ಇತ್ತೀಚಿನ ಸುದ್ದಿ
ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ: ಸಚಿವ ಬಿ.ನಾಗೇಂದ್ರ ವಿರುದ್ಧ ಸಿಬಿಐ ಸಲ್ಲಿಸಿದ ಚಾರ್ಜ್ಶೀಟ್ನಲ್ಲಿ ಸ್ಪೋಟಕ ಮಾಹಿತಿ ಬಹಿರಂಗ
19/08/2026, 17:57
ಬೆಂಗಳೂರು(reporterkarnataka.com): ಬೆಂಗಳೂರಿನಲ್ಲಿ ಕರ್ನಾಟಕ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ತನ್ನ ಸುದೀರ್ಘ ತನಿಖೆಯ ನಂತರ ತನಿಖಾ ವರದಿಯನ್ನು ನೀಡಿದ್ದು, ಇದೀಗ ಸಚಿವ ಬಿ. ನಾಗೇಂದ್ರ ಅವರ ಸುತ್ತ ಕಾನೂನು ಕುಣಿಕೆ ಮತ್ತಷ್ಟು ಬಿಗಿಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಹೊಸ ದೋಷಾರೋಪ ಪಟ್ಟಿ (ಚಾರ್ಜ್ಶೀಟ್) ಸಲ್ಲಿಸಿದ್ದು, ಇದರಲ್ಲಿ ಸಾಕ್ಷ್ಯಾಧಾರ ಸಹಿತ ಹಲವು ಪ್ರಮುಖ ವಿಚಾರಗಳನ್ನು ಉಲ್ಲೇಖಿಸಲಾಗಿದೆ.
*₹89.63 ಕೋಟಿ ಅಕ್ರಮ ವರ್ಗಾವಣೆ: 13 ಜನರ ವಿರುದ್ಧ ದೋಷಾರೋಪ*
ನಿಗಮಕ್ಕೆ ಸೇರಿದ ಬರೋಬ್ಬರಿ ₹89.63 ಕೋಟಿ ಸಾರ್ವಜನಿಕರ ಹಣವನ್ನು ನಕಲಿ ಚೆಕ್ಗಳು ಹಾಗೂ ಆರ್ಟಿಜಿಎಸ್ (RTGS) ಮೂಲಕ ಕಾನೂನುಬಾಹಿರವಾಗಿ ವರ್ಗಾಯಿಸಲಾಗಿದೆ ಎಂದು ತನಿಖೆಯಿಂದ ತಿಳಿದು ಬಂದಿದೆ. ಪ್ರಕರಣದಲ್ಲಿ ಸಚಿವ ಬಿ. ನಾಗೇಂದ್ರ ಅವರೊಂದಿಗೆ ಒಟ್ಟು 13 ಜನರನ್ನು ಮುಖ್ಯ ಆರೋಪಿಗಳನ್ನಾಗಿ ಹೆಸರಿಸಲಾಗಿದ್ದು, ಸರ್ಕಾರಿ ಹಾಗೂ ಸಾರ್ವಜನಿಕ ನಿಧಿಯನ್ನು ದುರ್ಬಳಕೆ ಮಾಡಿಕೊಂಡಿರುವ ಕುರಿತು ವಿವರವಾದ ದೋಷಾರೋಪ ಪಟ್ಟಿಯಲ್ಲಿ ದಾಖಲಿಸಲಾಗಿದೆ. ತನಿಖಾಧಿಕಾರಿಗಳ ಕಣ್ಣು ತಪ್ಪಿಸಲು 600 ನಕಲಿ ಖಾತೆಗಳ ಬಳಕೆ
ಬೃಹತ್ ಮೊತ್ತದ ಅಕ್ರಮ ಹಣ ವರ್ಗಾವಣೆಯನ್ನು ಮುಚ್ಚಿಡಲು ಹಾಗೂ ತನಿಖಾ ಸಂಸ್ಥೆಗಳ ಕಣ್ಣು ತಪ್ಪಿಸಲು ಆಯೋಜಿತ ಯೋಜನೆಯನ್ನು ರೂಪಿಸಲಾಗಿತ್ತು. ಇದಕ್ಕಾಗಿ ಹೈದರಾಬಾದ್ ಸೇರಿದಂತೆ ಪ್ರಮುಖ ನಗರಗಳ ಸುಮಾರು 600ಕ್ಕೂ ಹೆಚ್ಚು ನಕಲಿ ಹಾಗೂ ಬೇನಾಮಿ ಬ್ಯಾಂಕ್ ಖಾತೆಗಳನ್ನು ಸೃಷ್ಟಿಸಲಾಗಿತ್ತು. ನಿಗಮದ ಖಾತೆಯಿಂದ ಹಂತ ಹಂತವಾಗಿ ಈ ನಕಲಿ ಖಾತೆಗಳಿಗೆ ಹಣವನ್ನು ರವಾನಿಸಿ, ಬಳಿಕ ಅದನ್ನು ಹಿಂಪಡೆಯಲಾಗಿತ್ತು ಎಂಬುದು ಸಿಬಿಐ ತನಿಖೆಯಲ್ಲಿ ಬಹಿರಂಗವಾಗಿದೆ.
*ಚುನಾವಣಾ ವೆಚ್ಚ, ಬೆಳ್ಳಿ ಹಾಗೂ ಐಷಾರಾಮಿ ವಸ್ತುಗಳ ಖರೀದಿ*
ಅಕ್ರಮವಾಗಿ ಲೂಟಿ ಮಾಡಿದ ಈ ಕೋಟ್ಯಂತರ ರೂಪಾಯಿ ಹಣವನ್ನು ನಗದಾಗಿ ಡ್ರಾ ಮಾಡಿಕೊಂಡು, ವಿವಿಧ ಉದ್ದೇಶಗಳಿಗೆ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಮುಖ್ಯವಾಗಿ ಬಳ್ಳಾರಿ ಲೋಕಸಭಾ ಚುನಾವಣೆಯ ವೆಚ್ಚಗಳು ಹಾಗೂ ಮತದಾರರ ಮೇಲೆ ಪ್ರಭಾವ ಬೀರಲು ಈ ಹಣವನ್ನು ಬಳಸಲಾಗಿದೆ ಎಂದು ಸಿಬಿಐ ಉಲ್ಲೇಖಿಸಿದೆ. ಅಷ್ಟೇ ಅಲ್ಲದೆ, ಈ ಹಣದಿಂದ ಐಷಾರಾಮಿ ವಾಹನಗಳು, ಅಪಾರ ಪ್ರಮಾಣದ ಬೆಳ್ಳಿ ಆಭರಣಗಳು ಮತ್ತು ಆಸ್ತಿ-ಪಾಸ್ತಿಗಳನ್ನು ಖರೀದಿಸಿರುವುದು ತನಿಖೆಯಲ್ಲಿ ಸಾಬೀತಾಗಿದೆ.












