಂಡು ಬರುತ್ತಿದ್ದಾರೆ. ದೇವಸ್ಥಾನ- ದೈವಸ್ಥಾನಕ್ಕೆ ಹೋಗಿ ಕೈ ಮುಗಿಯುವ ಖಾದರ್, ಕುಂಕುಮ ಹಚ್ಚುವ ಖಾದರ್, ಶವಕ್ಕೆ ಹೆಗಲು ಕೊಡುವ ಖಾದರ್ ಇಲ್ಲಿನ ಹಿಂದೂ, ಕ್ರೈಸ್ತ ಮತ್ತು ಮುಸ್ಲಿಂ ಮತದಾರರಿಗೆ ತುಂಬಾ ಇಷ್ಟವಾಗಿ ಕಂಡು ಬರುತ್ತಿದ್ದಾರೆ. ಹಾಗೆ ಕ್ರಿಕೆಟ್ ಆಡುವ ಖಾದರ್, ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸುವ ಖಾದರ್, ಹೆಗಲಿಗೆ ಕೈ ಹಾಕಿ ಮಾತನಾಡುವ ಖಾದರ್, ಸಂತೆಯಲ್ಲಿ ಕಡ್ಲೆ ತಿನ್ನುವ ಖಾದರ್
ಯುವ ಸಮೂಹಕ್ಕೆ ಹೆಚ್ಚು ಪ್ರಿಯರಾಗಿ ಕಂಡು ಬರುತ್ತಿದ್ದಾರೆ. ಇನ್ನು ಕೆಲವು ಮನೆಗಳಲ್ಲಿ ಖಾದರ್ ನಮ್ಮ ಮಗನ ಹಾಗೆ ಎಂಬ ಅಭಿಮಾನದ ಮಾತು ಹೊರಬರುತ್ತಿದೆ. ಇದೆಲ್ಲ ರಿಪೋರ್ಟರ್ ಕರ್ನಾಟಕ ಮಂಗಳೂರು ಕ್ಷೇತ್ರದ ಉದ್ದಗಲಕ್ಕೂ ಸುತ್ತಾಡಿ ಮತದಾರರಲ್ಲಿ ಮಾತನಾಡಿಸಿದಾಗ ಕಂಡುಕೊಂಡ ಸತ್ಯ. ಪಕ್ಷ ಯಾವುದೇ ಇರಲಿ, ಧರ್ಮ ಯಾವುದೇ ಇರಲಿ, ಜಾತಿ ಯಾವುದೇ ಇರಲಿ, ಒಬ್ಬ ಜನಪ್ರತಿನಿಧಿ ತನ್ನ ಮತದಾರರೊಂದಿಗೆ ನೇರ ಸಂಪರ್ಕ ಇಟ್ಟುಕೊಂಡರೆ, ಕಷ್ಟಕ್ಕೆ ಸ್ಪಂದಿಸಿದರೆ ಮತದಾರರು ಅಷ್ಟು ಸುಲಭದಲ್ಲಿ ಕೈಬಿಡಲಾರರು ಎನ್ನುವುದು ಕೂಡ ಗೋಡೆ ಬರಹದಷ್ಟೇ ಸತ್ಯ ಯಾವುದಕ್ಕೂ ಚುನಾವಣೆ ಮುಗಿದು ಫಲಿತಾಂಶಕ್ಕೆ ಕಾಯೋಣ ಎನ್ನುತ್ತಾರೆ ಇಲ್ಲಿನ ಮತದಾರರು.

ಇತ್ತೀಚಿನ ಸುದ್ದಿ

ಜಾಹೀರಾತು