ಇತ್ತೀಚಿನ ಸುದ್ದಿ
ಬೆಂಗಳೂರು: ಮಹಿಳೆ ಜತೆ ಅಸಭ್ಯ ವರ್ತನೆ; ಡೆಲಿವರಿ ಬಾಯ್ ಬಂಧನ
13/07/2026, 10:13
ಬೆಂಗಳೂರು(reporterkarnataka.com): ನಗರದ ಐಟಿ ವಲಯದ ಪ್ರಮುಖ ಪ್ರದೇಶವಾದ ಮಾರತ್ಹಳ್ಳಿಯಲ್ಲಿ ಆರ್ಡರ್ ತಲುಪಿಸಲು ಬಂದು ಒಂಟಿ ಮಹಿಳೆಯಿದ್ದ ಫ್ಲ್ಯಾಟ್ಗೆ ಬಲವಂತವಾಗಿ ನುಗ್ಗಿ, ಅಸಭ್ಯವಾಗಿ ವರ್ತಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಈ ಸಂಬಂಧ ನೊಂದ ಮಹಿಳೆ ನೀಡಿದ ದೂರಿನ ಮೇರೆಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಮಾರತ್ಹಳ್ಳಿ ಠಾಣೆ ಪೊಲೀಸರು, ಆರೋಪಿ ಡೆಲಿವರಿ ಏಜೆಂಟ್ ವಿಜಯ್ ಮಲ್ಲಿಕಾರ್ಜುನ್ ಕಾಮತ್ (22) ಎಂಬಾತನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ. ಬೆಂಗಳೂರಿನ ಮಾರತ್ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಅಪಾರ್ಟ್ಮೆಂಟ್ ಒಂದರಲ್ಲಿ ಈ ಘಟನೆ ನಡೆದಿದೆ. ಮಹಿಳೆಗೆ ಆರ್ಡರ್ ತಲುಪಿಸಲು ಬಂದಿದ್ದ ಡೆಲಿವರಿ ಏಜೆಂಟ್ ವಿಜಯ್, ತುರ್ತಾಗಿ ಶೌಚಾಲಯ ಬಳಸಬೇಕೆಂದು ಅನುಮತಿ ಕೇಳಿದ್ದಾನೆ. ಆದರೆ ಅಪರಿಚಿತರನ್ನು ಮನೆಯೊಳಗೆ ಬಿಟ್ಟುಕೊಳ್ಳಲು ಒಪ್ಪದ ಮಹಿಳೆ, ತೀರಾ ತುರ್ತು ಪರಿಸ್ಥಿತಿಯಿದ್ದರೆ ಪಕ್ಕದ ಫ್ಲ್ಯಾಟ್ನಲ್ಲಿರುವ ಪುರುಷ ನಿವಾಸಿಗಳ ಬಳಿ ಕೇಳುವಂತೆ ನಯವಾಗಿಯೇ ಸಲಹೆ ನೀಡಿದ್ದಾರೆ. ಆದಾಗ್ಯೂ, ಮಹಿಳೆಯ ನಿರಾಕರಣೆಯನ್ನು ಕಡೆಗಣಿಸಿದ ಆರೋಪಿ, ಹೊರಗಡೆ ತನ್ನ ಚಪ್ಪಲಿಗಳನ್ನು ಬಿಟ್ಟು ಬಲವಂತವಾಗಿ ಫ್ಲ್ಯಾಟ್ ಒಳಗಡೆ ನುಗ್ಗಿದ್ದಾನೆ.
ಬಲವಂತವಾಗಿ ಶೌಚಾಲಯಕ್ಕೆ ನುಗ್ಗಿದ ಆರೋಪಿ, ಅಲ್ಲಿಂದ ಹೊರಬಂದ ತಕ್ಷಣವೇ ಮಹಿಳೆಯ ಎದುರು ತನ್ನ ಖಾಸಗಿ ಅಂಗ ಪ್ರದರ್ಶಿಸಿ ವಿಕೃತವಾಗಿ ವರ್ತಿಸಿದ್ದಾನೆ. ಈ ಹಠಾತ್ ಬೆಳವಣಿಗೆಯಿಂದ ಮಹಿಳೆ ತೀವ್ರ ದಿಗ್ಭ್ರಮೆಗೊಂಡಿದ್ದಾರೆ. “ನನ್ನದೇ ಮನೆಯಲ್ಲಿ ನನಗೆ ತೀವ್ರ ಅವಮಾನ ಮತ್ತು ಅಸುರಕ್ಷತೆಯ ಭಾವನೆ ಕಾಡುವಂತಾಯಿತು” ಎಂದು ನೊಂದ ಮಹಿಳೆ ತಮಗಾದ ಭೀಕರ ಅನುಭವವನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ಘಟನೆಯಿಂದ ತೀವ್ರ ಭಯಭೀತರಾಗಿದ್ದರೂ ಧೈರ್ಯ ಕಳೆದುಕೊಳ್ಳದ ಮಹಿಳೆ, ಪ್ರಾಣರಕ್ಷಣೆಗಾಗಿ ಹಾಗೂ ಆರೋಪಿಯ ಕೃತ್ಯಕ್ಕೆ ಸಾಕ್ಷಿ ಒದಗಿಸಲು ತಕ್ಷಣವೇ ತಮ್ಮ ಮೊಬೈಲ್ ಫೋನ್ನಲ್ಲಿ ಇಡೀ ಘಟನೆಯನ್ನು ಸೆರೆಹಿಡಿದಿದ್ದಾರೆ. ಬಳಿಕ ತಮಗಾದ ಆಘಾತಕಾರಿ ಅನುಭವದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಪ್ರತಿನಿತ್ಯ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳ ಬಗ್ಗೆ ಕೇಳುವಾಗ, ಇಂತಹ ಪರಿಸ್ಥಿತಿ ತಮಗೆ ಎದುರಾದಾಗ ತೀವ್ರ ಭಯವಾಯಿತು ಎಂದು ಅವರು ಸಾಮಾಜಿಕ ಜಾಲತಾಣದ ಪೋಸ್ಟ್ನಲ್ಲಿ ಬರೆದುಕೊಂಡಿದ್ದರು.
ಮಹಿಳೆಯ ಸಾಮಾಜಿಕ ಜಾಲತಾಣದ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಬೆಂಗಳೂರು ನಗರ ಪೊಲೀಸರು ತಕ್ಷಣವೇ ಸ್ಪಂದಿಸಿ, ಘಟನೆಯ ಸಂಪೂರ್ಣ ವಿವರಗಳನ್ನು ಹಂಚಿಕೊಳ್ಳುವಂತೆ ಸೂಚಿಸಿದರು. ತದನಂತರ ಮಹಿಳೆಯಿಂದ ಅಧಿಕೃತ ದೂರು ಪಡೆದ ಮಾರತ್ಹಳ್ಳಿ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಹೆಡೆಮುರುಡು ಕಟ್ಟಿದ್ದಾರೆ. ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಕಾಯ್ದೆಯ ಕಲಂ 75, 79 ಹಾಗೂ 329(2) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ ಎಂದು ವೈಟ್ಫೀಲ್ಡ್ ವಿಭಾಗದ ಡಿಸಿಪಿ ಸೈದುಲು ಅಡಾವತ್ ಅವರು ಮಾಹಿತಿ ನೀಡಿದ್ದಾರೆ.












