ಇತ್ತೀಚಿನ ಸುದ್ದಿ
ಮಂಗಳೂರು: ಪಾಲ್ದನೆ ಸಂತ ತೆರೆಸಾ ಚರ್ಚ್ ನಲ್ಲಿ ವಾರ್ಷಿಕೋತ್ಸವ ಸಂಭ್ರಮ
13/10/2025, 09:12

ಮಂಗಳೂರು(reporterkarnataka.com): ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚ್ ನ ವಾರ್ಷಿಕೋತ್ಸವ ಅಕ್ಟೋಬರ್ 12 ರಂದು ರವಿವಾರ ವಿಜೃಂಭಣೆಯಿಂದ ನಡೆಯಿತು.
ಹಬ್ಬದ ಸಾಂಭ್ರಮಿಕ ಬಲಿ ಪೂಜೆಯ ನೇತೃತ್ವವನ್ನು ಮಂಗಳೂರು ಧರ್ಮ ಪ್ರಾಂತ್ಯದ ವಿಶ್ರಾಂತ ಬಿಷಪ್ ಅತಿ ವಂದನೀಯ ಡಾ. ಅಲೋಶಿಯಸ್ ಪಾವ್ಲ್ ಡಿ ಸೋಜಾ ಅವರು ವಹಿಸಿ ವಾರ್ಷಿಕೋತ್ಸವದ ಶುಭಾಶಯಗಳನ್ನು ಸಲ್ಲಿಸಿದರು. ಚರ್ಚ್ ನ ಪೋಷಕಿ ಮದರ್ ತೆರೆಸಾ ಅವರ ಮೌಲ್ಯಾಧಾರಿತ ಜೀವನವನ್ನು ನೆನಪಿಸಿದ ಅವರು ಪ್ರತಿಯೊಬ್ಬ ಭಕ್ತರು ಕೂಡಾ ತಮ್ಮ ಜೀವನದಲ್ಲಿ ತೆರೆಸಾ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳ ಬೇಕೆಂದು ಹೇಳಿದರು.
ಪ್ರವಚನ ನೀಡಿದ ಜಪ್ಪು ಸೈಂಟ್ ಜೋಸೆಫ್ ಸೆಮಿನರಿಯ ಮಾಜಿ ರೆಕ್ಟರ್ ವಂದನೀಯ ಫಾ. ಡಾ. ರೊನಾಲ್ಡ್ ಸೆರಾವೋ ಅವರು ಬಡ ಬಗ್ಗರ ಮತ್ತು ನಿರ್ಗತಿಕರ ಸೇವೆ ಮಾಡಿದ ಸಂತ ತೆರೆಸಾ ಅವರ ಬದುಕು ನಮಗೆಲ್ಲ ಮಾದರಿಯಾಗಿದೆ. ಅಂತಹ ಪೋಷಕಿಯನ್ನು ಪಡೆದ ಪಾಲ್ದನೆ ಚರ್ಚ್ ನ ಭಕ್ತರು ಧನ್ಯರು ಎಂದು ಹೇಳಿದರು.
ಬಲಿ ಪೂಜೆಯಲ್ಲಿ ಮಂಗಳೂರು ಸಿಟಿ ವಲಯದ ಮುಖ್ಯಸ್ಥ ವಾಮಂಜೂರು ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾ. ಡಾ. ಜೇಮ್ಸ್ ಡಿ ಸೋಜಾ, ಅಂಜೆಲೋರ್ ಗಾರ್ಡಿಯನ್ ಏಂಜೆಲ್ ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾ. ಫ್ರೆಡ್ರಿಕ್ ಮೊಂತೇರೊ, ಬಜ್ಜೋಡಿ ಇನ್ಫೆಂಟ್ ಮೇರಿ ಚರ್ಚ್ ನ ವಂದನೀಯ ಫಾ. ಮೆಲ್ವಿನ್ ಡಿ ಸೋಜಾ, ಜಪ್ಪು ಸೆಮಿನರಿಯ ವಂದನೀಯ ಫಾ
ಫೆಲಿಕ್ಸ್ ಮೊಂತೇರೊ, ಮಂಜೇಶ್ವರ ಚರ್ಚ್ ನ ಧರ್ಮ ಗುರು ವಂದನೀಯ ಫಾ. ವಿನ್ಸೆಂಟ್ ಸಲ್ಡಾನ್ಹಾ, ಪಾಲ್ದನೆ ಸಂತ ತೆರೆಸಾ ಚರ್ಚ್ ನ ಡೀಕೋನ್ ರೋವಿನ್ ಲೋಪೆಜ್ ಮತ್ತು ಇತರ ಗುರುಗಳು ಉಪಸ್ಥಿತರಿದ್ದರು. ಪಾಲ್ದನೆ ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾ. ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರು ಬಲಿಪೂಜೆಯಲ್ಲಿ ಭಾಗವಹಿಸಿ ವಾರ್ಷಿಕೋತ್ಸವದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಚರ್ಚ್ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಕಾರ್ಯದರ್ಶಿ ಆಸ್ಟಿನ್ ಮೊಂತೇರೊ, ಆಧ್ಯಾತ್ಮಿಕ ಸಂಚಾಲಕಿ ಪ್ರೆಸಿಲ್ಲಾ ಫೆರ್ನಾಂಡಿಸ್ , ಗಾಯನ ಮಂಡಳಿಯ ಅಧ್ಯಕ್ಷೆ ಲಿಝಿ ಫೆರ್ನಾಂಡಿಸ್ ಮತ್ತು ಇತರರು ಉಪಸ್ಥಿತರಿದ್ದರು. ಹಬ್ಬದ ಪಿರ್ಜೆಂತ್ ಫ್ರಾಂಕ್ ಫೆರ್ನಾಂಡಿಸ್ ಅವರನ್ನು ಎಂ.ಸಿ.ಸಿ. ಬ್ಯಾಂಕಿನ ಮಾಜಿ ಅಧ್ಯಕ್ಷ ಮೆಲ್ವಿನ್ ಡಿ ಕುನ್ಹಾ ಅವರೊಂದಿಗೆ ಸನ್ಮಾನಿಸಲಾಯಿತು.