5:35 PM Wednesday1 - July 2026
ಬ್ರೇಕಿಂಗ್ ನ್ಯೂಸ್
ಕಾಸು ಬೇಕಾದ್ರೆ ನನ್ನ ಹತ್ರ ಕೇಳೋ: ಲಂಚಕೋರ ಅಧಿಕಾರಿಗೆ ಕುಣಿಗಲ್ ಶಾಸಕ ಡಾ.… Bangalore | ವೇಶ್ಯಾವಾಟಿಕೆ:12 ಮಂದಿ ಬಾಂಗ್ಲಾದೇಶಿ ಪ್ರಜೆಗಳು ಸಿಸಿಬಿ ಪೊಲೀಸರ ವಶಕ್ಕೆ ಶಾಸಕ ಪ್ರದೀಪ್ ಈಶ್ವರ್ ಮೇಲೆ ಹಲ್ಲೆ ಯತ್ನ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ… ಬೆಂಗಳೂರು | ನಕಲಿ ಪೊಲೀಸ್ ಅಸಲಿ ಆಟ: ಯೂನಿಫಾರ್ಮ್ ಧರಿಸಿ ಬೈಕ್ ಸವಾರರಿಂದ… Belagavi | ವಿವಾಹಿತೆಯೊಂದಿಗೆ ಪರಾರಿ: ಯುವಕನ ಮನೆ ಧ್ವಂಸ; ಕುರಿಗಳನ್ನೂ ಹೊತ್ತೊಯ್ದು ಭರ್ಜರಿ… ಮತಾಂತರ ಆರೋಪ: ಕುಶಾಲನಗರದಲ್ಲಿ ಸ್ವಯಂಪ್ರೇರಿತ ಬಂದ್; ಎಲ್ಲವೂ ಸ್ತಬ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕುಟುಂಬಸ್ಥರಿಂದ ಭೂಕಬಳಿಕೆ ಆರೋಪ: ಮುಖ್ಯಮಂತ್ರಿ ಡಿಕೆಶಿ ಮುಂದೆ ಹಾಸನ… ಗೆಳೆಯ ವೈಶಾಖ್‌ ಆತ್ಮಹತ್ಯೆ ಪ್ರಕರಣ: ಫಸ್ಟ್‌ ರಿಯಾಕ್ಷನ್ ಕೊಟ್ಟ ನಟಿ ಕೃಷಿ ತಾಪಂಡ ರೆಸಾರ್ಟ್ ನ ಈಜುಕೊಳದಲ್ಲಿ ದುರಂತ | 10 ಅಡಿ ಎತ್ತರದಿಂದ 4 ಅಡಿ… 2 ದಿನಗಳ ರಾಜ್ಯ ಪ್ರವಾಸ ಮುಗಿಸಿದ ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರಿಗೆ…

ಇತ್ತೀಚಿನ ಸುದ್ದಿ

ಅಲ್ಲಿ ಮೌನವೇ ಮಾತಾಗಿತ್ತು. ಇಬ್ಬರೂ ಪರಸ್ಪರ ಗಟ್ಟಿಯಾಗಿ ಕೈಹಿಡಿದುಕೊಂಡಿದ್ದರು!; ಶುಭಾಳ ಕಂಗಳಲ್ಲಿ ಹನಿ ತೊಟ್ಟಿಕ್ಕುತ್ತಿತ್ತು

