ಇತ್ತೀಚಿನ ಸುದ್ದಿ
Kasaragod | ಬೇಕಲ ರಾಮ ನಾಯಕರದ್ದು ಸಾಹಿತ್ಯ ಸರಸ್ವತಿಯ ಮನಸ್ಸು: ಸ್ಮರಣಾಂಜಲಿ ಕಾರ್ಯಕ್ರಮದಲ್ಲಿ ಚಂದ್ರಹಾಸ ಚಿತ್ತಾರಿ
28/04/2025, 21:15

ಕಾಸರಗೋಡು(reporterkarnataka.com): ‘ಬೇಕಲ ರಾಮ ನಾಯಕರದ್ದು ಸಾಹಿತ್ಯ ಸರಸ್ವತಿಯ ಮನಸ್ಸು. ಅವರ ನಿಸ್ವಾರ್ಥ ಸಾಹಿತ್ಯ ಸೇವೆಯು ಸಾರ್ವಕಾಲಿಕ ಆದರ್ಶ, ಸರ್ವರೂ ಒಂದಾಗಿ, ಸಹಬಾಳ್ವೆ ನಡೆಸಬೇಕೆಂಬ ಅರ್ಪಣಾ ಮನೋಭಾವ ಅವರ ಕೃತಿಗಳಲ್ಲಿವೆ. ಈ ಎಲ್ಲಾ ಕೃತಿಗಳೂ ಕೂಡಾ ಸಾಹಿತ್ಯ ಕ್ಷೇತ್ರಕ್ಕೆ ಮಹತ್ವದ ವರದಾನ’ ಎಂದು ಸಾಹಿತಿ ಚಂದ್ರಹಾಸ ಎಂ. ಬಿ. ಚಿತ್ತಾರಿ ಹೇಳಿದರು. ಅವರು ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಮತ್ತು ಗ್ರಂಥಾಲಯದ ಬಯಲು ರಂಗ ಮಂದಿರದಲ್ಲಿ ಡಾ. ವಾಮನ್ ಬೇಕಲ್ ಸ್ಥಾಪಕ ಸಂಚಾಲಕತ್ವದ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡಿನ ಜಿಲ್ಲಾ ಘಟಕದ ನೇತೃತ್ವದಲ್ಲಿ ಕೊಡಗು ಜಿಲ್ಲಾ ಕನ್ನಡ ಭವನ, ಕೊಡಗು ಜಿಲ್ಲಾ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಕಾಸರಗೋಡಿನ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ನಡೆದ ಅಗ್ರಗಣ್ಯ ಸಾಹಿತಿ, ಇತಿಹಾಸ ಶಿಕ್ಷಕ ಮತ್ತು ಸಂಶೋಧಕರಾದ ಬೇಕಲ ರಾಮ ನಾಯಕರ ಬದುಕು – ಬರಹದ ಕುರಿತ ಸ್ಮರಣಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು. .
ಸಾಮಾಜಿಕ ಮುಖಂಡ ಡಾ. ಕೆ. ಎನ್. ವೆಂಕಟ್ರಮಣ ಹೊಳ್ಳ ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿದರು. ಡಾ. ವಾಮನ್ ರಾವ್ ಬೇಕಲ್, ಸಂಧ್ಯಾರಾಣಿ ಟೀಚರ್ ಸಹಿತ ಅನೇಕ ಮಂದಿ ಪುಷ್ಪಾರ್ಚನೆ ಮಾಡಿದರು. ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲಾ ಘಟಕದ ಅಧ್ಯಕ್ಷ ಸಾಹಿತಿ, ಪತ್ರಕರ್ತ ವಿರಾಜ್ ಅಡೂರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,’ ಕಾಸರಗೋಡಿನಲ್ಲಿ ಕನ್ನಡವನ್ನು ಉಳಿಸುವ ಜತೆಗೆ, ದುಪ್ಪಟ್ಟು ವೇಗದಲ್ಲಿ ಕನ್ನಡವನ್ನು ಬೆಳೆಸಬೇಕಾದ ಅಗತ್ಯವಿದೆ. ಹೊಸ ಜನಾಂಗದಲ್ಲಿ ಕನ್ನಡದ ಭಾಷಾ ಪ್ರೇಮ ಅರಳಿಸುವ ನಿಟ್ಟಿನಲ್ಲಿ ಸಂಘಟನೆಯು ಯಶಸ್ವೀ ಹೆಜ್ಜೆಯನ್ನು ಇರಿಸಿದೆ. ಬಹಳಷ್ಟು ಮಂದಿ ಕನ್ನಡದ ಯುವ ಸಮುದಾಯ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದು ಹೇಳಿದರು.
