ಇತ್ತೀಚಿನ ಸುದ್ದಿ
ಡಿಕೆಶಿ ಮುಖ್ಯಮಂತ್ರಿ ಆಗಲಿ ಎಂದು 91 ಕೆಜಿ ಎಳ್ಳಿನ ತುಲಾಭಾರ: ಪಾವಗಡದಲ್ಲಿ ಅಭಿಮಾನಿಗಳ ವಿಶೇಷ ಪೂಜೆ
22/11/2025, 19:18
ತುಮಕೂರು(reporterkarnataka.com): ರಾಜ್ಯ ರಾಜಕೀಯದಲ್ಲಿ ಕುರ್ಚಿ ಕದನವಿರುವ ಸಮಯದಲ್ಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಲೆಂದು ಪಾವಗಡದಲ್ಲಿ ಅಭಿಮಾನಿಗಳು ವಿಶಿಷ್ಟ ರೀತಿಯಲ್ಲಿ ಹಾರೈಸಿದ್ದಾರೆ.



ತಾಲೂಕಿನ ಡಿಕೆ ಅಭಿಮಾನಿ ಬಳಗದ ವತಿಯಿಂದ ಪಾವಗಡದ ಪ್ರಸಿದ್ಧ ಶನಿ ಮಹಾತ್ಮ ದೇವಾಲಯದಲ್ಲಿ 91 ಕೆಜಿ ಎಳ್ಳಿನ ತುಲಾಭಾರ ಮಾಡುವ ಮೂಲಕ ದೇವರಿಗೆ ಸಮರ್ಪಣೆ ಮಾಡಲಾಗಿದೆ. ಡಿ.ಕೆ. ಶಿವಕುಮಾರ್ ಅವರಿಗೆ ಇರುವ ಕುಜದೋಷ ಮತ್ತು ಶನಿ ದೋಷಗಳು ದೂರವಾಗಿ, ಮುಖ್ಯಮಂತ್ರಿ ಸ್ಥಾನಕ್ಕೆ ಹಾದಿ ಸುಗಮವಾಗಲೆಂದು ತುಲಾಭಾರ ನಡೆಸಲಾಗಿದೆ.
ಇದೇ ವೇಳೆ ದೇವಾಲಯದ ನವಗ್ರಹಗಳಿಗೆ ವಿಶೇಷ ತೈಲಾಭಿಷೇಕವನ್ನು ಸಹ ನೆರವೇರಿಸಿ,ಶಿವಕುಮಾರ್ ಅವರ ರಾಜಕೀಯ ಜೀವನಕ್ಕೆ ಪ್ರಾರ್ಥಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾಜಿ ತಾಲೂಕು ಪಂಚಾಯತ್ ಸದಸ್ಯ ಹನುಮಂತರಾಯಪ್ಪ, ಡಿಕೆಶಿ ಅಭಿಮಾನಿ ಬಳಗ ಅಧ್ಯಕ್ಷ ಕಳರಾಜನಹಳ್ಳಿ ಗೋವಿಂದರಾಜು, ಅರಸೀಕೆರೆ ನಿವೃತ್ತ ಶಿಕ್ಷಕ ಚಿಕ್ಕಣ್ಣ, ಉಮಾಪತಿ, ಹರೀಶ್ ಸೇರಿದಂತೆ ಅನೇಕ ಅಭಿಮಾನಿಗಳು ಭಾಗವಹಿಸಿದ್ದರು.












