ಇತ್ತೀಚಿನ ಸುದ್ದಿ
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಬಜ್ಪೆ ಶಾಖೆಯ 12ನೇ ವಾರ್ಷಿಕೋತ್ಸವ ಹಾಗೂ ಗ್ರಾಹಕರ ಸಭೆ
13/03/2026, 19:09
ಮಂಗಳೂರು (reporterkarnataka.com): ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಬಜ್ಪೆ ಶಾಖೆಯ 12ನೇ ವಾರ್ಷಿಕೋತ್ಸವ ಹಾಗೂ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘದ ಗ್ರಾಹಕರಾದ ಶ್ರೀ ಪ್ರದೀಪ್ ಕುಮಾರ್ ಸುವರ್ಣ, ಶ್ರೀ ಮಾಧವ ಅಮೀನ್, ಶ್ರೀ ವಿಶ್ವನಾಥ್ ರೆಂಜಾಳ, ಶ್ರೀ ಕೇಶವ ಎಚ್., ಶ್ರೀ ಬಾಲಕೃಷ್ಣ ಸುವರ್ಣ ಹಾಗೂ ಶ್ರೀ ದಯಾನಂದ ಎಸ್. ಅಮೀನ್ ರವರು ದೀಪ ಪ್ರಜ್ವಲನೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಂಘದ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಯಾದ ಶ್ರೀಮತಿ ಸೌಮ್ಯವಿಜಯ್ ರವರು ಸಂಘದ ಬೆಳವಣಿಗೆ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಘದ ಸದಸ್ಯರಾದ ಶ್ರೀ ಮಾಧವ ಅಮೀನ್ ಅವರು “ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ನೀಡುತ್ತಿರುವ ಬ್ಯಾಂಕಿಂಗ್ ಸೇವೆಗಳು, ರಾಷ್ಟ್ರಿಕೃತ ಬ್ಯಾಂಕುಗಳು ನೀಡುವ ಬ್ಯಾಂಕಿಂಗ್ ಸೇವೆಗಳಿಗೆ ಸರಿಸಮನಾಗಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿ, ಇನ್ನೂ ಹೆಚ್ಚಿನ ಸೇವೆ ನೀಡುವಂತಾಗಲಿ ಎಂದು ಶುಭ ಹಾರೈಸಿದರು.
ಸಂಘದ ಸದಸ್ಯರಾದ ಶ್ರೀ ಪ್ರದೀಪ್ ಕುಮಾರ್ ಸುವರ್ಣ ರವರು “ಆತ್ಮಶಕ್ತಿಯು ಅತೀ ಅಲ್ಪವದಿಯಲ್ಲಿ ಸಾಧಿಸಿರುವ ಪ್ರಗತಿಯು ಶ್ಲಾಘನೀಯ. ಈ ನಿಟ್ಟಿನಲ್ಲಿ ಸಿಬ್ಬಂದಿವರ್ಗದವರ ಸೇವೆಯು ಅಮೂಲ್ಯವಾಗಿದ್ದು, ಇದು ಈ ಶಾಖೆಯಲ್ಲಿ ಸಾಕಾರಗೊಂಡಿದೆ” ಎಂದರು,
ಸಂಘದ ಸದಸ್ಯರಾದ ಶ್ರೀ ವಿಶ್ವನಾಥ್ ರೆಂಜಾಳ ಅವರು “ಆತ್ಮಶಕ್ತಿಗೆ ಮತ್ತಷ್ಟು ಶಕ್ತಿಯನ್ನು ತುಂಬುವ ಕೆಲಸವನ್ನು ಸಂಘದ ಸದಸ್ಯರಾದ ನಾವೆಲ್ಲರೂ ಮಾಡೋಣ. ಮತ್ತಷ್ಟು ಎತ್ತರಕ್ಕೆ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ತಲುಪಲಿ” ಎಂದು ಶುಭ ಹಾರೈಸಿದರು,
