ಇತ್ತೀಚಿನ ಸುದ್ದಿ
ಮಂಗಳೂರು:ಧರೆಗುರುಳಿದ ನಾಲ್ಕು ಮರಗಳು, ಜಖಂಗೊಂಡ ವಾಹನಗಳು ; ಸ್ಮಾರ್ಟ್ ಸಿಟಿಯೊಳಗಿನ ಅವೈಜ್ಞಾನಿಕ ಕಾಮಗಾರಿಗೆ ಬಲ ಕಳೆದುಕೊಂಡ ಮರಗಳು !
25/05/2025, 00:29

ಮಂಗಳೂರು:(www.reporterkarnataka.com)ಮಂಗಳೂರು ನಗರದಲ್ಲಿ ಶನಿವಾರ ಸಂಜೆ ಸುರಿದ ಮಳೆಗೆ ಚಿಲಿಂಬಿಯಲ್ಲಿ ನಾಲ್ಕು ಮರಗಳು ಧರೆಗುರುಳಿದ್ದು, ರಿಕ್ಷಾ, ಕಾರು, ಬಸ್ ಸೇರಿಂದಂತೆ ಹಲವು ವಾಹನಗಳು ಜಖಂಗೊಂಡಿವೆ.
ಘಟನಾ ಸ್ಥಳದಲ್ಲಿ ವಾಹನಗಳು ಜನ ಸಂಚಾರ ಹಾಗೂ ಫುಡ್ ಸ್ಟಾಲ್ಗಳು ಇದ್ದರೂ ಅದೃಷ್ಟಾವಶತ್ ಯಾವುದೇ ರೀತಿಯಲ್ಲಿ ಜನರ ಪ್ರಾಣ ಅಥವಾ ದೇಹಕ್ಕೆ ಹಾನಿ ಉಂಟಾಗಲಿಲ್ಲ !
ಲೇಡಿಹಿಲ್ ನಾರಾಯಣ ಗುರು ವೃತ್ತ ಸಮೀಪದ ಬಸ್ಸು ತಂಗುದಾಣದಿಂದ ಸಾಯಿ ಬಾಬ ಮಂದಿರದವರೆಗಿನ ಸಾಲು ಸಾಲು ಮರಗಳು ಧರೆಗುರುಳಿದ್ದು, ಸ್ಮಾರ್ಟ್ ಸಿಟಿಯ ಅವೈಜ್ಞಾನಿಕ ಕಾಮಗಾರಿಯೇ ಇದಕ್ಕೆ ಕಾರಣವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದೇ ಸ್ಥಳದಲ್ಲಿ ಇತ್ತೀಚೆಗೆ ಜಲಸಿರಿ, ಒಳಚರಂಡಿ ಕಾಮಗಾರಿ ನಡೆದಿದ್ದು, ಮರಗಳ ಸಮೀಪದಲ್ಲಿ ಅಗೆಯಲಾಗಿತ್ತು ಬಳಿಕ ಕಾಂಕ್ರೀಟ್ ಹಾಗೂ ಇಂಟರ್ ಲಾಕ್ ಹಾಕಾಲಾಗಿದೆ ಇದರಿಂದಾಗಿ ಮರದ ಬೇರುಗಳಿಗೆ ಸಮರ್ಪಕ ಜಾಗವೂ ಬಲವೂ ಸಿಗದೆ ಗಾಳಿ ಮಳೆಗೆ ಮರ ಧರೆಗೆ ಉರುಳಿದೆ ಎಂದು ಚರ್ಚೆಯಾಗುತ್ತಿದೆ.
ಮರಗಿಡಗಳಿಗೆ ಮಾರಕ ಕಾಂಕ್ರೀಟೀಕರಣ :- ಅಭಿವೃದ್ಧಿ ನೆಪದಲ್ಲಿ ನಗರ ಕಾಂಕ್ರೀಟ್ಮಯಗೊಂಡಿದ್ದು, ಮಾತ್ರವಲ್ಲದೆ ನಗರದೊಳಗಿನ ಸಸ್ಯ ಸಂಕುಲಗಳಿಗೆ ಮಾರಕವಾಗಿ ಪರಿಣಮಿಸುತ್ತಿದೆ. ಮುಖ್ಯ ರಸ್ತೆಯ ಬದಿಗಳಲ್ಲಿ ನೆಟ್ಟ ಮರಗಳಿಗೆ ಒಂದು ಕಡೆ ಕಾಂಕ್ರೀಟ್ ನೆಲದ ಅಡಿ ಭಾಗದಲ್ಲಿ ಒಳಚರಂಡಿ ಕಾಮಗಾರಿ ಅಥವಾ ಚರಂಡಿಯಾ ಕಾಂಕ್ರೀಟ್ ಗೋಡೆಗಳೂ ಕೂಡ ಮರದ ಬೇರುಗಳ ಬೆಳವಣಿಗೆಗೆ ತಡೆಯಾಗುತ್ತಿದ್ದು, ಮಣ್ಣಿನೊಳಗಿನ ಹಿಡಿತವಿರದೆ ಬಲ ಕಳೆದುಕೊಂಡು ಮರಗಳು ಧರೆಗುರುಳಲು ಕಾರಣವಾಗುತ್ತದೆ ಎನ್ನಲಾಗುತ್ತಿದೆ.