ಇತ್ತೀಚಿನ ಸುದ್ದಿ
ಗ್ರಾಮಾಂತರ ಆಟೋಗಳು ಮಂಗಳೂರು ನಗರ ಪ್ರವೇಶಕ್ಕೆ ನಿಷೇಧ: ಜಿಲ್ಲಾಧಿಕಾರಿ ಖಡಕ್ ಆದೇಶ
05/02/2023, 12:39

ಮಂಗಳೂರು(reporterkarnataka.com): ಗ್ರಾಮಾಂತರ ಪ್ರದೇಶದಲ್ಲಿ ಪರವಾನಗಿ ಹೊಂದಿರುವ ಆಟೊರಿಕ್ಷಾಗಳು ಯಾವುದೇ ಕಾರಣಕ್ಕೂ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿ ಪ್ರವೇಶ ಹಾಗೂ ಸಂಚಾರ ಮಾಡುವಂತಿಲ್ಲ ಎಂಬ ಕಟ್ಟುನಿಟ್ಟಿನ ಆದೇಶವನ್ನು ಜಿಲ್ಲಾಧಿಕಾರಿ ರವಿಕುಮಾರ್ ಹೊರಡಿಸಿದ್ದಾರೆ.
ಮಂಗಳೂರು ಪಾಲಿಕೆ ವ್ಯಾಪ್ತಿಯನ್ನು ಬಿಟ್ಟು ಗ್ರಾಮಾಂತರ ಪ್ರದೇಶದಲ್ಲಿ ಹೊಸ ಆಟೊ ರಿಕ್ಷಾಗಳಿಗೆ ಪರವಾನಗಿ ಮಂಜೂರು ಮಾಡಲು ಯಾವುದೇ ನಿರ್ಬಂಧ ಇಲ್ಲ. ಮಂಗಳೂರು ತಾಲ್ಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಸಂಚರಿಸಲು ಹೊಸ ಆಟೊ ರಿಕ್ಷಾಗಳಿಗೆ ಪರವಾನಗಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿ ಸಂಚರಿಸಲು ಹೊಸ ಆಟೊ ರಿಕ್ಷಾ ಪರವಾನಗಿ ಮಂಜೂರು ಮಾಡುವುದನ್ನು ಹಾಗೂ ಹೊಸದಾಗಿ ಪರವಾನಗಿ ಹೊಂದಿ ಅಥವಾ ಇತರೆ ಕಡೆಗಳಿಂದ ವರ್ಗಾವಣೆ ಹೊಂದಿ ಬರುವ ಆಟೊರಿಕ್ಷಾಗಳ ಸಂಚಾರವನ್ನು ನಿಷೇಧಸಲಾಗಿದ್ದು, ಇ-ಆಟೊ ರಿಕ್ಷಾಗಳು, ಆಟೊ ರಿಕ್ಷಾಗಳು ಸಂಚಾರ ನಿಯಮ ಪಾಲನೆ ಕಡ್ಡಾಯ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ವಲಯ-1 ಕ್ಕೆ ಎಲ್ಲ ವಿಧದ ಆಟೊ ರಿಕ್ಷಾಗಳಿಗೆ ಎಣದರೆ ಇ-ಆಟೋರಿಕ್ಷಾಗಳು, ಮೆಥನಾಲ್ ಮತ್ತು ಇಥನಾಲ್ ಇಂಧನ ಬಳಸಿ ಸಂಚರಿಸುವ ಆಟೊ ರಿಕ್ಷಾಗಳು ಒಳಗೊಂಡಂತೆ ವಲಯ ಸಂಖ್ಯೆ1 ರಲ್ಲಿ ಕ್ಕೆ ಚಾಕಾಕೃತಿ ಆಕಾರದಲ್ಲಿ ಸೂಕ್ತ ರೀತಿಯ, ಎಲ್ಲರಿಗೂ ಗುರುತು ಸಿಗುವಂತಹ ಬಣ್ಣದ ಸ್ಟಿಕ್ಕರ್, ಗುರುತಿನ ಸಂಖ್ಯೆಗಳನ್ನು ಪೊಲೀಸ್ ಇಲಾಖೆಯಿಂದ ಪಡೆದು ಅಂಟಿಸಿಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ವಲಯ -2 ರಲ್ಲಿ ಎಲ್ಲಾ ವಿಧದ ಆಟೋರಿಕ್ಷಾಗಳಿಗೆ ಎಂದರೆ ಎಲೆಕ್ಟ್ರಿಕಲ್ ವೆಹಿಕಲ್ಸ್ (ಇ-ಆಟೋರಿಕ್ಷಾಗಳು) ಮೆಥನಾಲ್ ಹಾಗೂ ಇಥನಾಲ್ ಇಂಧನ ಬಳಸಿ ಸಂಚರಿಸುವ ಆಟೊ ರಿಕ್ಷಾಗಳು ಒಳಗೊಂಡಂತೆ ಆಟೊರಿಕ್ಷಾದ ವಲಯ ಸಂಖ್ಯೆ 2 ರಲ್ಲಿ ವೃತ್ತಾಕಾರದಲ್ಲಿ ಸೂಕ್ತ ರೀತಿಯ ಎಲ್ಲರಿಗೂ ಗುರುತು ಸಿಗುವಂತಹ ಬಣ್ಣದ ಸ್ಟಿಕ್ಕರ್ ಹಾಗೂ ಗುರುತಿನ ಸಂಖ್ಯೆಗಳನ್ನು ಪೊಲೀಸ್ ಇಲಾಖೆಯಿಂದ ಪಡೆದು ಅಂಟಿಸಬೇಕು ಎಂದು ತಿಳಿಸಿದ್ದಾರೆ.
2022 ರ ನವೆಂಬರ್ 25 ರಿಂದ ಯಾವುದೇ ಇ-ಆಟೋರಿಕ್ಷಾ, ಮೆಥನಾಲ್ ಹಾಗೂ ಇಥನಾಲ್ ಇಂಧನ ಬಳಸಿ ವಾಹನ ನೋಂದಣಿಯಾಗಿದ್ದರೂ ಅಂತಹ ವಾಹನಗಳು ವಲಯ2 ರಲ್ಲಿ ಸಂಚರಿಸಬೇಕು. ಹಾಗೂ ವಲಯ 2 ರ ಸ್ಟಿಕ್ಕರ್ ಅಂಟಿಸಿರಬೇಕು. ಈ ಅಧಿಸೂಚನೆ ಆದೇಶವು ಜ. 24, 2023 ರಿಂದ ಮುಂದಿನ ಆದೇಶದವರೆಗೂ ಜಾರಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ,