ಇತ್ತೀಚಿನ ಸುದ್ದಿ
Mandya | ಶಿವನಸಮುದ್ರ: 4 ದಿನಗಳಿಂದ ನಾಲೆಯಲ್ಲಿ ಸಿಲುಕಿದ್ದ ಮರಿಯಾನೆಯ ರಕ್ಷಣೆ
18/11/2025, 20:12
ಗಿರಿಧರ್ ಕೊಂಪುಳಿರ ಮಂಡ್ಯ
info.reporterkarnataka@gmail.com
ಕಳೆದ ನಾಲ್ಕು ದಿನಗಳಿಂದ ಮಂಡ್ಯದ ಶಿವನಸಮುದ್ರ ವಿದ್ಯುತ್ ತಯಾರಿಕಾ ಘಟಕದ ನಾಲೆಯೊಳಗೆ ಬಿದ್ದಿದ್ದ ಕಾಡಾನೆ ಮರಿಯನ್ನು ಯಶಸ್ವಿಯಾಗಿ ರಕ್ಷಣೆ ಮಾಡಲಾಗಿದೆ. ಅರವಳಿಕೆ ಮದ್ದು ನೀಡಿ ಹೈಡ್ರಾಲಿಕ್ ಕ್ರೇನ್ನ ಮೂಲಕ ಆನೆ ಮರಿಯನ್ನು ಮೇಲೆತ್ತಲಾಗಿದೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಶಿವವಸಮುದ್ರ ಬಳಿಯ ನಾಲೆಗೆ ಮರಿಯಾನೆ ಬಿದ್ದಿತ್ತು. ಖಾಸಗಿ ವಿದ್ಯುತ್ ಉತ್ಪಾದನಾ ಘಟಕದ ಬಳಿ ಇದು ಸಿಲುಕಿಕೊಂಡಿತ್ತು. ನಾಲೆಯಲ್ಲಿ ನೀರು ಕುಡಿಯಲು ಬಂದು ಸಿಲುಕಿಕೊಂಡಿತ್ತು. ಸೋಮವಾರ ನಾಲೆಯಿಂದ ಆನೆಯನ್ನ ಮೇಲೆತ್ತಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಟ್ಟಿದ್ದರೂ, ನಾಲೆಯಲ್ಲಿ ನೀರು ಹೆಚ್ಚಾಗಿದ್ದ ಕಾರಣ ಕಾರ್ಯಾಚರಣೆಗೆ ತೊಡಕಾಗಿತ್ತು.


ಆನೆಯನ್ನು ಮೇಲೆತ್ತುವ ಸಲುವಾಗಿ ಬೆಂಗಳೂರಿನಿಂದ ಹೈಡ್ರಾಲಿಕ್ ಕ್ರೇನ್ ತರಿಸಿಕೊಳ್ಳಲಾಗಿತ್ತು. ಎರಡು ದಿನಗಳ ಕಾಲ ನೀರಿನಲ್ಲಿಯೇ ಇದ್ದ ಕಾರಣ ಆನೆಯ ಸೊಂಡಿಲಿನ ಬಳಿ ಫಂಗಸ್ ಆಗಿರುವ ಸಾಧ್ಯತೆ ಇದೆ. ಕಳೆದ ನಾಲ್ಕು ದಿನದಿಂದ ನೀರಿನಲ್ಲೆ ಇದ್ದ ಹಿನ್ನೆಲೆ ಫಂಗಸ್ ಆಗಿರುವ ಸಾಧ್ಯತೆ ಇದೆ. ಸೊಂಡಿಲಿನ ತುದಿಯ ಭಾಗ ಬಿಳಿ ಬಣ್ಣಕ್ಕೆ ತಿರುಗುಕೊಂಡಿದ್ದು, ಇನ್ಫೆಕ್ಷನ್ ಆಗಿರುವ ಸಾಧ್ಯತೆ ಕೂಡ ಇದೆ.
ಅರವಳಿಕೆ ಮದ್ದು ನೀಡಿ ಆನೆಯನ್ನು ಮೇಲೆತ್ತಲಾಗಿದೆ.
ಇಂದು ಡಿಸಿಎಫ್ ರಘು ಹಾಗೂ ವನ್ಯಜೀವಿ ವಲಯ ಮೈಸೂರು ವಿಭಾಗ ಡಿಸಿಎಫ್ ಪ್ರಭು ನೇತೃತ್ವದಲ್ಲಿ ಮೇಲೆತ್ತುವ ಕಾರ್ಯಾಚರಣೆ ನಡೆದಿತ್ತು. ಅರವಳಿಕೆ ಮದ್ದು ನೀಡುವ ಮುನ್ನ ಪಶು ವೈದ್ಯರು ಆನೆಗೆ ಆಹಾರ ನೀಡಿದ್ದರು. ಡಾ.ರಮೇಶ್ ಹಾಗೂ ಡಾ. ಆದರ್ಶ್ ರಿಂದ ಆನೆಗೆ ಅರವಳಿಕೆ ಮದ್ದು ನೀಡಲಾಗಿತ್ತು. ಗನ್ನಲ್ಲಿ ಶೂಟ್ ಮಾಡುವ ಮೂಲಕ ಅರವಳಿಕೆ ನೀಡಲಾಯಿತು.
ಅದಾದ ಬಳಿಕ ಕೆನಾಲ್ಗೆ ಕಂಟೇನರ್ ಅನ್ನು ಸಿಬ್ಬಂದಿ ಇಳಿಸಿದ್ದರು. ಬಳಿಕ ಆನೆಯನ್ನು ಕಂಟೇನರ್ನಲ್ಲಿ ಮಲಗಿಸಿ ಮೇಲೆತ್ತಲಾಗಿದೆ. ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಸ್ಥಳೀಯ ಕಾಡಿನಲ್ಲಿಯೇ ಆನೆಯನ್ನು ಬಿಡಲು ಚಿಂತನೆ ಮಾಡಲಾಗಿದೆ. ಡಿಸಿಎಫ್ ರಘು, ವನ್ಯಜೀವಿ ವಲಯ ಮೈಸೂರು ವಿಭಾಗದ ಡಿಸಿಎಫ್ ಪ್ರಭು, ಸ್ಥಳೀಯ ತಹಶಿಲ್ದಾರ್ ಲೋಕೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.