ನಿವೃತ್ತ ಶಿಕ್ಷಕಿ ಶಾರದಾ ಮೊಳೆಯಾರ್ ಎಡನೀರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಸರಗೋಡಿನ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನಾರ್ಥಿ ಸೋಮು ಎಸ್ ಹಿಪ್ಪರಗಿ, ಕೊಡಗು ಕನ್ನಡ ಭವನದ ಅಧ್ಯಕ್ಷ ಬೊಳ್ಳಜಿರ ಬಿ ಅಯ್ಯಪ್ಪ, ಕಾಸರಗೋಡು ಜಿಲ್ಲಾ ರಾಮರಾಜ ಕ್ಷತ್ರಿಯ ಕೋಟೆಯಾರ್ ಸೇವಾ ಸಂಘದ ಅಧ್ಯಕ್ಷ ಕಮಲಾಕ್ಷ ಕಲ್ಲುಗದ್ದೆ, ಕೊಡಗು ಜಿಲ್ಲಾ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ರುಬೀನಾ ಎಂ ಎ, ಮುಖಂಡರಾದ ಚಂದನ್ ನಂದರಬೆಟ್ಟು, ಅರುಣ್. ಲೋಹಿತ್ ಎಂ ಆರ್. ಗಿರೀಶ್ ಪಿ ಎಂ ಚಿತ್ತಾರಿ, ಪ್ರಕಾಶಕಿ ಸಂಧ್ಯಾರಾಣಿ ಟೇಚರ್, ಕಾಸರಗೋಡು ಜಿಲ್ಲಾ ಘಟಕದ ಕಾರ್ಯದರ್ಶಿ ದೇವರಾಜ್ ಆಚಾರ್ಯ ಸೂರಂಬೈಲ್, ವಸಂತ ಕೆರೆಮನೆ, ರಾಜೇಶ್ ಕೋಟೆಕಣಿ ಇದ್ದರು.
ಈ ಸಂದರ್ಭದಲ್ಲಿ ಕಾಸರಗೋಡಿನ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ವಿದ್ಯಾರ್ಥಿ ಸಯ್ಯದ್ ಅವರಿಂದ ಗಾಯನ ಕಾರ್ಯಕ್ರಮ ನಡೆಯಿತು. ನಂತರ ಹಿರಿಯ ಸಾಹಿತಿ ಕೆ ನರಸಿಂಹ ಭಟ್ ಏತಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ವಸಂತ ಚುಟುಕು ಕವಿಗೋಷ್ಠಿಯಲ್ಲಿ ಕಾಸರಗೋಡು ಹಾಗೂ ಕೊಡಗು ಜಿಲ್ಲೆಯ ಸುಮಾರು 20 ಕವಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲಾ ಪ್ರಥಮ ಚುಟುಕು ರಚನಾ ಸ್ಪರ್ಧೆಯ
ಲ್ಲಿ ವಿಜೇತರಾದ ಅವನಿ ಎಂ ಬೆಳ್ಳೂರು, ಪೂಜ ಸಿ ಹೆಚ್ ದೇಲಂಪಾಡಿ, ಕಾವ್ಯ ರಾವ್ ಕಾಸರಗೋಡು, ಗಾಯತ್ರಿ ಪಳ್ಳತ್ತಡ್ಕ, ವೈಶಾಲಿನಿ ಟಿ ಇವರಿಗೆ ಕಾಸರಗೋಡು ಜಿಲ್ಲಾ ಚುಟುಕು ಕಾವ್ಯ ಪ್ರಶಸ್ತಿ-2025 ನೀಡಿ ಗೌರವಿಸಲಾಯಿತು. ಹಿರಿಯ ಪತ್ರಕರ್ತ ಪ್ರದೀಪ್ ಬೇಕಲ್ ಅವರಿಗೆ ಬೇಕಲ ರಾಮ ನಾಯಕ ಸಾಹಿತ್ಯ ಪ್ರಶಸ್ತಿ ಹಾಗೂ ಸಂಘಟಕ ಮಂಗಳೂರಿನ ಡಾ.ರವೀಂದ್ರ ಜೆಪ್ಪು ಅವರಿಗೆ ಬೇಕಲ ರಾಮ ನಾಯಕ ಸದ್ಭಾವನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಂಧ್ಯಾರಾಣಿ ಟೀಚರ್ ನೇತೃತ್ವದ ಕನ್ನಡ ಭವನ ಪ್ರಕಾಶನದ 7ನೇ ಕೃತಿಯಾದ, ಕವಯತ್ರಿ ಮೇಘಾ ಶಿವರಾಜ್ ಕಾಸರಗೋಡು ಅವರ ‘ಮೌನ ಮಾತಾದಾಗ’ ಕವನ ಸಂಕಲನವನ್ನು ಡಾ. ರವೀಂದ್ರ ಜೆಪ್ಪು ಬಿಡುಗಡೆ ಮಾಡಿದರು. ಡಾ. ಕೊಳ್ಚಪ್ಪೆ ಗೋವಿಂದ ಭಟ್ ಕೃತಿ ಪರಿಚಯ ಮಾಡಿದರು. ಸುಭಾಷಿಣಿ ಚಂದ್ರ ಕನ್ನಟಿಪ್ಪಾರ ಪ್ರಾರ್ಥನೆ ಹಾಡಿದರು. ವಿಜಯರಾಜ ಪುಣಿಂಚಿತ್ತಾಯ ಬೆಳ್ಳೂರು ಸ್ವಾಗತಿಸಿದರು. ಸಂಘಟನೆಯ ಸ್ಥಾಪಕ ಸಂಚಾಲಕರಾದ ಡಾ. ವಾಮನ್ ರಾವ್ ಬೇಕಲ್ ವಂದಿಸಿದರು. ಕಸಾಪ ಕೇರಳ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ನಿರೂಪಿಸಿದರು. ಈ ಸಂದರ್ಭದಲ್ಲಿ ಕಾಶ್ಮೀರ ಹುತಾತ್ಮರೀಗೆ ಮೌನ ಪ್ರಾರ್ಥನೆಯ ಮೂಲಕ ಶ್ರದ್ದಾಂಜಲಿ ಅರ್ಪಿಸಿ ಕಾರ್ಯಕ್ರಮ ಆರಂಭಿಸಲಾಯಿತು.