ಇತ್ತೀಚಿನ ಸುದ್ದಿ
ನಂಜನಗೂಡು: ಶ್ರೀ ಮುರಗಿ ಸ್ವಾಮಿ ಮಠದ ನೂತನ ಗದ್ದುಗೆ, ರಾಜದ್ವಾರ ಲೋಕಾರ್ಪಣೆ
10/02/2025, 21:39
![](https://reporterkarnataka.com/wp-content/uploads/2025/02/c1_20250210_21403698-1-1024x576.jpeg)
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಶಿರಮಳ್ಳಿ ಗ್ರಾಮದ ಹೊರವಲಯದಲ್ಲಿರುವ ಶ್ರೀ ಮುರುಗಿಸ್ವಾಮಿ ವಿರಕ್ತ ಮಠದಲ್ಲಿ ಶ್ರೀ ಬಸವರಾಜ ಸ್ವಾಮಿಗಳ ನೂತನ ಗದ್ದುಗೆ ಉದ್ಘಾಟನೆ ಹಾಗೂ ರಾಜ ದ್ವಾರ ಲೋಕಾರ್ಪಣೆ, ಮಠದ ನೂತನ ಕಟ್ಟಡದ ಕಾಮಗಾರಿಗೆ ಗುದ್ದಲಿ ಪೂಜೆ ಹಾಗೂ ಮಠಾಧ್ಯಕ್ಷರಾದ ಶ್ರೀ ಹಿಮ್ಮಡಿ ಮುರುಗಿಸ್ವಾಮಿಗಳ 11ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ಸಡಗರ ಸಂಭ್ರಮ ಹಾಗೂ ಶ್ರದ್ಧಾ ಭಕ್ತಿಯಿಂದ ನಡೆಯಿತು.
ಮಠದ ಪೀಠಾಧ್ಯಕ್ಷರಾದ ಶ್ರೀ ಇಮ್ಮಡಿ ಮುರುಗಿಸ್ವಾಮಿಗಳ ನೇತೃತ್ವದಲ್ಲಿ ಕಳೆದ ನಾಲ್ಕು ದಿನಗಳಿಂದ ಗೋಧೂಳಿ ಲಗ್ನದಲ್ಲಿ ಗಂಗಾ ಪೂಜೆ, ಕಳಶೋಧಕ ಸ್ಥಾಪನೆ, ಹಾಗೂ ಶುದ್ದಿ ಕಾರ್ಯ, ಉಪಾಸನೆ ಉದ್ದೀಪನ ಮಹಾ ಸಂಕಲ್ಪ, ಹೋಮ, ಹವನ ಸೇರಿದಂತೆ ಹಲವು ಸೇವಾ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಸಾಂಗವಾಗಿ ನೆರವೇರಿದವು.
ಕಡೆಯ ದಿನವಾದ ಇಂದು ನಡೆದ ಧಾರ್ಮಿಕ ಸಭೆಯಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿ ಕೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಹಲವು ಮಠಾಧೀಶರು ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ನಡೆಯಿತು.
ಶಾಸಕ ದರ್ಶನ್ ದ್ರುವ ನಾರಾಯಣ್ ಸೇರಿದಂತೆ ಮಠಾಧೀಶರು ಹಾಗೂ ವೇದಿಕೆ ಮೇಲಿನ ಗಣ್ಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀ ಮುರುಗಿ ಮಠದ ಪೀಠಾಧ್ಯಕ್ಷರಾದ ಶ್ರೀ ಇಮ್ಮಡಿ ಮುರುಗಿಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿ 450 ವರ್ಷಗಳ ಇತಿಹಾಸವಿರುವ ಶ್ರೀಮಠದ ಇತಿಹಾಸ ಹಾಗೂ ನಾಲ್ಕು ದಿನಗಳಿಂದ ನಡೆದ ಧಾರ್ಮಿಕ ಕಾರ್ಯಕ್ರಮದ ಬಗ್ಗೆ ವಿವರಿಸಿದರು.
