ಇತ್ತೀಚಿನ ಸುದ್ದಿ
ಪೊಲೀಸರ ಕಟ್ಟುನಿಟ್ಟಿನ ಕ್ರಮಕ್ಕೆ ಸವಾಲು: ಚಾರ್ಮಾಡಿ ಅಡ್ಡದಾರಿಯಲ್ಲಿ ಅಳವಡಿಸಿದ್ದ 12 ಅಡಿ ಗೇಟ್ ಕಿತ್ತ ತೆಗೆದ ದುಷ್ಕರ್ಮಿಗಳು
16/11/2025, 16:00
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕೊಟ್ಟಿಗೆಹಾರ–ಚಾರ್ಮಾಡಿ ಘಾಟ್ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ದೇವನಗುಲ್ ಗ್ರಾಮದ ಅಡ್ಡದಾರಿ ಇತ್ತೀಚೆಗೆ ಅಕ್ರಮ ಚಟುವಟಿಕೆಗಳ ತಾಣವಾಗುತ್ತಿದ್ದ ಹಿನ್ನೆಲೆಯಲ್ಲಿ, ಪೊಲೀಸರ ಮಾರ್ಗದರ್ಶಕ ಕಾರ್ಯಾಚರಣೆಯಡಿ ಅಳವಡಿಸಿದ್ದ 12 ಅಡಿ ಉದ್ದದ ಬಲಿಷ್ಠ ಗೇಟನ್ನು ದುಷ್ಕರ್ಮಿಗಳು ಕಿತ್ತು ತೆಗೆದಿದ್ದಾರೆ.
ರಾತ್ರಿ ವೇಳೆ ಸಂಚಾರ ಸಂಪೂರ್ಣ ನಿಲ್ಲಿಸುವ ಮೂಲಕ ಈ ಗೇಟು ಭದ್ರತೆ ಬಲಪಡಿಸಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ ಅವರ ಮಾರ್ಗದರ್ಶನದಲ್ಲಿ, ಬಣಕಲ್ ಠಾಣಾ ಪಿಎಸ್ಐ ರೇಣುಕಾ ನೇತೃತ್ವದ ಪೊಲೀಸರು ರಸ್ತೆ ಎರಡೂ ಬದಿಗಳಲ್ಲಿ ಗುಂಡಿ ತೋಡಿ, ಗೇಟ್ನ ಕೀಲಿಯನ್ನು ಚೆಕ್ಪೋಸ್ಟ್ ಸಿಬ್ಬಂದಿ ವಶದಲ್ಲಿ ಇಟ್ಟು ನಿರ್ವಹಣೆ ಮಾಡುತ್ತಿದ್ದರು. ಆದರೆ ನಿನ್ನೆ ರಾತ್ರಿ ದುಷ್ಕರ್ಮಿಗಳು ಗೇಟ್ನ್ನು ಅಡಿಪಾಯದಿಂದಲೇ ಕಿತ್ತ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಈ ಕೃತ್ಯ ಕಳ್ಳಸಾಗಾಣಿಕೆಗೆ ದಾರಿ ಮಾಡಿಕೊಡಲು ನಡೆದಿರಬಹುದೆಂಬ ಅನುಮಾನ
ಕಾಣುತ್ತಿದೆ.



ಪೊಲೀಸರು–ಗ್ರಾಮಸ್ಥರು ಸೇರಿ ಹಾಕಿದ್ದ ಭದ್ರತಾ ವ್ಯವಸ್ಥೆಗೆ ಈ ಕೃತ್ಯ ಗಂಭೀರ ಸವಾಲಾಗಿದ್ದು, ಸ್ಥಳದಲ್ಲಿ ತನಿಖೆ ತೀವ್ರಗೊಳಿಸಲಾಗಿದೆ. “ಸುರಕ್ಷತೆಗೆ ಕೈಗೊಂಡ ಕ್ರಮಗಳನ್ನು ಹಾಳುಮಾಡುವ ಪ್ರಯತ್ನ ಯಾರಿಂದಾದರೂ ನಡೆದರೆ ಕಠಿಣ ಕ್ರಮ ಅನಿವಾರ್ಯ,” ಎಂದು ಬಣಕಲ್ ಪಿ ಎಸ್.ಐ.ರೇಣುಕಾ ತಿಳಿಸಿದ್ದಾರೆ.
ಅಕ್ರಮ ಚಟುವಟಿಕೆಗಳನ್ನು ಶಾಶ್ವತವಾಗಿ ತಡೆಯಲು ಪೊಲೀಸರು ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.