25/08/2024, 13:24

ರಾಜೇಶ್ವರಿ ಕುಮಾರ್ ರಾವ್ ಬೆಂಗಳೂರು

info.reporterkarnataka@gmail.com

ಸಾಮಾನ್ಯವಾಗಿ ನೆರೆಮನೆಯವರು ಸ್ನೇಹಿತರಾಗಿರುವುದು ತುಂಬಾ ಅಪರೂಪ. ಯಾವುದೋ ಚಿಕ್ಕ ವಿಷಯದ ಸಲುವಾಗಿ ಜಗಳವಾಗಿ ಮಾತು ಬಿಡುವುದು, ಅಪಪ್ರಚಾರ ಮಾಡುವುದುಸಹಜ. ಹೆಚ್ಚಿನ ಸಂದರ್ಭಗಳಲ್ಲಿ ಮಕ್ಕಳ ವಿಶಯದಲ್ಲಿ ಜಗಳವಾಗುವುದೇ ಹೆಚ್ಚು.
ಶುಭಾಳ ನೆರೆಯವರಿಗೆ ಮೂವರು ಮಕ್ಕಳು.ಬರೀ ತುಂಟತನ.ಒಮ್ಮೆ ಕ್ರಿಕೆಟ್ ಆಡುವಾಗ ಶುಭಾಳ ಮನೆಯ ಕಿಟಕಿಗೆ ಚೆಂಡು ಬಿದ್ದು ಗಾಜು ಒಡೆದುಹೋಯಿತು. ಶುಭಾ ಪಕ್ಕದ ಮನೆಯ ಜಯಂತಿಯನ್ನು ಕರೆದು ಅವಳ ಮಕ್ಕಳು ಮಾಡಿದ ಕರಾಮತ್ತಿನ ಬಗ್ಗೆ ದೂರು ನೀಡಿದಳು.
“ರೀ ಸುಮ್ಮನಿರ್ರಿ.ಮಕ್ಕಳು ಆಡುವಾಗ ಬಾಲ್ ಬಿದ್ದರೆ ಅದನ್ನೇ ಒಂದು ದೊಡ್ಡ ವಿಷಯಾಂತ ದೂರು ನೀಡ್ತೀರಲ್ವಾ.ಬೇಕೂಂತ ಕಿಟಕಿ ಒಡೆದ್ರಾ? ಅಷ್ಟಕ್ಕೂ ಎಷ್ಟೊಂದು ಹುಡುಗರು ಒಟ್ಟಿಗೇ ಆಡುತ್ತಿದ್ದರು, ನಮ್ಮ ಹುಡುಗರೇ ಹೊಡೆದದ್ದನ್ನು ನೀವು ನೋಡಿದ್ರಾ?
ಯಾರೋ ಹೊಡೆದ ಬಾಲ್ ಕಿಟಕಿಗೆ ತಗಲಿರಬೇಕು” ಜಯಂತಿ ಊರಿಗೆಲ್ಲಾ ಕೇಳಿಸುವಂತೆ ಕೂಗಾಡಿದಳು. ಆಗತಾನೇ ಆಫೀಸಿನಿಂದ ಮನೆಗೆ ಬಂದ ಶಿವೂ ಗಲಾಟೆ ಕೇಳಿಸಿಕೊಂಡು ಮನೆಯಿಂದ ಹೊರಗೆ ಬಂದವನು
ವಿಷಯತಿಳಿದು ಶುಭಾಳನ್ನು ಗದರಿಸಿ ಒಳಗೆ ಕರೆದೊಯ್ದ. “ಅಲ್ವೇ.ನೀನೂ ಚಿಕ್ಕ ಮಕ್ಕಳ ತರಹ ಬೀದಿಜಗಳ ಆಡ್ತೀಯಲ್ವಾ.ಹುಡುಗರು ಕ್ರಿಕೆಟ್ ಆಡುವಾಗ ಇದೆಲ್ಲಾ ಸಾಮಾನ್ಯ. ನಾವೂ ಸಣ್ಣವರಿದ್ದಾಗ ಎಷ್ಟು ಮನೆಯ ಕಿಟಕಿ ಗಾಜು ಒಡೆದು ಹಾಕಿದ್ದೇವೋ ಏನೋ.”ಎಂದು ನಗುತ್ತಾ ನುಡಿದ.
