ಇತ್ತೀಚಿನ ಸುದ್ದಿ
ತನಿಖೆಯ ಮುನ್ನವೇ ಫಾಝಿಲ್ ಕುಟುಂಬಕ್ಕೆ ಕ್ಲೀನ್ ಚಿಟ್; ಸ್ಪೀಕರ್ ಖಾದರ್ ತಕ್ಷಣ ರಾಜೀನಾಮೆ ನೀಡಲಿ: ಶಾಸಕ ಡಾ.ಭರತ್ ಶೆಟ್ಟಿ ಆಗ್ರಹ
03/05/2025, 18:24

ಮಂಗಳೂರು(reporterkarnataka.com):ಪೊಲೀಸ್ ತನಿಖೆಗೆ ಮುನ್ನವೇ ಸ್ಪೀಕರ್ ಯು.ಟಿ. ಖಾದರ್ ಇದೀಗ ಪ್ರಧಾನ ಸೂತ್ರದಾರ ಸಹೋದರನೊಂದಿಗೆ ಮಾತನಾಡಿ, ಕುಟುಂಬಕ್ಕೆ ಕ್ಲೀನ್ ಚಿಟ್ ನೀಡಿದ್ದು ತನಿಖೆಯ ಹಾದಿ ತಪ್ಪಿಸುವ ಕೆಲಸ ಮಾಡಿದ್ದು, ತಕ್ಷಣ ರಾಜೀನಾಮೆ ನೀಡಬೇಕು.ಈ ಮೂಲಕ ಸ್ಪೀಕರ್ ಕುರ್ಚಿಯ ಗೌರವ ಉಳಿಸುವ ಕೆಲಸ ಮಾಡಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಆಗ್ರಹಿಸಿದ್ದಾರೆ.
ಇತ್ತ ತನಿಖೆಯ ವರದಿಯಲ್ಲಿ ಫಾಜಲ್ ಸಹೋದರನ ಭಾಗಿಯಾಗಿದ್ದಾನೆ ಎಂದು ಗೃಹ ಮಂತ್ರಿಗಳು ಪೊಲೀಸ್ ಆಯುಕ್ತರು ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.
ಫಾಜಲ್ ಮನೆಯವರು ಅಥವಾ ಕುಟುಂಬಸ್ಥರು ಯಾರೂ ಕೂಡ ಈ ಘಟನೆಯಲ್ಲಿ ಯಾವುದೇ ರೀತಿಯಲ್ಲಿ ಭಾಗಿಯಾಗಿಲ್ಲ ಅಂತ ಮಾಧ್ಯಮಕ್ಕೆ ಸ್ಪೀಕರ್ ಯು.ಟಿ ಖಾದರ್ ಹೇಳಿಕೆ ನೀಡಿದ್ದು ಹೇಗೆ?
ಫಾಜಿಲ್ ಅವರ ಸಹೋದರ ಜತೆ ಮಾತಾಡಿದ್ದೇನೆ ಅಂತ ಸ್ವತಃ ಖಾದರ್ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ. ಪೊಲೀಸರ ವಶದಲ್ಲಿರುವಾಗ ಮಾತನಾಡಿದ್ದು ಹೇಗೆ, ಪೊಲೀಸರು ಆರೋಪಿಗಳ ಜತೆ ಮಾತನಾಡಲು ಅವಕಾಶ ಕಲ್ಪಿಸಿದ್ದು ಹೇಗೆ,
ಆರೋಪಿಗಳನ್ನು ರಕ್ಷಿಸಲು ಸ್ಪೀಕರ್ ಅವರು ಮದ್ಯ ಪ್ರವೇಶಿಸಿ ತನಿಖೆಯ ದಿಕ್ಕು ತಪ್ಪಿಸುವ ಕುತಂತ್ರ ಮಾಡುತ್ತಿದ್ದಾರೆಯೆ? ಈ ಕೇಸಿನಲ್ಲಿ ಸ್ಪೀಕರ್ ಅವರ ಪಾತ್ರ ಕುರಿತು ಸಂಶಯ ವ್ಯಕ್ತವಾಗುತ್ತಿದೆ. ಈ ಬಗ್ಗೆ ನಿಷ್ಪಕ್ಷ ಪಾತ ತನಿಖೆಗೆ ಸ್ಪೀಕರ್ ಅವರು ರಾಜೀನಾಮೆ ನೀಡುವುದು ಅಗತ್ಯ ಎಂದು ಹೇಳಿದ್ದಾರೆ.
ಎರಡನೇದಾಗಿ ಇಡೀ ಘಟನೆಯನ್ನು ಮೊಬೈಲ್ ನಲ್ಲಿ ಸೆರೆಹಿಡಿದ ಮಹಿಳೆಯರು ಯಾರು..? ಅದರಲ್ಲಿ ಅವರು ಮಾತಾಡೋದು ಸ್ಪಷ್ಟವಾಗಿ ಕೇಳ್ತಾ ಉಂಟು. ಅಲ್ಲಿ ಇಬ್ಬರಿದ್ದಾರೆ. ಅಲ್ಲದೆ ಘಟನಾ ಸ್ಥಳದಲ್ಲಿ ಇಬ್ಬರು ಮಹಿಳೆಯರಿದ್ದಾರೆ. ಕನಿಷ್ಠ ನಾಲ್ಕು ಮಂದಿ ಮಹಿಳೆಯರನ್ನು ಈ ಕೇಸಿನಲ್ಲಿ ತನಿಖೆಗೆ ಒಳಪಡಿಸಬೇಕು. ಪೊಲೀಸರು ಸಾಕ್ಷ್ಯ ನಾಶವಾಗದಂತೆ ಎಚ್ಚರಿಕೆ ವಹಿಸಿ ತುರ್ತು ತನಿಖೆ ಕೈಗೊಳ್ಳಬೇಕು ಎಂದು ಡಾ.ಭರತ್ ಶೆಟ್ಟಿ ಒತ್ತಾಯಿಸಿದ್ದಾರೆ.