ಇತ್ತೀಚಿನ ಸುದ್ದಿ
ಕೊಟ್ಟಿಗೆಹಾರ ಬಳಿ ಕಾಡುಕೋಣ ದಾಳಿ: ಇಬ್ಬರಿಗೆ ತೀವ್ರ ಗಾಯ; ಆಸ್ಪತ್ರೆಗೆ ದಾಖಲು
14/03/2024, 07:27

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕೊಟ್ಟಿಗೆಹಾರದ ಬಾಳೂರು ಸಮೀಪದ ಹೊರಟ್ಟಿ ಹಾಗೂ ಜಾವಳಿಯ ಸಂಪ್ಲಿ ಬಳಿ ಕಾಡುಕೋಣ ದಾಳಿ ನಡೆಸಿದ ಪರಿಣಾಮ ಇಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಬಾಳೂರು ಹೊರಟ್ಟಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ್ ಅವರ ಪತ್ನಿ ಸರೋಜ ಅವರು ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಡುಕೋಣ ದಾಳಿ ನಡೆಸಿ ಕಾಲಿನ ತೊಡೆಯ ಎರಡು ಭಾಗಕ್ಕೆ ತಿವಿದಿದ್ದು ಕಾಲಿನ ಬಲಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಅವರನ್ನು ಮೂಡಿಗೆರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಚಿಕ್ಕಮಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಅರಣ್ಯ ಉಪ ವಲಯ ಅರಣ್ಯಾಧಿಕಾರಿ ಚರಣ್, ಮೋಸಿನ್, ಗ್ರಾಮಸ್ಥ ರಘುಪತಿ ಭೇಟಿ ನೀಡಿ ದಾಳಿಯಾದ ಸ್ಥಳ ಪರಿಶೀಲನೆ ಮಾಡಿ ಪರಿಹಾರದ ಭರವಸೆ ನೀಡಿದ್ದಾರೆ. ಜಾವಳಿಯ ಸಮೀಪದ ಸಂಪ್ಲಿ ಬಳಿ ಕಾಡುಕೋಣ ದಾಳಿಯಿಂದ ನಡೆಸಿ ಟಿಂಬರ್ ಕಾರ್ಮಿಕರೊಬ್ಬರು ಗಾಯಗೊಂಡಿದ್ದಾರೆ. ಜಾವಳಿ ಬಳಿ ಗ್ರಾಮ ಪಂಚಾಯಿತಿ ಸದಸ್ಯ ಪ್ರತೀಶ್ ಅವರ ಮೇಲೆ ಕಾಡುಕೋಣ ದಾಳಿ ನಡೆಸಿ ಬಲಭಾಗದ ಪಕ್ಕೆ ಮುರಿದಿದ್ದು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಪವಲಯ ಅರಣ್ಯ ಅಧಿಕಾರಿ ಚಂದನ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.