ಶುಭಾಗೆ ಗಂಡನ ಮೇಲೂ ಎಲ್ಲಿಲ್ಲದ ಕೋಪ ಬಂತು.
“ಒಡೆದ ಗಾಜು ಹಾಕಿಸೋಕೆ ಕಮ್ಮಿ ಅಂದರೂ ಐನೂರೋ ಸಾವಿರವೋ ಆಗಬಹುದು.ನಾನು ಅವರಿಂದಲೇ ವಸೂಲು ಮಾಡ್ತಿದ್ದೆ.ದುಡ್ಡು ಸುಮ್ನೆ ಬರುತ್ತಾ? ನಮ್ಮಮಗನೇ ಆಕೆಲಸ ಮಾಡಿದ್ದರೆ ಜಯಂತಿ ಸುಮ್ಮನಿರುತ್ತಿದ್ದಳೇ? ನೀವೇ ಮುಂದೆ ನಿಂತು ಗಾಜು ಹಾಕಿಸಿ ಕೊಡ್ತಿರಲಿಲ್ವೇ?” ಗಂಡನನ್ನು ತರಾಟೆಗೆ ತೆಗೆದುಕೊಂಡ ಶುಭಾಳ ಕೋಪ ಎಷ್ಟು ಹೊತ್ತಾದರೂ ಕಡಿಮೆಯಾಗಲಿಲ್ಲ.ಹೇಗಾದರೂ ಜಯಂತಿಯ ಮೇಲೆ ಸೇಡು ತರಿಸಬೇಕೆಂದು ಅವಕಾಶಕ್ಕಾಗಿ ಕಾಯುತ್ತಿದ್ದಳು.
ಮರುದಿನ ಎಂದಿನಂತೆಯೇ ಜಯಂತಿಯ ಮಗ ವರುಣ್ ಶುಭಾಳ ಮಗ ವಿನೋದನನ್ನು ಆಟವಾಡಲುಕರೆಯಲು ಬಂದ.ಶುಭಾ ಹೊರಗೋಡಲು ಸಿದ್ಧನಾಗಿದ್ದ ವಿನೂವನ್ನು ತಡೆದು ಒಳಗೆಳೆದು ಬಾಗಿಲು ಹಾಕಿಕೊಂಡಳು.ವರುಣನಿಗೆ ಕೇಳಿಸುವಂತೆಯೇ “ಆ ಭಾಷೆಕೆಟ್ಟ ಮಕ್ಕಳ ಜೋಡಿ ಆಡೋದಕ್ಕೆ ಹೋಗ್ಬೇಡ.ನೀನೂ ಅವರ ಹಾಗೆ ಮನೆಹಾಳ ಕೆಲಸಮಾಡೋದು ಬೇಡ. ಬಾಯ್ ಮುಚ್ಚಿಕೊಂಡು ಮನೆಯಲ್ಲೇ ಕುಳಿತು ಪಾಠ ಓದು, ಇಲ್ಲವಾದರೆ ಟೀವಿಯಲ್ಲಿ ಕಾರ್ಟೂನ್ ನೋಡು” ಎಂದು ಊರಿಗೆಲ್ಲಾ ಕೇಳಿಸುವ ಹಾಗೆ ಬೊಬ್ಬೆ ಹೊಡೆದಳು. ಇದನ್ನು ಕೇಳಿಸಿಕೊಂಡ ಜಯಂತಿ ತಾನೇನೂ ಕಮ್ಮಿ ಇಲ್ಲದಂತೆ ಮಾತಿಗೆ
ಮಾತು ಬೆಳೆಸಿದಳು. ಬೀದಿಯವರಿಗೆಲ್ಲಾ ಪುಕ್ಕಟೆ ಮನೋರಂಜನೆ ಸಿಕ್ಕಿದ ಹಾಗಾಯ್ತು. ಪಾಪ! ಏನೂ ಅರಿಯದ ವಿನೋದ್ ಮತ್ತು ವರುಣ್ ಪೆಚ್ಚಾಗಿ ನೋಡುತ್ತಿದ್ದರು.ಅಂದಿನಿಂದ ಮಕ್ಕಳ ತಾಯಂದಿರು
ಒಬ್ಬರನ್ನೊಬ್ಬರು ನೋಡಿದಾಗ ಹಾವುಮುಂಗುಸಿಯಂತೆ ಬುಸುಗುಟ್ಟುತ್ತಿದ್ದರು.
