9:52 AM Tuesday10 - March 2026
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ಹಸುವನ್ನು ತುಳಿದು ಕೊಂದ ಕಾಡಾನೆ; ಮಾಣಿಮಕ್ಕಿ ಗ್ರಾಮಸ್ಥರಲ್ಲಿ ಆತಂಕ ತೀರ್ಥಹಳ್ಳಿ: ಕುವೆಂಪು ಜೈವಿಕ ಅರಣ್ಯದಲ್ಲಿ ಹತ್ತಿಕೊಂಡ ಬೆಂಕಿ; ಅರಣ್ಯಾಧಿಕಾರಿಗಳ ದೌಡು ಝೂ ಅಭಿ ಇನ್ನಿಲ್ಲ: ಕಾಲು ನೋವಿನಿಂದ ಬಳಲುತ್ತಿದ್ದ ಮತ್ತಿಗೋಡು ಶಿಬಿರದ ಸಾಕಾನೆ ವಿವಿಧ ಬೇಡಿಕೆ ಆಗ್ರಹಿಸಿ ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಮಾ.11ರಂದು ಪ್ರತಿಭಟನೆ ಮೋದಿ ದೇಶದ ಮಾರ್ಯಾದೆ ಹಾಳು‌‌ ಮಾಡುತ್ತಿದ್ದಾರೆ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಟು‌… ಕಂಬಳಕ್ಕೆ ರಾಜ್ಯ ಸರಕಾರದಿಂದ ಹಣಕಾಸಿನ ನೆರವು: ಬಂಟ್ವಾಳದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ಹೈಕಮಾಂಡ್ ಸೂಚಿಸಿದರೆ ಕ್ಷಣಾರ್ಧದಲ್ಲಿ ಕುರ್ಚಿ ಬಿಡಲು ಸಿದ್ಧ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಜನಾಶೀರ್ವಾದವಿದ್ದರೆ ಮಾತ್ರ ಮುಖ್ಯಮಂತ್ರಿಯಾಗಲು ಸಾಧ್ಯ: ಮೈಸೂರಿನಲ್ಲಿ‌ ಸಿಎಂ ಸಿದ್ದರಾಮಯ್ಯ Kodagu | ಮಹಿಳೆಯ ಗರ್ಭಾಶಯದಲ್ಲಿ 7 ಕೆಜಿ ಗೆಡ್ಡೆ: ಶಸ್ತ್ರಚಿಕಿತ್ಸೆ ಮೂಲಕ ಹೊರಕ್ಕೆ Kodagu | ದೊಡ್ಡಕೊಡ್ಲಿ ಗ್ರಾಮದಲ್ಲಿ ಕೋವಿಯಿಂದ ಗುಂಡು ಸಿಡಿದು ಯುವಕ ಸಾವು

ಇತ್ತೀಚಿನ ಸುದ್ದಿ

ನನ್ನಜ್ಜ ಕಣ್ಣಪ್ಪ ನನ್ನ ಬರವಣಿಗೆಗೆ ಪ್ರಥಮ ಪ್ರೇರಣೆ: ಮುಂಬೈಯ ಪ್ರಸಿದ್ಧ ಕನ್ನಡ ಲೇಖಕಿ ಶ್ಯಾಮಲಾ ಮಾಧವ

09/09/2023, 23:34

ಮಂಗಳೂರು(reporterkarnataka.com):ನಾವೆಲ್ಲರೂ ಕಾನಾಟಿ (ಅರ್ಥಾತ್ ದಪ್ಪ ಕನ್ನಡಕ ಧರಿಸುವ) ಅಜ್ಜ ಎಂದೇ ಕರೆಯುತಿದ್ದ ನಮ್ಮಜ್ಜ ಲೂವಿಸ್ ಕಣ್ಣಪ್ಪನವರಿಂದಲೇ ನನ್ನ ಬರವಣಿಗೆಗೆ ಮೊದಲ ಪ್ರೇರಣೆ ದೊರೆಯಿತು ಎಂದು ಮುಂಬಯಿಯ ಖ್ಯಾತ ಕನ್ನಡ ಲೇಖಕಿ ಶ್ಯಾಮಲಾ ಮಾಧವ ಹೇಳಿದರು.