ಶ್ರೀ ಕೇಶವ ಎಚ್. ಅವರು ಮಾತನಾಡಿ “ಒಬ್ಬ ವ್ಯಕ್ತಿಯ ಸಮಯವನ್ನು ಹಾಳು ಮಾಡದೆ ಸ್ಪಂದಿಸುವುದು ಜಗತ್ತಿನಲ್ಲಿ ಅತ್ಯಮೂಲ್ಯ ಈ ಕೆಲಸ. ಆತ್ಮಶಕ್ತಿ ಸೊಸೈಟಿಯು ಈ ವಿಷಯದಲ್ಲಿ ಗ್ರಾಹಕರ ಸಮಯಕ್ಕೆ ಹೆಚ್ಚು ಒತ್ತನ್ನು ನೀಡಿ, ಗ್ರಾಹಕ ಸ್ನೇಹಿ ಸೇವೆಯನ್ನು ನೀಡುತ್ತಿದೆ ಎಂದು ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ಅವರು ಮಾತನಾಡಿ “ಸಂಘದ ಬಜ್ಪೆ ಶಾಖೆಯಲ್ಲಿ ಸಂಘದ ಗ್ರಾಹಕರ ಸಹಕಾರದಿಂದ ಉತ್ತಮ ರೀತಿಯಲ್ಲಿ ನಿರಖು ಠೇವಣಿ ಸಂಗ್ರಹಣೆ ಹಾಗೂ ಸಾಲವನ್ನು ವಿತರಿಸಿದೆ. ಬಜ್ಪೆ ವಠಾರದಲ್ಲಿ ಬೇರೆ ಬೇರೆ ರಾಷ್ಟ್ರೀಯ ಹಾಗೂ ಸಹಕಾರಿ ಬ್ಯಾಂಕುಗಳು ಇದ್ದರೂ ನಮ್ಮ ಸಂಸ್ಥೆಯು ಗ್ರಾಹಕರಿಗೆ ಸೇವೆ ಒದಗಿಸುವುದರಲ್ಲಿ ಮುಂಚೂಣಿಯಲ್ಲಿ ಇರಲು ಸಂಘದ ಗ್ರಾಹಕರ ಸಹಕಾರವೇ ಕಾರಣ. ಶಾಖೆಯ ವಾರ್ಷಿಕೋತ್ಸವದ ಪ್ರಯಕ್ತ 100 ದಿನಗಳ ಠೇವಣಿಗಳಿಗೆ ವಿಶೇಷ ಬಡ್ಡಿ ದರ ಶೇ. 8.50, 500 ದಿನಗಳ ಠೇವಣಿಗಳಿಗೆ ವಿಶೇಷ ಬಡ್ಡಿ ದರ ಶೇ. 10.00 ಹಾಗೂ 1000 ದಿನಗಳ ಠೇವಣಿಗಳಿಗೆ ವಿಶೇಷ ಬಡ್ಡಿ ದರ ಶೇ. 10.50 ವನ್ನು ನೀಡಲಾಗುತ್ತಿದ್ದು, ಚಿನ್ನಾಭರಣ ಸಾಲಗಳಿಗೆ ಪ್ರತಿ ಗ್ರಾಂ ಗೆ ಗರಿಷ್ಟ ಮೌಲ್ಯ ರೂ. 12,000/- ರವರೆಗೆ ಯಾವುದೇ ಸೇವಾ ಶುಲ್ಕವಿಲ್ಲದೆ ಸಾಲವನ್ನು ಸದಸ್ಯರಿಗೆ ನೀಡಲಾಗುವುದು. ನಮ್ಮ ಎಲ್ಲಾ ಶಾಖೆಗಳಲ್ಲಿ ಇ-ಮುದ್ರಾಂಕ, ನೆಫ್ಟ್, ಆರ್ಟಿಜಿಎಸ್ ಸೇವೆಯು ವ್ಯವಹಾರದ ಸಮಯದಲ್ಲಿ ಲಭ್ಯವಿದ್ದು, ಅದೇ ರೀತಿ ವಿಮಾ ಪಾಲಿಸಿಗಳಾದ ಎಲ್ಐಸಿ, ಕೇರ್, ಇಫ್ಕೋಟೋಕಿಯ, ಜನರಲ್ ಇನ್ಸುರೆನ್ಸ್ ಕಂಪೆನಿ ಮುಂತಾದ ಕಂಪೆನಿಗಳ ವಿಮಾ ಸೌಲಭ್ಯಗಳು ಲಭ್ಯವಿರುತ್ತದೆ. ಸಹಕಾರಿ ಸಂಘದ ಸದಸ್ಯರಿಗೆ ಯಶಸ್ವಿನಿ ಆರೋಗ್ಯ ವಿಮೆಯ ನೋಂದಣಿಯ ಪ್ರಯೋಜನ ಸಂಘದ ಎಲ್ಲಾ ಶಾಖೆಗಳಲ್ಲಿ ಲಭ್ಯವಿದ್ದು, ಇದರ ಪ್ರಯೋಜನ ಪಡೆಯಬೇಕೆಂದು ವಿನಂತಿಸಿದರು.
ಸದಸ್ಯರಾದ ಶ್ರೀಮತಿ ಲಿಲ್ಲಿ ಪೈಸ್, ಶ್ರೀ ಚಿತ್ತರಂಜನ್ ಸಾಲ್ಯಾನ್, ಶ್ರೀ ಸುರೇಶ್ ಹಾಗೂ ಶ್ರೀ ನಾಗರಾಜ್ ರಾವ್ ರವರು ಸಂಘದ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಖೆಯ ಸಿಬ್ಬಂದಿಯಾದ ಕುಮಾರಿ ಸ್ವಾತಿ ಅವರು ಸ್ವಾಗತಿಸಿ, ಶ್ರೀಮತಿ ಅಕ್ಷತಾ ಎನ್ ಕೋಟ್ಯಾನ್ ವಂದಿಸಿದರು. ಶಾಖಾಧಿಕಾರಿಯಾದ ಶ್ರೀಮತಿ ರವಿಕಲಾ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.












