ಇತ್ತೀಚಿನ ಸುದ್ದಿ
ಹಾವುಗಳ ಸೆರೆ ಹಿಡಿದು ಹಿಂಸೆ ನೀಡುವವರ ವಿರುದ್ಧ FIR ದಾಖಲಿಸಿ: ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚನೆ
17/09/2025, 11:58

ಬೆಂಗಳೂರು(reporterkarnataka.com): ಅಕ್ರಮವಾಗಿ ಹಾವು ಹಾಗೂ ಅವುಗಳ ಮೊಟ್ಟೆ ಗಳನ್ನು ದಾಸ್ತಾನು ಮಾಡುವವರ, ವಿಷ ತೆಗೆಯುವವರ ಮತ್ತು ಅನುಮತಿ ಇಲ್ಲದೇ ಅಕ್ರಮವಾಗಿ ವನ ಪ್ರವೇಶಿಸಿ ಸಂಶೋಧನೆ ಮಾಡುವವರ ವಿರುದ್ಧ FIR ದಾಖಲಿಸಲು ಅರಣ್ಯ, ಜೀವಿ ಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಬಿ. ಖಂಡ್ರೆ ಅವರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ವನ್ಯ ಜೀವಿ ಕಾಯ್ದೆ ಉಲ್ಲಂಘಿಸಿ ಕಾಳಿಂಗ ಸರ್ಪಗಳನ್ನು ಅನಧಿಕೃತವಾಗಿ ಸೆರೆ ಹಿಡಿದಿಟ್ಟು ನೆರೆ ರಾಜ್ಯದವರಿಗೆ ಅಮಾನವೀಯವಾಗಿ ಫೋಟೋ ಶೂಟ್ ಮಾಡಲು ಅವಕಾಶ ಮಾಡಿ ಕೊಡುತ್ತಿದ್ದ ಜಾಲವನ್ನು ಭೇದಿಸಿ ಪ್ರಕರಣ ದಾಖಲಿಸಲಾಗಿದೆ. ಅದೇ ರೀತಿ ಮಲೆನಾಡಿನಲ್ಲಿ ಸಹ ಸಂಶೋಧನೆಯ ಅವಧಿ ಪೂರ್ಣವಾಗಿದ್ದರೂ ಕಾಳಿಂಗ ಸರ್ಪಗಳ ಸಂಶೋಧನೆ ಹೆಸರಿನಲ್ಲಿ ವಾಣಿಜ್ಯ ಚಟುವಟಿಕೆ ನಡೆಯುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದ್ದು ಹಲವು ದೂರುಗಳು ಸ್ವೀಕೃತವಾಗಿವೆ. ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ.
ಈ ಮಧ್ಯೆ ದಿನಾಂಕ 15-09-2025 ರಂದು ಶಿವಮೊಗ್ಗದ ಇಂದಿರಾನಗರ ಮತ್ತೂರು ರಸ್ತೆಯಲ್ಲಿ ಕೆಲವರು ಎರಡು ಹೆಬ್ಬಾವುಗಳನ್ನು ಹಿಡಿದು ಅವುಗಳ ಬಾಯಿಗೆ ಪ್ಲಾಸ್ಟರ್ ಹಾಕಿ ಹಿಂಸೆ ನೀಡುತ್ತಾ ಫೋಟೋ, ವಿಡಿಯೋ ಶೂಟ್ ಮಾಡಿ ವಿಕೃತಿ ಮೆರೆದಿದ್ದಾರೆ. ಇಲಾಖೆ ಸಿಬ್ಬಂದಿಗಳು ಅವುಗಳನ್ನು ವಶಕ್ಕೆ ಪಡೆದ ಬಹಳ ಹೊತ್ತಿನವರೆಗೂ ಉರಗ ರಕ್ಷ ಕರ ಕೊರತೆಯಿಂದ ಹಾವುಗಳ ಬಾಯಿಗೆ ಹಾಕಿದ್ದ ಪ್ಲಾಸ್ಟರ್ ತೆಗೆದಿರಲಿಲ್ಲ ಎಂದು ವರದಿಯಾಗಿದೆ. ಅಕ್ರಮವಾಗಿ ಹಾವು ಹಾಗೂ ಅವುಗಳ ಮೊಟ್ಟೆಗಳನ್ನು ದಾಸ್ತಾನು ಮಾಡುವವರ, ವಿಷ ತೆಗೆಯುವವರ ವಿರುದ್ಧ ಮತ್ತು ಅನುಮತಿ ಇಲ್ಲದೇ ಅಕ್ರಮವಾಗಿ ವನ ಪ್ರವೇಶಿಸಿ ಸಂಶೋಧನೆ ಮಾಡುವವರ ವಿರುದ್ಧ FIR ದಾಖಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಲು ಮತ್ತು ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟೆಚ್ಚರ ವಹಿಸಲು ಸಚಿವ ಈಶ್ವರ್ ಬಿ. ಖಂಡ್ರೆ ಅವರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮುಖ್ಯ ವನ್ಯ ಜೀವಿ ಪರಿಪಾಲಕರಿಗೆ ಸೂಚಿಸಿದ್ದಾರೆ.