ಇತ್ತೀಚಿನ ಸುದ್ದಿ
ಕೊರಗಜ್ಜ ಚಿತ್ರೀಕರಣ: ನಟಿ ಶುಭಾ ಪೂಂಜ ಜತೆ ಯುವಕರ ಗುಂಪು ಅಸಭ್ಯ ವರ್ತನೆ; ಶೂಟಿಂಗ್ ರದ್ದು
29/10/2023, 08:36

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕುದುರೆಮುಖದಲ್ಲಿ ಕೊರಗಜ್ಜದ ಚಿತ್ರದ ಹಾಡಿನ ಚಿತ್ರೀಕರಣದ ವೇಳೆ
ನಟಿ ಶುಭಾ ಪೂಂಜಾ ಅವರೊಂದಿಗೆ ಕೆಲವು ಕಿಡಿಗೇಡಿಗಳು ಅಸಭ್ಯ ವರ್ತಿಸಿದ ಘಟನೆ ನಡೆದಿದೆ.
ಕುದುರೆಮುಖದ ಮೈದಾಡಿ ಗುಡ್ಡದಲ್ಲಿ ಹಾಡಿನ ಚಿತ್ರೀಕರಣ ನಡೆಯುತ್ತಿತ್ತು. ನಟಿ ಶುಭಾ ಪೂಂಜಾ ಡ್ಯಾನ್ಸ್ ಮಾಡುವ ವೇಳೆಯಲ್ಲಿ ಅಪರಿಚಿತ ಯುವಕರ ಗುಂಪೊಂದು ಅವರ ಕೈ ಹಿಡಿದು ಎಳೆದಿದ್ದಾರೆ ಎಂದು ಆರೋಪಿಸಲಾಗಿದೆ. ಯುವಕರ ಅಸಭ್ಯ ವರ್ತನೆಯಿಂದ ಹಾಡಿನ ಚಿತ್ರೀಕರಣವನ್ನು ಚಿತ್ರತಂಡ ನಿಲ್ಲಿಸಿದೆ. ಸುಧೀರ್ ಅತ್ತಾವರ ನಿರ್ದೇಶನದಲ್ಲಿ ಕೊರಗಜ್ಜ ಚಿತ್ರ ಚಿತ್ರೀಕರಣ ನಡೆಯುತ್ತಿತ್ತು.
ಬಾಲಿವುಡ್ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಜೊತೆ ಶುಭಾ ಶೂಟಿಂಗ್ ನಡೆಸುವ ವೇಳೆ ನಡೆದ ಘಟನೆ ನಡೆದಿದೆ.
ಆದರೆ, ಚಿತ್ರತಂಡ ಪೊಲೀಸರಿಗೆ ದೂರು ನೀಡಿಲ್ಲ.
ಘಟನೆ ಬಗ್ಗೆ ನಿರ್ದೇಶಕ ಸುಧೀರ್ ಅತ್ತಾವರ ಮಾತನಾಡಿ, ಘಟನೆ ಮನಸ್ಸಿಗೆ ಅತ್ಯಂತ ನೋವು ಉಂಟು ಮಾಡಿದೆ. ಯಾವುದೋ ಉದ್ದೇಶದಿಂದ ಯುವಕರು ಅಸಭ್ಯ ವರ್ತನೆ ಮಾಡಿದ್ದಾರೆ.
ಇದರಿಂದ ಚಿತ್ರಿಕರಣವನ್ನೇ ನಿಲ್ಲಿಸಬೇಕಾದಂತ ಪರಿಸ್ಥಿತಿ ನಿರ್ಮಾಣವಾಯಿತು. ಹಾಡಿನ ಚಿತ್ರೀಕರಣಕ್ಕಾಗಿ 50 ಜನ ಕಲಾವಿದರು, ಖ್ಯಾತ ಕೊರಿಯೋಗ್ರಾಫರ್ ಗಣೇಶ ಆಚಾರ್ಯ ಕೂಡ ಇದ್ದರು. ಬಿಜೆಪಿ ಪಕ್ಷದ ಸಾಗರ ಘಟಕವೆಂದು ಹೇಳಿಕೊಂಡು ಕೆಲ ಯುವಕರು ಅಸಭ್ಯ ವರ್ತನೆ ಮಾಡಿದ್ದಾರೆ ಎಂದು ಸುಧೀರ್ ಅತ್ತಾವರ ಹೇಳಿದ್ದಾರೆ.