ಸಾಹಿತ್ಯ ಅಕಾಡೆಮಿ, ನವದೆಹಲಿ ಇವರು ಕೊಂಕಣಿ ಸಾಹಿತಿಗಳು ಮತ್ತು ಕಲಾವಿದರ ಸಂಘಟನೆಯ ಆಶ್ರಯದಲ್ಲಿ ನಗರದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಹಮ್ಮಿಕೊಂಡ ‘ಥ್ರೂ ಮೈ ವಿಂಡೋ’ ಕಾರ್ಯಕ್ರಮ ಸರಣಿಯಲ್ಲಿ ಕೊಂಕಣಿಯ ಪ್ರಪ್ರಥಮ ಪತ್ರಿಕೆ ದಿರ್ವೆಂ ಸ್ಥಾಪಕ – ವ್ಯವಸ್ಥಾಪಕ ಸರದಾರ ಲೂವಿಸ್ ಕಣ್ಣಪ್ಪ ಅವರ ಬದುಕು – ಬರೆಹದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ವಾತಂತ್ಯ ಪೂರ್ವದಲ್ಲಿ ಮದ್ರಾಸ್‌ ವಿದ್ಯಾನಿಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂಎ ಮತ್ತು ಎಲ್ ಟಿ ಪದವಿ ಪಡೆದಿದ್ದ ಲೂವಿಸ್ ಕಣ್ಣಪ್ಪನವರು ಮಂಗಳೂರು ಹಂಪನಕಟ್ಟೆಯ ಸರಕಾರಿ ಕಾಲೇಜಿನಲ್ಲಿ (ಇಂದಿನ ವಿಶ್ವವಿದ್ಯಾನಿಲಯ ಕಾಲೇಜು) ಪ್ರಾಂಶುಪಾಲರಾಗಿ, ನಂತರ ದಕ್ಷಿಣ ಕನ್ನಡ ಜಿಲ್ಲೆಯ ಶಿಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಗಣಿತ ಹಾಗೂ ಲ್ಯಾಟಿನ್ ಭಾಷೆಯಲ್ಲಿ ಸಂತ ಅಲೋಶಿಯಸ್ ಕಾಲೇಜಿಗೆ ಪ್ರಪ್ರಥಮ ಬಾರಿ ರ‍್ಯಾಂಕ್ ತಂದುಕೊಟ್ಟ ಲೂವಿಸ್ ಕಣ್ಣಪ್ಪನವರು – ನನ್ನಣ್ಣನಿಗೆ ಗಣಿತ ಮತ್ತು ನನಗೆ ಇಂಗ್ಲಿಷ್ ಸಾಹಿತ್ಯ ಕಲಿಸಿದ್ದರು. ಇಂಗ್ಲಿಷ್ ಸಾಹಿತ್ಯದಲ್ಲಿ ಅವರಲ್ಲಿ ಅಪಾರ ಪಾಂಡಿತ್ಯವಿತ್ತು ಎಂದು ಶ್ಯಾಮಲಾ ಮಾಧವ ನುಡಿದರು.
ಲೂವಿಸ್ ಕಣ್ಣಪ್ಪ ಅವರ ಭಾವಚಿತ್ರಕ್ಕೆ ಫುಷ್ಪನಮನ ಸಲ್ಲಿಸುವುದರ ಮೂಲಕ ಆರಂಭವಾದ ಕಾರ್ಯಕ್ರಮದಲ್ಲಿ ಸಾಹಿತ್ಯ ಅಕಾಡೆಮಿ, ನವದೆಹಲಿ ಇದರ ಕೊಂಕಣಿ ಭಾಷಾ ಸಲಹಾ ಸಮಿತಿ ಸದಸ್ಯ ಎಚ್. ಎಂ. ಪೆರ್ನಾಲ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತ ಕೋರಿ, ಶ್ಯಾಮಲಾ ಮಾಧವ ಅವರನ್ನು ಸಭೆಗೆ ಪರಿಚಯಿಸಿದರು. ಉಪನ್ಯಾಸದ ನಂತರ ಸಂವಾದ ಕಾರ್ಯಕ್ರಮ ನಡೆಯಿತು. ಸಂವಾದ ಕಾರ್ಯಕ್ರಮದಲ್ಲಿ ಶ್ಯಾಮಲಾ ಮಾಧವ ಸಹೋದರ ಎನ್. ಜಿ. ಮೋಹನ್ ಸಾಥ್ ನೀಡಿದರು.
ಸಾಹಿತ್ಯ ಅಕಾಡೆಮಿ, ನವ ದೆಹಲಿ ಕಾರ್ಯಕಾರಿ ಸಮಿತಿ ಸದಸ್ಯ, ಕೊಂಕಣಿ ವಿಭಾಗ ಮುಖ್ಯಸ್ಥ – ಕವಿ ಮೆಲ್ವಿನ್ ರೊಡ್ರಿಗಸ್, ಸಂತ ಅಲೋಶಿಯಸ್ ಕಾಲೆಜಿನ ಕೊಂಕಣಿ ಸಂಸ್ಥೆಯ ಮುಖ್ಯಸ್ಥ ವಂ| ಡಾ| ಮೆಲ್ವಿನ್ ಪಿಂಟೊ, ವಿಶನ್ ಕೊಂಕಣಿ ಪ್ರವರ್ತಕ, ಅನಿವಾಸಿ ಉದ್ಯಮಿ ಮೈಕಲ್ ಡಿ’ಸೋಜ, ಸಿಎಎಸ್ ಕೆ ಮಂಗಳೂರು ಇದರ ಅಧ್ಯಕ್ಷ ಕ್ಯಾಪ್ಟನ್ ವಿನ್ಸೆಂಟ್ ಫಾಯ್ಸ್, ಎಂಸಿಸಿ‌ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ, ಎಡುಕೇರ್ ವಿದ್ಯಾರ್ಥಿ ನಿಧಿಯ ಸಂಚಾಲಕಾರ ಸ್ಟೀವನ್ ಪಿಂಟೊ ಮತ್ತು ಓಸ್ವಲ್ಡ್ ರೊಡ್ರಿಗಸ್, ಕೊಂಕಣಿ ಸಾಹಿತಿಗಳು ಮತ್ತು ಕಲಾವಿದರ ಸಂಘಟನೆಯ ಅಧ್ಯಕ್ಷ ರೊನಾಲ್ಡ್ ಸಿಕ್ವೇರಾ, ಕಾರ್ಯದರ್ಶಿ ಪ್ಲೋರಿನ್ ರೋಚ್, ಕೋಶಾಧಿಕಾರಿ ರೋಶನ್ ಮಾಡ್ತಾ, ಲೂವಿಸ್ ಕಣ್ಣಪ್ಪ ಕುಟುಂಬದ ಸದಸ್ಯರು ಕಾರ್ಯಕ್ರಮಕ್ಕೆ ಹಾಜರಿದ್ದು ಲೂವಿಸ್ ಕಣ್ಣಪ್ಪರವರ ಭಾವಚಿತ್ರಕ್ಕೆ ಪುಷ್ಪ ನಮನದ ಮೂಲಕ ಗೌರವಾರ್ಪಣೆ ಸಲ್ಲಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು