ಇತ್ತೀಚಿನ ಸುದ್ದಿ
ಭಯೋತ್ಪಾದಕ ಚಟುವಟಿಕೆಯ ಶಂಕೆ: ಶಂಕಿತ ವ್ಯಕ್ತಿಯ ಬಂಧನ; ಬೇಹುಗಾರ ಸಂಸ್ಥೆ ಜತೆ ಪೊಲೀಸ್ ಕಾರ್ಯಾಚರಣೆ
11/02/2023, 13:56

ಬೆಂಗಳೂರು(reporterkarnataka.com): ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳ ಜತೆ ಸಂಪರ್ಕ ಹೊಂದಿರುವ ಖಚಿತ ಮಾಹಿತಿ ಮೇರೆಗೆ ರಾಜ್ಯ ಪೊಲೀಸರು ವ್ಯಕ್ತಿಯೊಬ್ಬನನ್ನು ಶನಿವಾರ ಬೆಳಗ್ಗೆ ವಶಕ್ಕೆ ಪಡೆದಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಬಂಧಿತ ಆರೋಪಿ ಆರೀಫ್ ಎಂಬಾತ ಎಂದು ತಿಳಿದು ಬಂದಿದೆ. ಈತ ವಿದೇಶ ಪ್ರಯಾಣಕ್ಕೆ ತಯಾರಿ ನಡೆಸಿದ್ದ. ಅಷ್ಟರಲ್ಲಿಯೇ ಪೊಲೀಸರು, ವಶಕ್ಕೆ ಪಡೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯ ಪೊಲೀಸರು ಕೇಂದ್ರದ ಬೇಹುಗಾರಿಕೆ ಸಂಸ್ಥೆಯ ಅಧಿಕಾರಿಗಳ ಸಹಯೋಗದ ಜತೆಗೆ ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.
ದೇಶದಲ್ಲಿ ಕೋಮು ಭಾವನೆ ಕೆರಳಿಸಿ ಅಸ್ಥಿರತೆ ಉಂಟು ಮಾಡುತ್ತಿರುವ ಸಂಘಟನೆಗಳೂ ಹಾಗೂ ಅವುಗಳ ಸಂಪರ್ಕ ಹೊಂದಿರುವ ವ್ಯಕ್ತಿಗಳ ಬಗ್ಗೆ, ಸದಾ ಕಣ್ಗಾವಲು ಇರಿಸಿದ್ದು, ದೇಶವನ್ನು ದುರ್ಬಲಗೊಳಿಸುವ ಎಲ್ಲಾ ಪ್ರಯತ್ನಗಳನ್ನು, ಹತ್ತಿಕ್ಕಲಾಗುವುದು ಎಂದರು ತಿಳಿಸಿದರು.