ಕಾರ್ಯಕ್ರಮದ ಉದ್ಘಾಟನೆ ಹಾಗೂ ಮಠದ ನೂತನ ಕಟ್ಟಡದ ನೀಲಿ ನಕ್ಷೆಯನ್ನು ಬಿಡುಗಡೆ ಮಾಡಿ ಶಾಸಕ ದರ್ಶನ್ ದ್ರುವ ನಾರಾಯಣ್ ಮಾತನಾಡಿ ಮಠಮಾನ್ಯಗಳು ಶ್ರೀಸಾಮಾನ್ಯರ ಹಿತಾಸಕ್ತಿಗೆ ಶ್ರಮವಹಿಸುತ್ತಿವೆ ಶ್ರೀ ಮಠದ ಇಮ್ಮಡಿ ಮುರುಗಿ ಸ್ವಾಮಿಗಳು ಕಿರಿಯ ವಯಸ್ಸಿನಲ್ಲೇ ಅತಿ ದೊಡ್ಡ ಜವಾಬ್ದಾರಿಯನ್ನು ತೆಗೆದುಕೊಂಡು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ ನಾನೂ ಕೂಡ ನಿಮ್ಮಲ್ಲಿ ಒಬ್ಬನಾಗಿ ಶ್ರೀಮಠ ಹಾಗೂ ಶ್ರೀಗಳ ಜೊತೆಗೂಡಿ ಶ್ರೀಮಠದ ಅಭಿವೃದ್ಧಿಗೆ ಸಹಕರಿಸುವುದಾಗಿ ತಿಳಿಸಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶ ಕೇಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಸಾವಿರಾರು ವರ್ಷಗಳ ಇತಿಹಾಸವಿರುವ ನಮ್ಮ ಪರಂಪರೆಯಲ್ಲಿ ಮಠ ಮಂದಿರಗಳು, ಆಶ್ರಮಗಳು ಮನುಷ್ಯನ ಅಭಿವೃದ್ಧಿಗೆ ಸಹಕಾರಿಗಳಾಗಿವೆ ಎಂದರು.
ಇದೇ ಸಂದರ್ಭ ಮಠದ ವತಿಯಿಂದ ಸುತ್ತೂರು ಪೂಜ್ಯರಿಗೆ ಪಾದಪೂಜೆ ನೆರವೇರಿಸಿ ಪುಷ್ಪವೃಷ್ಟಿ ಮಾಡಲಾಯಿತು.
ಹಾಗೆಯೇ ವೇದಿಕೆ ಮೇಲಿನ ಗಣ್ಯರು, ದಾನಿಗಳು ಹಾಗೂ ವಿವಿಧ ಮಠಾಧೀಶರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅದಕ್ಕೂ ಮುನ್ನ ಕಾರ್ಯಕ್ರಮಕ್ಕೆ ಬಂದ ಪರಮ ಪೂಜ್ಯ ಸುತ್ತೂರು ಶ್ರೀಗಳನ್ನು ಪೂರ್ಣ ಕುಂಭದೊಂದಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಮಂಗಳವಾದ್ಯ ಹಾಗೂ ಬ್ಯಾಂಡ್ ವಾದನಗಳೊಂದಿಗೆ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಮಠದ ಸಂಸ್ಥಾಪಕರು ಹಾಗೂ ಹಿರಿಯ ಸ್ವಾಮೀಜಿಗಳಾದ ಶ್ರೀ ಮುರುಗಿಸ್ವಾಮಿಗಳು ಹಾಗೂ ಶ್ರೀ ಬಸವರಾಜ ಸ್ವಾಮಿಗಳ ನೂತನ ಗದ್ದುಗೆಯನ್ನು ಉದ್ಘಾಟನೆ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಶ್ರೀಗಳಿಂದ ಮಹಾದಾಸೋಹಕ್ಕೆ ಪೂಜೆ ಸಲ್ಲಿಸಿದ ಬಳಿಕ ದಾಸೋಹಕ್ಕೆ ಚಾಲನೆ ನೀಡಲಾಯಿತು.
ರಾಜ್ಯದ ನಾನಾ ಮೂಲೆಗಳಿಂದ ಶ್ರೀಮಠದ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿ. ಶ್ರೀಗಳ ಆಶೀರ್ವಾದ ಪಡೆದು ತಮ್ಮ ಭಕ್ತಿ ಭಾವ ಮೆರೆದರು.
ದೇವನೂರು ಶ್ರೀ ಗುರು ಮಲ್ಲೇಶ್ವರ ದಾಸೋಹ ಮಠಾಧ್ಯಕ್ಷರಾದ ಶ್ರೀ ಮಹಾಂತ ಸ್ವಾಮಿಗಳು ಕನಕಪುರ ದೇಗುಲ ಮಠದ ಶ್ರೀ ಚನ್ನಬಸವ ಸ್ವಾಮಿಗಳು, ವಾಟಾಳ್ ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು, ಹುಲಹಳ್ಳಿ ವಿರಕ್ತ ಮಠಾಧ್ಯಕ್ಷರಾದ ಶ್ರೀ ಇಮ್ಮಡಿ ಚನ್ನಮಲ್ಲ ದೇಶಿ ಕೇಂದ್ರ ಸ್ವಾಮಿಗಳು ಸೇರಿದಂತೆ ಶಾಸಕ ಗಣೇಶ ಪ್ರಸಾದ್, ಮಾಜಿ ಶಾಸಕ ಹರ್ಷವರ್ಧನ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರುಗಳಾದ ಮಂಗಳ ಸೋಮಶೇಖರ್, ಕೆಂಪಣ್ಣ, ಚಿಕ್ಕ ರಂಗನಾಯಕ, ಶ್ರೀ ಮಠದ ಟ್ರಸ್ಟಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.