ಶುಭಾ ಸಾಯಂಕಾಲ ಆಟವಾಡಿಸಲು ಬಲವಂತವಾಗಿ ವಿನೋದನನ್ನು ಪಾರ್ಕಿಗೆ ಎಳೆದುಕೊಂಡು ಹೋಗುತ್ತಿದ್ದಳು. ಹೊಸ ಹುಡುಗರ ಜತೆ ಸ್ನೇಹ ಬೆಳೆಸಲಾರದ ಮಗು ಸಪ್ಪಗೆ ಒಂದೆಡೆ ನಿಂತು ನೋಡುತ್ತಿತ್ತು.
ಶಿವೂಗೆ ಒಂದುವಾರದ ಮಟ್ಟಿಗೆ ಆಫೀಸ್ ಕೆಲಸದ
ಸಲುವಾಗಿ ದೆಹಲಿಗೆ ಹೋಗಬೇಕಾಗಿ ಬಂತು.ಆತ ಅತ್ತ ಹೋಗುವುದಕ್ಕೂ ಇಲ್ಲಿ ಶುಭಾಳಿಗೆ ಜ್ವರ ಬರುವುದಕ್ಕೂ ಸರಿಹೋಯ್ತು.ಮನೆಯಲ್ಲಿ ಬೇರೆ ಯಾರೂ ಇಲ್ಲ.ಅವಳಿಗೋ ಸುಸ್ತು ಸಂಕಟ,ಎದ್ದೇಳಲೇ ಶಕ್ತಿಯಿಲ್ಲ.ಶಿವೂಗೆ ಪೋನ್ ಮಾಡಿದ್ರೆ ಸ್ವಿಚ್ ಆಫ್ ಬರುತ್ತಿದೆ.ವಿನೂ ಭಯದಿಂದ ಅಳಲಾರಂಬಿಸಿದ.ಬೆಳಿಗ್ಗೆ ಬಂದ ಕೆಲಸದಾಕೆಅರೆಪ್ರಜ್ಞಾವಸ್ಥೆಯಲ್ಲಿದ್ದ ಶುಭಾಳನ್ನು ಕಂಡು ಪಕ್ಕದ ಮನೆಯ ಜಯಂತಿಯನ್ನು ಕರೆತಂದಳು. ಅವಳು ತಕ್ಷಣ ತನ್ನ ಪತಿಯ ಕಾರಿನಲ್ಲಿ ಶುಭಾಳನ್ನು ಆಸ್ಪತ್ರೆಗೆ ಕರೆದೊಯ್ದಳು.
ಡೆಂಗ್ಯೂ ಜ್ವರ ಎಂದ ಡಾಕ್ಟರ್ ಅಡ್ಮಿಟ್ ಮಾಡಲು ಹೇಳಿದಾಗ ಅವರೇ ಹಣಪಾವತಿ ಮಾಡಿ ವಿನೋದನನ್ನು ತಮ್ಮ ಮನೆಗೆ ಕರೆದೊಯ್ದಳು.ಒಂದೆರಡು ಗಂಟೆಗಳಲ್ಲಿ ಕಣ್ತೆರೆದ ಶುಭಾಳಿಗೆ ತಾನೆಲ್ಲಿದ್ದೇನೆ ಎಂದೇ ಗೊತ್ತಾಗಲಿಲ್ಲ. ನರ್ಸ್ ಎಲ್ಲಾ ವಿಷಯ ಹೇಳಿದ ಮೇಲೆ ನೆಮ್ಮದಿಯ ನಿಟ್ಟುಸಿರು ಬಿಟ್ಟಳು.ಅಷ್ಟರಲ್ಲಿ ಮನೆಯಿಂದ ಊಟ ತಂದ ಜಯಂತಿಯನ್ನು ಕಂಡು ಶುಭಾಳ ಕಂಗಳು ಹನಿಗೂಡಿದವು.ಬಾಯಿ ಆಡದ ಮಾತನ್ನು ಮೌನವೇ ಆಡಿ ತೋರಿಸಿತು.ಅವರಿಬ್ಬರೂ ಹಿಡಿದುಕೊಂಡ ಕೈಗಳು ಸ್ನೇಹಕ್ಕಿಂತ ದೊಡ್ಡ ಆಸ್ತಿಯಿಲ್ಲ,ದ್ವೇಷಕ್ಕಿಂತ ದೊಡ್ಡ ಶತ್ರುವಿಲ್ಲ ಎಂಬುದನ್ನು ಸಾಬೀತು ಪಡಿಸಿದವು.

*ರಾಜೇಶ್ವರಿ ರಾವ್

ಇತ್ತೀಚಿನ ಸುದ್ದಿ

ಜಾಹೀರಾತು